ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ ಆರೋಪ:ಪೊಲೀಸರಿಗೆ ದೂರು ನೀಡದೆ ಮೌಢ್ಯಕ್ಕೆ ಮೊರೆ ಹೋದ ತಾಯಿ!

Update: 2017-06-07 15:08 GMT

ಬೆಂಗಳೂರು, ಜೂ.7: ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ ನಡೆದಿರುವ ಆರೋಪ ಇಲ್ಲಿನ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಳಿಬಂದಿದ್ದು, ಪೊಲೀಸರಿಗೆ ದೂರು ನೀಡದೆ ತಾಯಿ ಮೌಢ್ಯತೆಯ ಮೊರೆ ಹೋಗಿದ್ದಾರೆ.

ನಗರದ ಹೊರವಲಯದ ಮಾಗಡಿ ಬಳಿಯ ಅಜ್ಜನಹಳ್ಳಿ ಮೂಲದ ರಮೇಶ್ ಎಂಬಾತ ಮಗಳ ಮೇಲೆ ಅತ್ಯಾಚಾರ ನಡೆಸಿದ ವ್ಯಕ್ತಿ ಎನ್ನಲಾಗಿದ್ದು, ಈತನ ಕೃತ್ಯವನ್ನು ಬಹಿರಂಗಪಡಿಸದ ತಾಯಿ, ಮಗಳ ಮೇಲೆ ಅತ್ಯಾಚಾರ ನಡೆದಿದೆಯೋ ಇಲ್ಲವೋ ಎನ್ನುವುದನ್ನು ಪರೀಕ್ಷಿಸಲು ಪೂಜಾರಿಯೊಬ್ಬರ ಮೊರೆ ಹೋಗಿರುವುದಾಗಿ ತಿಳಿದುಬಂದಿದೆ.

ಘಟನೆ ವಿವರ: ಕೆಲಸಕ್ಕಾಗಿ ರಾಜಧಾನಿ ಬೆಂಗಳೂರಿಗೆ ಬಂದಿದ್ದ ತಾಯಿ ಮಗಳನ್ನು ಊರಲ್ಲಿಯೇ ತಂದೆ ರಮೇಶ್ ಬಳಿ ಬಿಟ್ಟು ಬಂದಿದ್ದರು. ಆದರೆ, ರಮೇಶ್ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ. ಈ ವಿಷಯ ತಾಯಿಗೆ ತಿಳಿಸಿದರೆ ತಾಯಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ರಮೇಶ್ ತಾಯಿ ಮೇಲಿನ ಪ್ರೀತಿಗೆ ಕಟ್ಟುಬಿದ್ದಿದ್ದ ಮಗಳು ತಂದೆಯ ಕೃತ್ಯ ಸಹಿಸಿಕೊಂಡಿದ್ದಾಳೆ.

ಕೊನೆಗೆ ಈ ಬಗ್ಗೆ ತಾಯಿಗೆ ಹೇಳಿದಾಗ, ತಾಯಿ ಪೊಲೀಸರಿಗೆ ದೂರು ನೀಡದೆ ಪೂಜೆ, ಪುನಸ್ಕಾರ ಅಂತ ಪೂಜಾರಿಯ ಮೊರೆ ಹೋಗಿದ್ದಾರೆ. ಬಳಿಕ ತನ್ನ ಮಗಳನ್ನು ಲಗ್ಗೆರೆಯ ಚೌಡೇಶ್ವರಿನಗರದಲ್ಲಿರುವ ಸೋದರಿಯ ಮನೆಗೆ ಕರೆತಂದು ಸ್ಥಳೀಯ ಪೂಜಾರಿ ಮಲ್ಲೇಶ್ ಬಳಿ ಕರೆದುಕೊಂಡು ಹೋಗಿದ್ದಾರೆ.

ಪೂಜಾರಿ ಮಲ್ಲೇಶ್, ನೊಂದ ಯುವತಿಯ ಕೈಯನ್ನು ಮುಳ್ಳಿನ ಪಾದುಕೆ ಮೇಲಿಟ್ಟು ತುಳಿದಿದ್ದಾರೆ. ತುಳಿದ ನಂತರ ಯುವತಿ ಕೈಯಲ್ಲಿ ರಕ್ತ ಬಂದರೆ ಅತ್ಯಾಚಾರ ಆಗಿಲ್ಲ. ರಕ್ತ ಬರದೇ ಇದ್ದರೆ ಅತ್ಯಾಚಾರ ಆಗಿದೆ ಎಂದು ನಂಬಿಸಿ ಪೋಷಕರ ಎದುರೇ ಚಿತ್ರಹಿಂಸೆ ನೀಡಿದ್ದಾರೆ ಎಂದು ಗೊತ್ತಾಗಿದೆ.

 ವಿಷಯ ತಿಳಿದ ಸ್ಥಳೀಯರು ತಂದೆ ರಮೇಶ್, ಪೂಜಾರಿ ಮಲ್ಲೇಶ್ ಹಾಗೂ ತಾಯಿಯನ್ನು ಹಿಡಿದು ರಾಜಗೋಪಾಲನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News