’ಸ್ಮಾರ್ಟ್ ಸಿಟಿ’ ಯೋಜನೆ ಅನುಷ್ಠಾನದಲ್ಲಿ ಸಾರ್ವಜನಿಕರ ಸಹಭಾಗಿತ್ವವಿಲ್ಲ?

Update: 2017-06-09 11:35 GMT

 ಶಿವಮೊಗ್ಗ, ಜೂ. 9: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಕೂಸಾದ ’ಸ್ಮಾರ್ಟ್ ಸಿಟಿ’ ಯೋಜನೆಯಡಿ ಆಯ್ಕೆಯಾದ ನಗರಗಳಲ್ಲಿ ಈಗಾಗಲೇ ಕೆಲ ನಗರಗಳಲ್ಲಿ ’ಅಭಿವೃದ್ಧಿ ಪರ್ವ’ ಆರಂಭವಾಗಿದೆ. ನೂರಾರು ಕೋ. ರೂ. ವೆಚ್ಚದ ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿವೆ. ’ಸ್ಮಾರ್ಟ್’ ಸಿಟಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿಯೇ ಪ್ರತ್ಯೇಕ ವಾಹಕ ಘಟಕ, ಕಚೇರಿ, ಐಎಎಸ್ ದರ್ಜೆಯ ಅಧಿಕಾರಿಗಳ ನಿಯೋಜನೆಯನ್ನು ಕೂಡ ಕೇಂದ್ರ ಸರ್ಕಾರ ಮಾಡಿದೆ.

ಅದರಂತೆ ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯ ಅನುಷ್ಠಾನಕ್ಕೆ ಮಹಾನಗರ ಪಾಲಿಕೆಯ ಆಯುಕ್ತರಾದ ಮುಲ್ಲೈ ಮುಯಿಲನ್‌ರವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಕಚೇರಿ ಕಟ್ಟಡಕ್ಕೂ ಈಗಾಗಲೇ ಜಾಗ ಗುರುತಿಸಲಾಗಿದೆ. ಕನ್ಸಲೆಂಟ್‌ಗಳನ್ನು ನೇಮಕ ಮಾಡಲಾಗಿದ್ದು, ಈಗಾಗಲೇ ಇವರು ನಗರದ ವಿವಿಧೆಡೆ ಸಂಚರಿಸಿ ಯೋಜನೆಗಳ ಅನುಷ್ಠಾನದ ರೂಪುರೇಷೆಗಳನ್ನು ಭರದಿಂದಲೇ ಸಿದ್ದಪಡಿಸಲಾರಂಭಿಸಿದ್ದಾರೆ. ’ಸ್ಮಾರ್ಟ್ ಸಿಟಿ’ ಯೋಜನೆಯ ಕಾಮಗಾರಿಗಳ ಅನುಷ್ಠಾನದ ಕುರಿತಂತೆ ಆಡಳಿತ ವ್ಯವಸ್ಥೆಯಲ್ಲಿ ಸಮರೋಪಾದಿಯ ಪೂರ್ವಭಾವಿ ಸಿದ್ದತೆಗಳು ನಡೆಯುತ್ತಿವೆ. ಆದರೆ ಇದರ ಬಗ್ಗೆ ನಾಗರಿಕರಿಗೆ ಸೂಕ್ತ ಮಾಹಿತಿಯೇ ಇಲ್ಲವಾಗಿದೆ.

ಮತ್ತೊಂದೆಡೆ ಸಂಬಂಧಿಸಿದವರು ನಾಗರಿಕರಿಗೆ ಮಾಹಿತಿ ನೀಡುವ ಕೆಲಸವನ್ನು ಕೂಡ ಸಮರ್ಪಕವಾಗಿ ನಡೆಸುತ್ತಿಲ್ಲದಿರುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರಲಾರಂಭಿಸಿದೆ. ’ಸ್ಮಾರ್ಟ್ ಸಿಟಿ’ ಯೋಜನೆಯ ಘೋಷಣೆಯ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಯೋಜನೆ ಅನುಷ್ಠಾನದ ಪ್ರತಿ ಹಂತದಲ್ಲಿಯೂ ಸ್ಥಳಿಯ ನಾಗರಿಕರ ಅಭಿಪ್ರಾಯ, ಸಲಹೆ-ಸೂಚನೆ ಪಡೆದುಕೊಳ್ಳಲಾಗುವುದು. ನಾಗರೀಕರ ಸಹಭಾಗಿತ್ವದಲ್ಲಿಯೇ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದ್ದರು. ಆದರೆ ಶಿವಮೊಗ್ಗ ನಗರದಲ್ಲಿ ಪ್ರಧಾನಮಂತ್ರಿಗಳ ಆಶಯ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದಂತೆ ಕಾಣುತ್ತಿಲ್ಲ. ’ಸ್ಮಾರ್ಟ್ ಸಿಟಿ’ ಯೋಜನೆಯ ಅನುಷ್ಠಾನದ ಬಗ್ಗೆ ಪ್ರಸ್ತುತ ನಾಗರಿಕರಿಗೆ ಸಮರ್ಪಕ ಮಾಹಿತಿಯೇ ಇಲ್ಲವಾಗಿದೆ. ಅಭಿಪ್ರಾಯ ಆಲಿಸುವ ಗೋಜಿಗೂ ಸಂಬಂಧಿಸಿದವರು ಹೋಗುತ್ತಿಲ್ಲ ಎಂದು ನಾಗರಿಕರು ದೂರುತ್ತಿದ್ದಾರೆ.

 ಈ ಹಿಂದೆ ಸ್ಮಾರ್ಟ್ ಸಿಟಿ ಯೋಜನೆಗೆ ನಗರಗಳ ಆಯ್ಕೆಗೂ ಮುನ್ನ ಮಹಾನಗರ ಪಾಲಿಕೆ ಆಡಳಿತವು ನಗರಾದ್ಯಂತ ಭಾರೀ ದೊಡ್ಡ ಮಟ್ಟದಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವ ಕೆಲಸ ನಡೆಸಿತ್ತು. ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಸಮಾಜದ ನಾನಾ ವರ್ಗದವರು ನಗರದ ಅಭಿವೃದ್ದಿ ಯಾವ ದಿಕ್ಕಿನಲ್ಲಿರಬೇಕು ಎಂಬುವುದರ ಬಗ್ಗೆ ತಮ್ಮದೆ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ನಾಗರಿಕರ ಅಭಿಪ್ರಾಯದ ಆಧಾರದ ಮೇಲೆಯೇ, ಹತ್ತು ಹಲವು ಯೋಜನೆಗಳ ಪಟ್ಟಿ ಸಿದ್ದಪಡಿಸಿ ಕೇಂದ್ರ ಸರ್ಕಾರಕ್ಕೆ ರವಾನಿಸಿದ್ದರು.

ಈ ಯೋಜನೆಗಳ ಅನುಷ್ಠಾನಕ್ಕೆ ಅನುಮೋದನೆ ಕೂಡ ದೊರಕಿದೆ. ನೂರಾರು ಕೋಟಿ ರೂ. ಮಂಜೂರಾಗಿದೆ. ಕೆಲ ಯೋಜನೆಗಳ ಅನುಷ್ಠಾನಕ್ಕೆ ಪೂರ್ವಭಾವಿ ಸಿದ್ದತೆಗಳನ್ನು ಕೂಡ ಮಾಡಲಾಗಿದೆ. ಆದರೆ ಯೋಜನೆಯಡಿ ಯಾವ್ಯಾವ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ? ಮಾಡುತ್ತಿರುವ ವೆಚ್ಚವೆಷ್ಟು? ವಿನೂತನ ಕಾರ್ಯಕ್ರಮಗಳ್ಯಾವುವು? ಕಾಮಗಾರಿಗಳ ನಿರ್ವಹಣೆ ಯಾವ ರೀತಿಯಲ್ಲಾಗುತ್ತದೆ? ಪರಿಸರ ಸಂರಕ್ಷಣೆ ಮತ್ತೀತರ ವಿಷಯಗಳ ಬಗ್ಗೆ ಕೈಗೊಂಡಿರುವ ಕ್ರಮಗಳೇನು? ಎಂಬುವುದರ ಬಗ್ಗೆ ನಾಗರೀಕರಿಗೆ ಸ್ಪಷ್ಟ ಮಾಹಿತಿಯೇ ಇಲ್ಲವಾಗಿದೆ ಎಂದು ’ನನ್ನ ಕನಸಿನ ಶಿವಮೊಗ್ಗ’ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಎನ್.ಗೋಪಿನಾಥ್ ಹೇಳುತ್ತಾರೆ. ಇನ್ನಾದರೂ ’ಸ್ಮಾರ್ಟ್ ಸಿಟಿ’ ಘಟಕದ ಅಧಿಕಾರಿಗಳು ನಾಗರೀಕರಿಗೆ ಸೂಕ್ತ ಮಾಹಿತಿ ನೀಡುವ ಹಾಗೂ ಅಭಿಪ್ರಾಯ ಆಲಿಸುವ ಕೆಲಸ ಮಾಡಬೇಕು. ಭವಿಷ್ಯದಲ್ಲಿ ನಗರದ ಬೆಳವಣಿಗೆ, ಜನಸಂಖ್ಯೆಗೆ ಅನುಗುಣವಾಗಿ ಯೋಜನೆ ಅನುಷ್ಠಾನಗೊಳಿಸಬೇಕಾಗಿದೆ ಎಂದು ಎನ್.ಗೋಪಿನಾಥ್‌ರವರು ಅಭಿಪ್ರಾಯಪಡುತ್ತಾರೆ.

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News