×
Ad

ಮೆಗ್ಗಾನ್ ಆಸ್ಪತ್ರೆ ಪ್ರಕರಣ : ಅಮೀರ್ ಸಾಬ್ ಆರೋಗ್ಯ ವಿಚಾರಿಸಿದ ಅಪರ ಜಿಲ್ಲಾಧಿಕಾರಿ

Update: 2017-06-05 20:14 IST

ಶಿವಮೊಗ್ಗ, ಮೇ. 5: ಇಲ್ಲಿನ ಸರಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ವಾರ್ಡ್‌ನಿಂದ ಎಕ್ಸ್‌ರೇ ಕೊಠಡಿಗೆ ಕರೆದೊಯ್ಯಲು ಸಿಬ್ಬಂದಿಗಳು ವ್ಹೀಲ್ ಚೇರ್ ನೀಡಲು ನಿರಾಕರಿಸಿದ್ದರಿಂದ ವೃದ್ದ ಪತ್ನಿಯು ಅನಾರೋಗ್ಯ ಪೀಡಿತ ವಯೋವೃದ್ದ ಪತಿಯ ಕಾಲುಗಳನ್ನು ಹಿಡಿದು ದರದರನೇ ಎಳೆದೊಯ್ದ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ.

ಪ್ರಸ್ತುತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ, ಪ್ರಕರಣದ ಕೇಂದ್ರ ಬಿಂಧುವಾದ ಅಮೀರ್ ಸಾಬ್ರನ್ನು ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪರವರು ಸೋಮವಾರ ಭೇಟಿಯಾಗಿ ಆರೋಗ್ಯ ವಿಚಾರಣೆ ನಡೆಸಿದರು. ಪತ್ನಿ ಫಮೀದಾರವರೊಂದಿಗೆ ಸಮಾಲೋಚಿಸಿದರು. ಈ ಸಂದರ್ಭದಲ್ಲಿ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ಪ್ರಮುಖರಾದ ಡಾ. ರಘುನಂದನ್ , ಅಧೀಕ್ಷಕ ಸತ್ಯನಾರಾಯಣ ಉಪಸ್ಥಿತರಿದ್ದರು.

ಅಮೀರ್ ಸಾಬ್ ಆರೋಗ್ಯದ ಕುರಿತಂತೆ ಖಾಸಗಿ ಆಸ್ಪತ್ರೆಯ ವೈದ್ಯರ ಜೊತೆ ಅಪರ ಜಿಲ್ಲಾಧಿಕಾರಿಗಳು ಸುದೀರ್ಘ ಚರ್ಚೆ ನಡೆಸಿದರು. ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು. ಜೊತೆಗೆ ಜಿಲ್ಲಾಡಳಿತದಿಂದ ಅಗತ್ಯವಾದ ಎಲ್ಲ ರೀತಿಯ ನೆರವನ್ನು ದೊರಕಿಸಿಕೊಡುವುದಾಗಿ ತಿಳಿಸಿದರು.
ಖಾಸಗಿ ಆಸ್ಪತ್ರೆ ವೈದ್ಯರು ಮಾತನಾಡಿ, ಅಮೀರ್ ಸಾಬ್ ಆರೋಗ್ಯದಲ್ಲಿ ಕ್ರಮೇಣ ಚೇತರಿಕೆ ಕಂಡುಬರುತ್ತಿದ್ದು, ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಹಣ ಪಡೆಯದೆ ಉಚಿತವಾಗಿಯೇ ಚಿಕಿತ್ಸಾ ಸೌಲಭ್ಯ ನೀಡಲಾಗುತ್ತಿದೆ ಎಂದು ಅಪರ ಜಿಲಾ್ಲಧಿಕಾರಿಗಳ ಗಮನಕ್ಕೆ ತಂದರು.

ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಮಾತನಾಡಿ, ’ಅಮೀರ್ ಸಾಬ್‌ರವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಅಮೀರ್ ಸಾಬ್ ಹಾಗೂ ಅವರ ಪತ್ನಿಯ ಜೊತೆ ಮಾತುಕತೆ ನಡೆಸಿ, ಜಿಲ್ಲಾಡಳಿತದಿಂದ ಅಗತ್ಯವಾದ ಎಲ್ಲ ರೀತಿಯ ನೆರವು ಕಲ್ಪಿಸಿಕೊಡುವುದಾಗಿ ತಿಳಿಸಿದ್ದೇನೆ’ ಎಂದು ಹೇಳಿದರು.

ಸರಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಡಳಿತದಿಂದ ಆಸ್ಪತ್ರೆ ಆಡಳಿತ ಮಂಡಳಿಗೆ ಕೆಲ ಸಲಹೆ-ಸೂಚನೆಗಳನ್ನು ರವಾನಿಸಲಾಗಿದೆ. ಇಷ್ಟರಲ್ಲಿಯೇ ಜಿಲ್ಲಾಧಿಕಾರಿಗಳು ಆಸ್ಪತ್ರೆಯ ಪ್ರಮುಖರ ಸಭೆ ಕರೆದು ಚರ್ಚೆ ನಡೆಸಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News