ಹಲ್ಲೆ ಪ್ರಕರಣ: ಐದು ಮಂದಿ ಆರೋಪಿಗಳ ಬಂಧನ
Update: 2017-06-08 22:51 IST
ಮದ್ದೂರು, ಜೂ.8: ಕ್ಷುಲ್ಲಕ ವಿಚಾರಕ್ಕೆ ಮಂಗಳವಾರ ಪಟ್ಟಣದ ಯುವಕರಿಬ್ಬರ ಮೇಲೆ ಹಲ್ಲೆ ನಡೆಸಿದ್ದ ಐದು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ತೊಪ್ಪನಹಳ್ಳಿ ಜೋಡಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ನ್ಯಾಯಾಲಯದಿಂದ ಜಾಮೀನಿನ ಮೇಲೆ ಹೊರಬಂದಿದ್ದ ಡಿ.ಸ್ವಾಮಿ, ಈತನ ಸಹಚರರಾದ ಎಂ.ಬಿ.ಪ್ರಶಾಂತ್, ವರುಣ್, ವೀರೇಶ್ ಮತ್ತು ವಿಜಯ್ ಅವರನ್ನು ಮಡಿಕೇರಿ ಜಿಲ್ಲೆ ಕುಶಾಲನಗರದ ವಸತಿ ಗೃಹದಲ್ಲಿ ಗುರುವಾರ ಪೊಲೀಸರು ಬಂಧಿಸಿದರು.
ಕಳೆದ ಮಂಗಳವಾರ ಪಟ್ಟಣದ ಕೆಮ್ಮಣ್ಣು ನಾಲೆ ವೃತ್ತದ ಬಳಿ ಬೈಕ್ಗೆ ಸ್ಕಾರ್ಪಿಯೋ ಕಾರು ತಗಲಿತ್ತೆಂಬ ಕಾರಣಕ್ಕೆ ಶಿಕ್ಷಕರ ಬಡಾವಣೆಯ ಅಕ್ಷಯ್ ಮತ್ತು ಲೀಲಾವತಿ ಬಡಾವಣೆಯ ಕಿರಣ್ ಎಂಬವರ ಮೇಲೆ ಆರೋಪಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಸಿಪಿಐ ಕೆ.ಪ್ರಭಾಕರ್ ನೇತೃತ್ವದಲ್ಲಿ ತಂಡ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಎರಡು ದಿನ ವಿಚಾರಣೆಗಾಗಿ ನ್ಯಾಯಾಧೀಶರು ಪೊಲೀಸರ ವಶಕ್ಕೆ ನೀಡಿದ್ದಾರೆ