ಮೃತ್ತಿಕಾ ಬೃಂದಾವನ ಪ್ರತಿಷ್ಠಾಪನಾ ಸುವರ್ಣ ಮಹೋತ್ಸವ

Update: 2017-06-04 10:46 GMT

ಚಿಕ್ಕಮಗಳೂರು,ಜೂ.4: ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮೃತ್ತಿಕಾ ಬೃಂದಾವನ ಪ್ರತಿಷ್ಠಾಪನಾ ಸುವರ್ಣ ಮಹೋತ್ಸವ ಸಹಸ್ರಾರು ಭಕ್ತರ ನಡುವೆ ಭಾನುವಾರ ಧಾರ್ಮಿಕ ವಿಧಿವಿಧಾನಗಳೊಂದಿಗೆ ವೈಭವದಿಂದ ನಡೆಯಿತು.


 ಬೆಳಿಗ್ಗೆ ಸುಪ್ರಭಾತ ಸೇವೆಯ ನಂತರ ಬೆಂಗಳೂರಿನ ಮಾಧ್ವ ಸಂಸ್ಥಾನದ ಶ್ರೀ ಸುವಿದ್ಯೇಂದ್ರತೀರ್ಥ ಸ್ವಾಮೀಜಿ ಅವರು ಶ್ರೀ ರಾಘವೇಂದ್ರಸ್ವಾಮಿಗಳ ಬೃಂದಾವನಕ್ಕೆ ಪಂಚ ಅಮೃತಗಳಾದ ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಕ್ಕರೆ ಮತ್ತು ವಿವಿಧ ಫಲಗಳಿಂದ ಸ್ವತಃ ಅಭಿಷೇಕ ನೆರವೇರಿಸಿದರು.


 ಇದೇ ವೇಳೆ ಶ್ರೀಮಠದ ವತಿಯಿಂದ ಶ್ರೀಗಳಿಗೆ ಪಾದಪೂಜೆ ಸಲ್ಲಿಸಲಾಯಿತು, ನಂತರ ಶ್ರೀ ಸುವಿದ್ಯೇಂದ್ರತೀರ್ಥ ಸ್ವಾಮೀಜಿ ಅವರು ಸಂಸ್ಥಾನ ಪೂಜೆ ನೆರವೇರಿಸಿದರು.ಈ ವೇಳೆ ಭಕ್ತರಿಂದ ಸಾಮೂಹಿಕ ಭಜನೆ, ಸ್ತೋತ್ರ ಪಠಣ ನಡೆಯಿತು. ಗುರುರಾಯರ ಪ್ರಾಕಾರೋತ್ಸವ, ಅಷ್ಟಾವಧಾನ ಸೇವೆ ಜರುಗಿತು. ಮಹಾಮಂಗಳಾರತಿ ನಂತರ ಶ್ರೀಗಳು ಭಕ್ತರಿಗೆ ಫಲ ಮಂತ್ರಾಕ್ಷತೆ ವಿತರಿಸಿದರು. ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.


 ಇದಕ್ಕೂ ಮುನ್ನ ಶನಿವಾರ ಸಂಜೆ ಶ್ರೀಮದ್ ಭಾಗವತದ ಸಾರ ವಿಷಯ ಕುರಿತು ಪ್ರವಚನ ನೀಡಿದ ಶ್ರೀ ಸುವಿದ್ಯೇಂದ್ರತೀರ್ಥ ಸ್ವಾಮೀಜಿ ಭಗವಂತನ ಧ್ಯಾನ ಮತ್ತು ಪುರಾಣ ಕಥೆಗಳ ಶ್ರವಣದಿಂದ ಮನುಷ್ಯ ತ್ರಿಕರಣಗಳು ಶುದ್ದವಾಗುತ್ತವೆ.ಸಂಚಿತ ಪಾಪದ ಪರಿಹಾರಕ್ಕಾಗಿ ಎಲ್ಲರೂ ಪ್ರತಿನಿತ್ಯ ಭಗಂತನ ನಾಮಸ್ಮರಣೆ ಮತ್ತು ಭಾಗವತದ ಶ್ರವಣ ಮಾಡಬೇಕು ಡಂದು ನುಡಿದರು.


 ಶ್ರೀ ರಾಘವೇಂದ್ರ ಗುರುಸಾರ್ವಭೌಮರು ದಯಾಸಮುದ್ರರು, ಮಹಾಕರುಣಾಳು, ಅದಮ್ಯ ಮಹಿಮರು ಮತ್ತು ಕಲಿಯುಗದ ಕಾಮಧೇನು ಕಲ್ಪವೃಕ್ಷ. ಶ್ರೀ ರಾಘವೇಂದ್ರಸ್ವಾಮಿಗಳ ಬೃಂದಾವನದಲ್ಲಿ ಶ್ರೀರಾಮ, ನರಸಿಂಹ, ವೇದ ವ್ಯಾಸ, ಕೃಷ್ಣ, ಹಯಗ್ರೀವ ಸೇರಿದಂತೆ ಅನೇಕ ದೇವತೆಗಳು ನೆಲೆಸಿದ್ದಾರೆ ಎಂದು ತಿಳಿಸಿದರು.


 ಸುವರ್ಣ ಮಹೋತ್ಸವದ ಅಂಗವಾಗಿ ನಡೆಸಲಾದ ಭಗವದ್ಗೀತೆ ಕಂಠ ಪಾಠ ಸ್ವರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.ಬೆಳಗಿನಿಂದ ಸಂಜೆಯವರೆಗೆ ಸಹಸ್ರಾರು ಭಕ್ತರು ಬೃಂದಾವನದ ದರ್ಶನ ಪಡೆದು ಪೂಜೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News