×
Ad

ವಿವಾದದಿಂದ ದೂರ ಉಳಿದ ಸಚಿವ ಪಾಟೀಲ್

Update: 2017-06-04 22:35 IST

ಮಡಿಕೇರಿ, ಜೂ.4 : ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆ, ಬೆಳೆಯಾಗಲಿ ಎಂದು ಪ್ರಾರ್ಥಿಸಲು ನೀರಾವರಿ ಸಚಿವ ಎಂ.ಬಿ.ಪಾಟೀಲ್ ಸಲಹೆ ಮೇರೆಗೆ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಬಸವರಾಜ್, ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಪತ್ನಿ ಜಯಶ್ರೀ ಸಮೇತರಾಗಿ ಪರ್ಜನ್ಯ ಜಪ ನಡೆಸಿದರು.
ವರುಣನ ಕೃಪೆಗಾಗಿ ತಲಕಾವೇರಿಯಲ್ಲಿ ಪರ್ಜನ್ಯ ಜಪ ಆಯೋಜನೆ ಮಾಡಿದ್ದ ಸಚಿವ ಎಂ.ಬಿ.ಪಾಟೀಲ್ ವಿವಾದದಿಂದ ದೂರ ಉಳಿದು, ಇಂಜಿನಿಯರ್‌ಗಳ ಮೂಲಕ ಪರ್ಜನ್ಯ ಜಪ ಮಾಡಿಸಿದ್ದಾರೆ.


ಕಾರ್ಯಪಾಲಕ ಇಂಜಿನಿಯರ್ ಬಸವರಾಜ್ ಹಾಗೂ ಪತ್ನಿ ಜಯಶ್ರೀ ಪರ್ಜನ್ಯ ಜಪ ನಡೆಸಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅರ್ಚಕ ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ಮುಂಜಾನೆ 9 ಗಂಟೆಯಿಂದ 11 ಗಂಟೆಯವರೆಗೆ ಪೂಜಾ ವಿಧಿ ವಿಧಾನಗಳು ನಡೆದವು.


ಮಳೆಗಾಗಿ ಪೂಜೆ ಮಾಡುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ವಿರೋಧ ವ್ಯಕ್ತವಾದ ಕಾರಣ ವೈಯಕ್ತಿಕವಾಗಿ ಪೂಜೆ ಮಾಡಿಸುವುದಾಗಿ ಸಚಿವ ಎಂ.ಬಿ.ಪಾಟಿಲ್ ಹೇಳಿದ್ದರು ಎನ್ನಲಾಗಿದೆ.

ಮಧ್ಯಾಹ್ನದ ನಂತರ ತಲಕಾವೇರಿ-ಭಾಗಮಂಡಲ ಕ್ಷೇತ್ರಕ್ಕೆ ಭೇಟಿ ನೀಡಿದ ಅವರು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಬಾಗೀನ ಅರ್ಪಿಸಿದರು. ತಲಕಾವೇರಿಯಲ್ಲಿ ಅವರ ಶ್ರೀಮತಿ ಸಮೇತ ಪೂಜೆ ಸಲ್ಲಿಸಿದರು.
 
ನಂತರ ಮಾತನಾಡಿದ ಸಚಿವ ಪಾಟೀಲ್, ಕಾವೇರಿ ನಾಡಿನಲ್ಲಿ ಉತ್ತಮ ಮಳೆಯಾದರೆ ಕರ್ನಾಟಕ ರಾಜ್ಯಕ್ಕೆ ಕುಡಿಯಲು ನೀರು ದೊರೆಯುತ್ತದೆ, ಅಲ್ಲದೆ ಉತ್ತಮ ಕೃಷಿ ಫಸಲಿನಿಂದ ನಾಡು ಸಮೃದ್ಧಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಆದಿಚುಂಚನಗಿರಿಯ ಶ್ರೀನಿರ್ಮಲಾನಂದ ಸ್ವಾಮೀಜಿ, ಕರವೇ ಅಧ್ಯಕ್ಷ ನಾರಾಯಣ ಗೌಡ ಮತ್ತಿತರರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News