ಬ್ಯಾಂಕ್ ಮ್ಯಾನೇಜರ್ ನಿಂದ ವಂಚನೆ: ಧರಣಿ ಸತ್ಯಾಗ್ರಹ
ಸೊರಬ, ಜೂ.5: ತಾಲೂಕಿನ ತತ್ತೂತು ಗ್ರಾಮದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ಮನೆ ಸಾಲದ ಮಂಜೂರಾತಿಯಲ್ಲಿ ಒಂದು ಲಕ್ಷ ರೂಪಾಯಿಗಳ ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿ ನ್ಯಾಯಕೊಡಿಸುವಂತೆ ಆಗ್ರಹಿಸಿ, ರೈತ ಸಂಘದ ಬೆಂಬಲದೊಂದಿಗೆ ಗ್ರಾಹಕರೋರ್ವರು ಬ್ಯಾಂಕಿನ ಮುಂಭಾಗದಲ್ಲಿ ಸೋಮವಾರ ನಿರಂತರ ಧರಣಿ ಸಂತ್ಯಾಗ್ರಹವನ್ನು ಆರಂಭಿಸಿದ್ದಾರೆ.
ತತ್ತೂರು ಗ್ರಾಮದ ಆರ್.ಪಿ.ಕಮಲಮ್ಮ ಎಂಬುವರು ಮನೆ ಕಟ್ಟಲೆಂದು ಸಾಲಕ್ಕಾಗಿ ತತ್ತೂರು ಗ್ರಾಮದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಮನೆ ಸಾಲಕ್ಕಾಗಿ ಬ್ಯಾಂಕ್ನಿಂದ ರೂ5ಲಕ್ಷ ಮಂಜೂರಾಗಿರುತ್ತದೆ. ಮಂಜೂರಾದ ಹಣದಲ್ಲಿ 3 ಲಕ್ಷ ಬ್ಯಾಕ್ನಿಂದ ಹಣ ಡ್ರಾ ಆಗಿದ್ದು, ಅಲ್ಲಿನ ಮ್ಯಾನೇಜರ್ 2 ಲಕ್ಷ ಹಣವನ್ನು ನೀಡಿರುತ್ತಾರೆ. 1 ಲಕ್ಷ ಹಣ ನೀಡದೆ ಮ್ಯಾನೇಜರ್ 3ಲಕ್ಷ ಹಣವನ್ನು ನೀಡಿದ್ದೇನೆ ಎಂದು ಮೋಸಗೊಳಿಸುತ್ತಿದ್ದಾರೆ ಎಂದು ಕಮಲಮ್ಮ ಆರೋಪಿಸಿದ್ದಾರೆ.
ರೈತ ಸಂಘದ ತಾಲೂಕು ಅಧ್ಯಕ್ಷ ಉಮೇಶ್ ಪಾಟೇಲ್ ಮಾತನಾಡಿ, ಕಮಲಮ್ಮ ಅವರು ಮನೆಸಾಲಕ್ಕಾಗಿ ತತ್ತೂರು ಗ್ರಾಮದ ಪ್ರಗತಿ ಕೃಷ್ಣ ಬ್ಯಾಂಕ್ನಲ್ಲಿ ಮಂಜೂರಾದ 5 ಲಕ್ಷದಲ್ಲಿ ತಲಾ ಒಂದು ಲಕ್ಷದಂತೆ 2 ಕಂತುಗಳಲ್ಲಿ ಹಣ ಪಡೆದಿರುತ್ತಾರೆ. ಆದರೆ ಬ್ಯಾಂಕ್ ವ್ಯವಸ್ಥಾಪಕರು 3 ಲಕ್ಷ ಪಡೆದಿದ್ದೀರಿ ಎಂದು ಸುಳ್ಳು ಹೇಳಿ ಒಂದು ಲಕ್ಷ ರೂಪಾಯಿಗಳ ಮೋಸ ಮಾಡಿದ್ದಾರೆ.
ಈ ಹಿಂದೆ ಹಲವು ಬಾರಿ ಅವರನ್ನು ಸಂಪರ್ಕಿಸಿ ಒಂದು ಲಕ್ಷ ರೂಪಾಯಿಗಳನ್ನು ನೀಡುವಂತೆ ಕೇಳಿಕೊಂಡರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಬಗ್ಗೆ ಸೊರಬ ಠಾಣೆಯಲ್ಲಿ ಸಿಪಿಐ ಅವರ ಸಮ್ಮುಖದಲ್ಲಿ ಅವರನ್ನು ಕರೆಸಿ ಮಾತನಾಡಿದಾಗ ಆ ಸಂದರ್ಭದಲ್ಲಿ ವ್ಯವಸ್ಥಾಪಕರು ಪರಿಶೀಲಿಸಿ ಅದರ ಬಗ್ಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದರು. ಆದರೆ ಈ ವರೆಗೂ ಸಮಸ್ಯೆಯನ್ನು ಪರಿಹರಿಸಿಲ್ಲ. ವ್ಯವಸ್ಥಾಪಕರ ಕ್ರಮವನ್ನು ಖಂಡಿಸಿ ಬಳ್ಳಾರಿಯಲ್ಲಿರುವ ಬ್ಯಾಂಕ್ನ ಕೇಂದ್ರ ಕಚೇರಿಗೆ ಕಮಲಮ್ಮ ಅವರ ಕುಟುಂಬದವರೊಂದಿಗೆ ನಾವು ಖದ್ದು ಭೇಟಿನೀಡಿ, ಮುಖ್ಯ ಪ್ರಬಂಧಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಮೋಸ ಹೋದ ಅಮಾಯಕ ಕಮಲಮ್ಮ ಅವರ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ನಿರಂತರ ಧರಣಿ ಸತ್ಯಾಗ್ರಹ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಧರಣಿಯಲ್ಲಿ ರೈತ ಸಂಘದ ತಾಲೂಕು ಕಾರ್ಯಾಧ್ಯಕ್ಷ ಶಿವಪ್ಪ ಹುಣಸವಳ್ಳಿ, ಉಪಾಧ್ಯಕ್ಷ ಈಶ್ವರಪ್ಪ ಕೊಡಕಣಿ, ಪ್ರಧಾನ ಕಾರ್ಯದರ್ಶಿ ಇಂಧೂಧರ, ಶಿವಪುತ್ರಪ್ಪ ತತ್ತೂರು, ಮಂಜಪ್ಪ ಬಾರಂಗಿ, ಹನುಮಂತಪ್ಪ, ಮಂಜು ಆರೇಕೊಪ್ಪ, ನಾಗರಾಜ್ ಬೆಣ್ಣೆಗೇರಿ, ಚಂದ್ರಗೌಡ ಗಿಣಿವಾಲ, ಹನುಮಂತಪ್ಪ ಬಾವಿಕಟ್ಟಿ, ವೀರನಗೌಡ ಗಿಣಿವಾಲ, ಎಚ್,ಎಸ್.ಬಸವರಾಜಪ್ಪ ತತ್ತೂರು, ರಾಜು ಪೂಜಾರ್, ಮತ್ತಿತರರಿದ್ದರು.
ಮಂಜೂರಾದ 5 ಲಕ್ಷ ಹಣದಲ್ಲಿ ಕಮಲಮ್ಮ ಅವರು ರೂ 1 ಲಕ್ಷದಂತೆ ಮೂರು ಕಂತುಗಳಲ್ಲಿ 3 ಲಕ್ಷ ಹಣವನ್ನು ಬ್ಯಾಂಕ್ ನಿಂದ ಬಿಡಿಸಿಕೊಂಡಿದ್ದಾರೆ. ನಮ್ಮಿಂದ ಹಣದ ವ್ಯವಹಾರದಲ್ಲಿ ಯಾವುದೆ ತಪ್ಪುಗಳು ನಡೆದಿಲ್ಲ. ಅನಾವಶ್ಯಕವಾಗಿ ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕಮಲಮ್ಮ ಅವರು 3 ಲಕ್ಷ ಹಣವನ್ನು ನಮ್ಮ ಬ್ಯಾಕ್ನಿಂದ ಬಿಡಿಸಿಕೊಂಡ ಬಗ್ಗೆ ದಾಖಲೆಗಳಿವೆ. ಯಾವುದೇ ತನಿಖೆಗೂ ನಾವು ಸಿದ್ದರಿದ್ದು, ತಪ್ಪು ನಡೆದಿದೆ ಎಂದು ಕಂಡುಬಂದಲ್ಲಿ ಕ್ರಮ ತೆಗೆದುಕೊಳ್ಳಬಹುದಾಗಿದೆ ಎಂದು ಗ್ರಾಮಿಣ ಬ್ಯಾಂಕ್ ವ್ಯವಸ್ಥಾಪಕ ಬಿ.ನಾಗರಾಜ್ ಹೇಳಿದರು.