ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಶೀಘ್ರದಲ್ಲೇ ಚಾಲನೆ: ಜಿಲ್ಲಾಧಿಕಾರಿ
ಚಿಕ್ಕಮಗಳೂರು, ಜೂ.13: ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಜಿಲ್ಲೆಯಲ್ಲಿ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಸತ್ಯವತಿ ತಿಳಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಜಾರಿಗೆ ಸಂಬಂಧಿಸಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಜೂನ್ 17 ರಂದು ಹುಬ್ಬಳಿಯಲ್ಲಿ ಅಧಿಕೃತ ಚಾಲನೆ ನೀಡಲಾಗುವುದು ನಂತರ ಜಿಲ್ಲೆಯಲ್ಲಿಯೂ ಕೂಡ ಕಾರ್ಯಕ್ರಮವನ್ನು ಶೀಘ್ರದಲ್ಲೇ ಉದ್ಘಾಟಿಸಲಾಗುವುದು ಎಂದ ಅವರು ಈ ಯೋಜನೆಯಡಿಯಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದ ಅನಿಲ ರಹಿತ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗುವುದು. ಈ ಸಲುವಾಗಿ ಒಂದು ಸಿಲಿಂಡರ್ಗೆ ಪಾವತಿಸುವ ಭದ್ರತಾ ಠೇವಣಿ, ರೆಗ್ಯೂಲೇಟರ್, ಗ್ಯಾಸ್ಟ್ಯೂಬ್ ಮತ್ತು ಅಳವಡಿಕೆ ವೆಚ್ಚ ಸೇರಿದಂತೆ 1920 ರೂಗಳನ್ನು ಸರ್ಕಾರವು ನೀಡುತ್ತದೆ ಎಂದರು.
ಜಿಲ್ಲೆಯಲ್ಲಿ ಬಿ.ಪಿ.ಎಲ್ ಹೊಂದಿರುವ ಮನೆಗಳನ್ನು ಸಮೀಕ್ಷೆ ಮಾಡಲಾಗಿದೆ. ಪ್ರಾರಂಭದಲ್ಲಿ ಅನಿಲ ಸಂಪರ್ಕ ಹೊಂದಿರದ 4,183 ಕುಟುಂಬಗಳಿಗೆ ಅನಿಲ ಸಂಪರ್ಕ ಕಲ್ಪಿಸಲಾಗುವುದು ಎಂದ ಅವರು 2011 ರ ಎಸ್.ಇ.ಸಿ.ಸಿ ಜನಗಣತಿಯಂತೆ ಬಿ.ಪಿ.ಎಲ್. ಕುಟುಂಬದ ಮಹಿಳಾ ಸದಸ್ಯರಿಗೆ ಈ ಅನಿಲ ಸಂಪರ್ಕವನ್ನು ನೀಡಲು ಉದ್ದೇಶಿಸಲಾಗಿದೆ. ಈ ಯೋಜನೆ ಪರಿಣಾಮಕರಿಯಾಗಿ ಅನುಷ್ಠಾನವಾಗಬೇಕಾದರೆ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು ಜಿಲ್ಲೆಯಲ್ಲಿ ಮಲೆನಾಡು ಪ್ರದೇಶದ ಹೆಚ್ಚು ಭಾಗಗಳಲ್ಲಿ ಬಡತನ ರೇಖೆಗಿಂತ ಕೆಗಿರುವ ಅನಿಲ ರಹಿತ ಕುಟುಂಬಗಳಿದ್ದು ಅವರು ಕಟ್ಟಿಗೆ ಯಿಂದ ಅಡುಗೆ ಮಾಡುತ್ತಿದ್ದಾರೆ ಅಂತಹ ಕುಟುಂಬಗಳನ್ನು ಸರ್ವೆ ಮಾಡಿ ಎಂದು ಹೇಳಿದರು.
ರಾಜ್ಯ ಸರ್ಕಾರವು ಅನಿಲ ಭಾಗ್ಯ ಯೋಜನೆ ಜಾರಿಗೆ ತಂದಿದೆ ಈ ಯೋಜನೆ ಉದ್ದೇಶ ರಾಜ್ಯವನ್ನು ಶೇ. 100 ರಷ್ಟು ಎಲ್.ಪಿ.ಜಿ ರಾಜ್ಯವನ್ನಾಗಿಸಲು ಕೇಂದ್ರ ಸರ್ಕಾರದ ಉಜ್ವಲ ಯೋಜನೆಯ ವ್ಯಾಪ್ತಿಗೆ ಒಳಪಡದೆ ಇರುವ ಅರ್ಹ ಕುಟುಂಬಗಳಿಗೆ ರಾಜ್ಯ ಸರ್ಕಾರವು ಅನಿಲ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯಡಿಯಲ್ಲಿ ಬಿ.ಪಿ.ಎಲ್. ಕುಟುಂಬದ ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ದೊರೆಯಲಿದೆ ಎಂದರು.
ಅಲ್ಲದೆ ರಾಜ್ಯವನ್ನು ಪಡಿತರ ಸೀಮೆಎಣ್ಣೆ ಮುಕ್ತ ರಾಜ್ಯವನ್ನಾಗಿ ಮಾಡಲು ರಾಜ್ಯ ಸರ್ಕಾರ ಪುನರ್ ಬೆಳಕು ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯಡಿಯಲ್ಲಿ ಅರ್ಹ ಕುಟುಂಬಗಳಿಗೆ 1 ಲೀಟರ್ ಸಹಾಯ ಧನಯುಕ್ತ ಸೀಮೆಎಣ್ಣೆಗೆ ಬದಲಾಗಿ ರೀಚಾರ್ಜೆಬಲ್ ಮಾಡಬಹುದಾದ ಎಲ್.ಇ.ಡಿ ಬಲ್ಪ್ಗಳನ್ನು ನೀಡಲು ಉದೇಶಿಸಿದೆ ಎಂದು ತಿಳಿಸಿದರು. ಸಭೆಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ ಮುನಿಸ್ವಾಮಯ್ಯ, ಗ್ಯಾಸ್ ಏಜೆನ್ಸಿಗಳ ಮಾಲೀಕರು ಹಾಗೂ ವಿತರಕರು ಹಾಜರಿದ್ದರು.