ಅಪರಿಚಿತರಿಂದ ಬಸ್ಗೆ ಹಾನಿ
ಅಂಕೋಲಾ, ಮೇ 22 : ತಾಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಹಾರವಾಡದಲ್ಲಿ ಬೈಕ್ನಲ್ಲಿ ಆಗಮಿಸಿದ ಅಪರಿಚಿತರು ಖಾಸಗಿ ಬಸ್ನ ಗ್ಲಾಸ್ಗೆ ಕಲ್ಲು ಮತ್ತು ಕಬ್ಬಿಣದ ರಾಡ್ನಿಂದ ಹೊಡೆದು ಹಾನಿಗೊಳಿಸಿದ ಘಟನೆ ರವಿವಾರ ತಡರಾತ್ರಿ ನಡೆದಿದೆ.
ಸೀಬರ್ಡ್ ಸಂಸ್ಥೆಯ ಕೆಎ01, ಎಬಿ-7426 ನೋಂದಣಿಯ ಖಾಸಗಿ ಬಸ್ ಗೋವಾದಿಂದ ಬೆಂಗಳೂರಿಗೆ ಹೊರಟಿತ್ತು. ತಡರಾತ್ರಿ 12.30 ಗಂಟೆಯ ಸುಮಾರಿಗೆ ಪ್ರಯಾಣಿಕನೋರ್ವನ ವಿನಂತಿಯ ಮೇರೆಗೆ ಹಾರವಾಡದಲ್ಲಿ ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗಿತ್ತು. ಇದೇ ಸಂದರ್ಭದಲ್ಲಿ 4 ಬೈಕ್ಗಳಲ್ಲಿ 8 ಜನರು ಆಗಮಿಸಿದ್ದು, ಕಲ್ಲು ಮತ್ತು ಕಬ್ಬಿಣದ ರಾಡ್ನ್ನು ಬಳಸಿ ಬಸ್ನ ಗಾಜುಗಳನ್ನು ಒಡೆದು ಹಾನಿಗೊಳಿಸಿದ್ದಾರೆ. ಇದಲ್ಲದೆ ಬಸ್ನ ಚಾಲಕ ಮತ್ತು ನಿರ್ವಾಹಕನಿಗೆ ಅವಾಚ್ಯ ಶಬ್ದಗಳಿಂದ ಬೈದು ಪರಾರಿಯಾಗಿದ್ದಾರೆ.
ಈ ಘಟನೆ ನಡೆದ ತಕ್ಷಣ ಅಂಕೋಲಾ ಪೊಲೀಸ್ ಠಾಣೆಗೆ ಬಸ್ನ ಚಾಲಕ ಹಾವೇರಿ ಜಿಲ್ಲೆಯ ಸವಣೂರಿನ ನಿವಾಸಿ ಪ್ರಶಾಂತ ಈರಪ್ಪ ಹಕ್ಕಿ ವಿಷಯವನ್ನು ತಿಳಿಸಿದ್ದು, ಸಿಪಿಐ ಬಸಪ್ಪ ಬುರ್ಲಿ, ಪಿಎಸ್ಐ ಎಚ್. ಓಂಕಾರಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೆೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕೃತ್ಯಕ್ಕಾಗಿ ಆಗಮಿಸಿದ್ದ ಬೈಕ್ಗಳಲ್ಲಿ ಒಂದು ಬೈಕ್ನ ನಂಬರ ಕೆಎ.30,ವಿ.4989 ಎಂದು ಗುರುತಿಸಲಾಗಿದೆ.
ಈ ಕುರಿತು ಪ್ರಕರಣ ದಾಖಲಿಸಿ ಕೊಂಡಿದ್ದು, ಪೋಲಿಸರು ಮುಂದಿನ ತನಿಖೆಯನ್ನು ನಡೆಸುತ್ತಿದ್ದಾರೆ.