×
Ad

ಜೂ.15ರಿಂದ ಅನಿರ್ದಿಷ್ಟಾವಧಿ ಧರಣಿ ಆರಂಭ

Update: 2017-06-08 23:08 IST

ಮಡಿಕೇರಿ, ಜೂ. 8: ರಾಜ್ಯದಲ್ಲಿರುವ ಎಲ್ಲ ಬಡವರ್ಗಕ್ಕೆ ಭೂಮಿ ಮತ್ತು ವಸತಿಯ ಹಕ್ಕನ್ನು ನೀಡಬೇಕೆಂದು ಒತ್ತಾಯಿಸಿ ಜೂ.15ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮೂರನೇ ಹಂತದ ರಾಜ್ಯ ಮಟ್ಟದ ಹೋರಾಟವನ್ನು ನಡೆಸಲು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನಿರ್ಧರಿಸಿದೆ ಎಂದು ಸಮಿತಿಯ ಜಿಲ್ಲಾ ಸಂಚಾಲಕ ಡಿ.ಎಸ್. ನಿರ್ವಾಣಪ್ಪ ತಿಳಿಸಿದ್ದಾರೆ.


 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದ ಸಂದರ್ಭ ಸಮಿತಿಯು ಮಂಡಿಸಿದ ಹಕ್ಕೊತ್ತಾಯವನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದ ರಾಜ್ಯ ಸರಕಾರ ಈ ಕುರಿತು ಈವರೆಗೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಆರೋಪಿಸಿದರು. ಬೆಳಗಾವಿಯಲ್ಲಿ ರಾಜ್ಯದ ವಿವಿಧೆಡೆಯ ಸುಮಾರು 3 ಸಾವಿರ ಮಂದಿ ಭೂಮಿ ಮತ್ತು ವಸತಿ ವಂಚಿತರು ಮೂರು ದಿನಗಳ ಕಾಲ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಭಾಷಣ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಡಜನರಿಗೆ ಬೇಸಾಯಕ್ಕೆ ಭೂಮಿ, ವಾಸಕ್ಕೆ ಮನೆ ನೀಡುವುದು ಸರಕಾರದ ಆದ್ಯತೆಯೇ ಹೊರತು ಬಲಾಢ್ಯರಿಗೆ, ಭೂಗಳ್ಳರಿಗೆ ಕಂಪೆನಿಗಳಿಗೆ ನೀಡುವುದು ಅಲ್ಲ ಎಂದು ಹೇಳಿದ್ದರು. ಆದರೆ ಆರು ತಿಂಗಳು ಕಳೆದಿದ್ದರೂ, ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು.
ಜೂ.15 ರಿಂದ ಸ್ವಾತಂತ್ರ್ಯ ಹೋರಾಟ ಗಾರ ಎಚ್.ಎಸ್.ದೊರೆಸ್ವಾಮಿ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಈ ಹೋರಾಟ ನಡೆಯಲಿದೆ ಎಂದು ತಿಳಿಸಿದರು.


 ಬಡವರಿಗೆ ಘನತೆಯಿಂದ ಬದುಕುವಷ್ಟು ಭೂಮಿ ಮತ್ತು ಗೌರವದಿಂದ ಬಾಳುವುದಕ್ಕೆ ಮನೆ ನೀಡಬೇಕೆಂದು ಕೇಳುತ್ತಿರುವುದು ನಮ್ಮ ಹಕ್ಕು ಹೊರತು ಭಿಕ್ಷೆಯಲ್ಲ ಎಂದು ತಿಳಿಸಿದ ಅವರು, ಇದನ್ನು ಈಡೇರಿಸುವುದು ಸರಕಾರದ ಕರ್ತವ್ಯವಾಗಿದೆ ಎಂದರು.
ಸಮಿತಿಯ ಪ್ರಮುಖ ಹಾಗೂ ಎಸ್‌ಡಿಪಿಐ ಜಿಲ್ಲಾಧ್ಯಕ್ಷರಾದ ಅಮೀನ್ ಮೊಹ್ಸೀನ್, ಪಾಲೆಮಾಡು ವಸತಿ ರಹಿತರ ಹೋರಾಟ ಸಮಿತಿಯ ಮುಖಂಡ ಕೆ.ಮೊಣ್ಣಪ್ಪ,ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್ ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಗತಿಪರ ಚಿಂತಕರ ವೇದಿಕೆಯ ಅಲ್ಲಾರಂಡ ವಿಠಲ್ ನಂಜಪ್ಪ ಹಾಗೂ ಹೋರಾಟ ಸಮಿತಿಯ ಪ್ರಮುಖರಾದ ಸಣ್ಣಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News