ಮರಕ್ಕೆ ಕಾರು ಢಿಕ್ಕಿ: ಬೆಂಗಳೂರಿನ ಇಬ್ಬರ ಸಾವು; ಐವರಿಗೆ ಗಾಯ

Update: 2017-05-23 17:24 GMT

ಶಿವಮೊಗ್ಗ, ಮೇ 23: ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟು, ಇಬ್ಬರು ಮಕ್ಕಳು ಸೇರಿದಂತೆ ಐವರು ಗಾಯಗೊಂಡ ಘಟನೆ ಸಾಗರ ತಾಲೂಕಿನ ಬೇಸೂರು ಗ್ರಾಮದ ಬಳಿ ಮಂಗಳವಾರ ಮುಂಜಾನೆ ವರದಿಯಾಗಿದೆ. ಬೆಂಗಳೂರಿನ ಸುಂಕದಕಟ್ಟೆಯ ನಿವಾಸಿಗಳಾದ ಪ್ರವೀಣ್(28) ಹಾಗೂ ಆದರ್ಶ್ (25) ಮೃತಪಟ್ಟವರೆಂದು ಗುರುತಿಸಲಾಗಿದೆ.ಇವರು ಬೆಂಗಳೂರಿನ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಅವಘಡದಲ್ಲಿ ಎಂಟು ಹಾಗೂ ಒಂಬತ್ತು ವರ್ಷ ಪ್ರಾಯದ ಇಬ್ಬರು ಮಕ್ಕಳು ಸೇರಿದಂತೆ ಐವರು ಗಾಯಗೊಂಡಿದ್ದು, ಇವರು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ಪೊಲೀಸ್ ಇಲಾಖೆ ಮೂಲಗಳು ಮಾಹಿತಿ ನೀಡಿವೆ. ಧಾರ್ಮಿಕ ಕ್ಷೇತ್ರ ಸಿಗಂದೂರು ದೇವಾಲಯಕ್ಕೆ ತೆರಳಲು ಇವರೆಲ್ಲರೂ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಸಬ್‌ಇನ್‌ಸ್ಪೆಕ್ಟರ್ ಸುರೇಶ್ ಮತ್ತು ಸಿಬ್ಬಂದಿ ಭೇಟಿಯಿತ್ತು, ಪರಿಶೀಲನೆ ನಡೆಸಿದರು. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ಶಿವಮೊಗ್ಗ

contributor

Editor - ಶಿವಮೊಗ್ಗ

contributor

Similar News