×
Ad

ಯೆಚೂರಿ ಮೇಲೆ ಹಲ್ಲೆ ಹಿನ್ನೆಲೆ:ಸಿಪಿಐಎಂ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ

Update: 2017-06-08 17:47 IST

 ದಾವಣಗೆರೆ,ಜೂ.8: ದೆಹಲಿಯ ಸಿಪಿಐಎಂ ಕೇಂದ್ರ ಕಚೇರಿಯಲ್ಲಿ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮೇಲೆ ಸಂಘ ಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿದ್ದನ್ನು ಖಂಡಿಸಿ ಪಕ್ಷದ ಜಿಲ್ಲಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಶ್ರೀ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪಕ್ಷದ ಮುಖಂಡರು, ಕಾರ್ಯಕರ್ತರು ಸಂಘ ಪರಿವಾರದ ಕೃತ್ಯವನ್ನು ಖಂಡಿಸಿ ಘೋಷಣೆ ಕೂಗಿ, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತಾಯಿಸಿದರು.

ಈ ಸಂದರ್ಭ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ. ಲಕ್ಷ್ಮಿನಾರಾಯಣ ಭಟ್ ಮಾತನಾಡಿ, ದೆಹಲಿಯ ಸಿಪಿಐಎಂ ಕಚೇರಿಯಲ್ಲಿ ಕೇಂದ್ರ ಕಚೇರಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಪತ್ರಿಕಾ ಗೋಷ್ಟಿಯನ್ನು ನಡೆಸಿದ್ದ ವೇಳೆ ಸಂಘ ಪರಿವಾರದ ಕಾರ್ಯಕರ್ತರು ನುಗ್ಗಿ ಹಲ್ಲೆ ನಡೆಸಿದ್ದು ಖಂಡನೀಯ,  ಎಂದ ಅವರು, ಸಂಸದರು, ರಾಷ್ಟ್ರೀಯ ಪಕ್ಷವೊಂದರ ಪ್ರಧಾನ ಕಾರ್ಯದರ್ಶಿ ಮೇಲೆ ಈ ಗೂಂಡಾಗಳಂತೆ ನುಗ್ಗಿ, ದಾಂಧಲೆ ಮಾಡುವ ಜೊತೆಗೆ ಹಲ್ಲೆ ನಡೆಸಿದ್ದನ್ನು ಪಕ್ಷ ಉಗ್ರವಾಗಿ ಖಂಡಿಸುತ್ತದೆ. ಯೆಚೂರಿ ಮೇಲೆ ನಡೆದ ಹಲ್ಲೆಯು ಪ್ರಜಾಪ್ರಭುತ್ವ ಮತ್ತು ಗಣತಂತ್ರದ ಮೇಲೆ ನಡೆದಿರುವ ದಾಳಿಯಾಗಿದೆ ಎಂದು ಅವರು ದೂರಿದರು.

ದೇಶದ ಸಂವಿಧಾನವನ್ನು ತಿರಸ್ಕರಿಸಿದ ಮತ್ತು ಮನು ಧರ್ಮ ಶಾಸ್ತ್ರವನ್ನೇ ಸಂವಿಧಾನವೆಂದು ಪರಿಗಣಿಸಿರುವ ಸಂಘ ಪರಿವಾರವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಜಾಪ್ರಭುತ್ವ, ಸಂವಿಧಾನ, ಸ್ವಾತಂತ್ರ್ಯ ಇತ್ಯಾದಿಗಳ ಮೇಲೆ ನಡೆಸಿರುವ ದಾಳಿ, ಸಂಘ ಪರಿವಾರದವರ -ಫ್ಯಾಸಿಸ್ಟ್, ಹಿಟ್ಲರ್ ಶಾಹಿ ನೀತಿ ತೋರಿಸುತ್ತದೆ ಎಂದ ಅವರು, ಮಾಧ್ಯಮಗಳ ಜೊತೆಗೆ ಸೀತಾರಾಂ ಯೆಚೂರಿ ಮಾತನಾಡುವ ವೇಳೆ ಸಂಘ ಪರಿವಾರದ ಕಾರ್ಯಕರ್ತರು ಹೀಗೆ ದುರ್ವರ್ತನೆ ತೋರಿದ್ದಲ್ಲದೇ, ಯೆಚೂರಿ ಮೇಲೆ ಹಲ್ಲೆ ಮಾಡಿರುವುದನ್ನು ಇಡೀದೇಶವೇ ಗಮನಿಸುತ್ತಿದೆ. ದೇಶಾದ್ಯಂತ ಸಂಘ ಪರಿವಾರದವರ ಇಂತಹದ್ದೊಂದು ಗೂಂಡಾ ಪ್ರವೃತ್ತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದೆ. ಯೆಚೂರಿ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಇ. ಶ್ರೀನಿವಾಸ, ಸಿಐಟಿಯುನ ಉಮೇಶ ಕೈದಾಳೆ, ಎಸ್.ಸಿ. ಶ್ರೀನಿವಾಸಾಚಾರ್ಯ, ಬಿ.ಬಿ. ಹಾಲೇಶ, ನಗರಸಭೆ ಮಾಜಿ ಸದಸ್ಯ ಜಯಣ್ಣ ಜಾಧವ್, ಹರಿಹರದ ಈರಣ್ಣ, ಬಿಎಸ್‌ಎನ್‌ಎಲ್ ನೌಕರರ ಸಂಘಟನೆಯ ಪರಮೇಶ್ವರಪ್ಪ, ರುದ್ರಪ್ಪ, ಅಶಕ್, ಆಟೋ ಚಾಲಕರ ಸಂಘದ ಅನ್ವರ್ ಸಾಬ್, ಅಣ್ಣಪ್ಪ ಸ್ವಾಮಿ, ಜಿ. ಲೋಕೇಶ ನಾಯ್ಕ, ಎ. ಗುಡ್ಡಪ್ಪ, ತಿಮ್ಮಣ್ಣ ಹೊನ್ನೂರು, ಭರಮಪ್ಪ, ಡಿಎಸ್ಸೆಸ್‌ನ ಮಂಜುನಾಥ ಕುಂದುವಾಡ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News