​ಲಕ್ಷಾಂತರ ಮೌಲ್ಯದ ನಗ-ನಗದು ಕಳವು

Update: 2017-05-27 11:04 GMT

ಎನ್.ಆರ್.ಪುರ, ಮೇ 27: ಮನೆಯೊಂದರಲ್ಲಿ ಯಾರೂ ಇಲ್ಲದಿರುವ ಸಮಯದಲ್ಲಿ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಲಕ್ಷಾಂತರ ಮೌಲ್ಯದ ನಗ-ನಗದು ಕಳ್ಳತನ ಮಾಡಿರುವ ಘಟನೆ ರಾಘವೇಂದ್ರ ಬಡಾವಣೆಯಲ್ಲಿ ನಡೆದಿದೆ.
 

ರಾಘವೇಂದ್ರನಗರ ಬಡಾವಣೆಯ ಹರೀಶ್ ಶೆಟ್ಟಿ ಎಂಬವರ ಮನೆಯಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮನೆಯ ಒಳಗೆ ಗೋದ್ರೇಜ್ ಬೀರು ಒಡೆದಿರುವ ಕಳ್ಳರು 1 ಲಕ್ಷ ರೂ.ಗಳ ಬಾಂಡ್, ಕೆನಾರಾ ಬ್ಯಾಂಕ್, ವಿಜಯ ಬ್ಯಾಂಕ್, ಸ್ಟೇಟ್‌ಬ್ಯಾಂಕ್, ಪೋಸ್ಟಾಪೀಸ್‌ಗಳ ಪಾಸ್ ಪುಸ್ತಕಗಳನ್ನು ಕಳ್ಳತನ ಮಾಡಿದ್ದಾರೆ.

ಅಲ್ಲದೇ ಹರೀಶ್, ಅವರ ಪತ್ನಿ ಪುಷ್ಪಲತಾ ಹಾಗೂ ಅನನ್ಯ, ಅನ್ವಿತಾ ಎಂಬ ಇಬ್ಬರು ಮಕ್ಕಳ ಪಾಸ್‌ಪೋಟ್‌ಗಳನ್ನು ಕಳವು ಮಾಡಲಾಗಿದೆ.

20 ಸಾವಿರ ರೂ. ನಗದು, 20 ಗ್ರಾಂ ತೂಕದ ಬಂಗಾರದ 2 ಬಳೆಗಳು, 60 ಗ್ರಾಂ ತೂಕದ ಹವಳದ ಸರ, 40 ಗ್ರಾಂ ತೂಕದ ಮಕ್ಕಳ 3 ಸರ, 25 ಗ್ರಾಂ ತೂಕದ ಬಂಗಾರದ ತಾಳಿ ಸರ, 4 ಗ್ರಾಂ ತೂಕದ ಬಳೆ, 15 ಗ್ರಾಂನ ಕಿವಿಯೋಲೆ, 10 ರಿಂದ 20 ಗ್ರಾಂನ 2 ಕಾಲು ಚೈನು, 30 ಗ್ರಾಂನ ಬಂಗಾರದ ಓಲೆಗಳನ್ನು ಕಳ್ಳತನ ಮಾಡಲಾಗಿದೆ.

ಇವುಗಳ ಒಟ್ಟು ಮೌಲ್ಯ ಸುಮಾರು 6 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಿ ತಪಾಷಣೆ ನಡೆಸಲಾಗಿದೆ. ಘಟನೆ ಕುರಿತು ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News