ಕೊಡಗಿನಲ್ಲಿ ಉತ್ತಮ ಮಳೆ : ಮಂಜು, ಮಳೆಗೆಂದೇ ಹರಿದು ಬಂತು ಪ್ರವಾಸಿಗರ ದಂಡು !
ಮಡಿಕೇರಿ ಜೂ.25: ಕೊಡಗು ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಮಡಿಕೇರಿಯಲ್ಲಿ ಮಂಜು ಮಳೆಗಾಗಿಯೇ ಪ್ರವಾಸಿಗರ ಆಗಮನ ಹೆಚ್ಚಾಗಿದೆ.
ಮೇ ಕೊನೆಯ ವಾರದಿಂದಲೇ ಮಳೆಯಾಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದ ಕಾವೇರಿ ನಾಡು ಕೊಡಗಿಗೆ ಜೂನ್ ಕೊನೆಯ ವಾರದಲ್ಲಿ ಮಳೆಯಾಗುತ್ತಿದೆ.
ಕಳೆದ ಎರಡು ದಿನಗಳಿಂದ ಮಡಿಕೇರಿ, ಸೋಮವಾರಪೇಟೆ, ತಲಕಾವೇರಿ, ಭಾಗಮಂಡಲ, ಸಿದ್ದಾಪುರ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ. ಮಡಿಕೇರಿ ನಗರದಲ್ಲಿ ಚರಂಡಿಗಳ ಅವ್ಯವಸ್ಥೆಯಿಂದ ರಸ್ತೆ ತುಂಬಾ ನೀರು ಹರಿಯಿತು. ಪ್ರವಾಸಿಗರ ವಾಹನವೂ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ವಾಹನ ಚಾಲಕರು ಹಾಗೂ ಪಾದಾಚಾರಿಗಳು ಕೆಸರಿನಿಂದ ಪರದಾಡುವಂತ್ತಾಯಿತು. ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಆಟೋರಿಕ್ಷಾಗಳು ತೆರಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊಂಚ ಬಿಡುವು ನೀಡುತ್ತಾ ಮಳೆಯಾದರೂ ಚರಂಡಿ, ತೋಡುಗಳು ತುಂಬಿ ಹರಿಯುತ್ತಿವೆ. ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗುವ ಕಾರಣದಿಂದ ಮಡಿಕೇರಿ ನಗರಸಭೆ ಈಗಾಗಲೇ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಎತ್ತರ ಹಾಗೂ ತಗ್ಗು ಪ್ರದೇಶಗಳ ನಿವಾಸಿಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಅಧಿಕಾರಿಗಳು ಸೂಚನೆಯನ್ನು ನೀಡಿದ್ದಾರೆ.
ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಮಂಜು ಸಹಿತ ಉತ್ತಮ ಮಳೆಯಾಗುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಹರಿವು ಹೆಚ್ಚಾಗಿದೆ.
:: ಮಳೆ ವಿವರ ::
ಕೊಡಗು ಜಿಲ್ಲೆಯ ಇಂದಿನ ಸರಾಸರಿ ಮಳೆ 23.5 ಮಿ.ಮೀ. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 35.9 ಮಿ.ಮೀ. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 16.6 ಮಿ.ಮೀ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 18.2 ಮಿ.ಮೀ. ಮಳೆಯಾಗಿದೆ. ಮಡಿಕೇರಿ ಕಸಬಾ 28.6, ನಾಪೋಕ್ಲು 34, ಸಂಪಾಜೆ 32.2, ಭಾಗಮಂಡಲ 49, ವಿರಾಜಪೇಟೆ 13.6, ಹುದಿಕೇರಿ 27.2, ಶ್ರೀಮಂಗಲ 22.6, ಪೊನ್ನಂಪೇಟೆ 10, ಅಮ್ಮತ್ತಿ 16.5, ಬಾಳೆಲೆ 10, ಸೋಮವಾರಪೇಟೆ ಕಸಬಾ 10.2, ಶನಿವಾರಸಂತೆ 25.2, ಶಾಂತಳ್ಳಿ 37.2, ಕೊಡ್ಲಿಪೇಟೆ 17, ಕುಶಾಲನಗರ 9.8, ಸುಂಟಿಕೊಪ್ಪ 10 ಮಿ.ಮೀ. ಮಳೆಯಾಗಿದೆ.
:: ಹಾರಂಗಿ ನೀರಿನ ಮಟ್ಟ ::
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2816.29 ಅಡಿಗಳು, ಹಾರಂಗಿಯಲ್ಲಿ ಬಿದ್ದ ಮಳೆ 10.2 ಮಿ.ಮೀ. ಇಂದಿನ ನೀರಿನ ಒಳ ಹರಿವು 680 ಕ್ಯೂಸೆಕ್.
:: ಹರಿದು ಬಂದ ಪ್ರವಾಸಿಗರ ದಂಡು ::
ಸೋಮವಾರ ಕೂಡ ಸರಕಾರಿ ರಜೆ ಇರುವ ಕಾರಣ ಶನಿವಾರದಿಂದಲೇ ಪ್ರವಾಸಿಗರ ದಂಡು ಕೊಡಗಿಗೆ ಹರಿದು ಬಂತು. ಹೆಸರುವಾಸಿ ಪ್ರವಾಸಿತಾಣ ರಾಜಾಸೀಟು, ಅಬ್ಬಿಜಲಪಾತ, ಮಾಂದಲಪಟ್ಟಿಯಲ್ಲಿ ಸುರಿಯುತ್ತಿದ್ದ ಮಳೆಯ ನಡುವೆಯೂ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಮೋಜು ಮಸ್ತಿಯಲ್ಲಿ ತೊಡಗಿದರು.
ಮಂಜು, ಮಳೆಯಲ್ಲಿ ನೆನೆದು ಕೇಕೇ ಹಾಕಿದರು, ಸೆಲ್ಫಿ ಕ್ಲಿಕ್ಕಿಸಿದರು. ಅಧಿಕ ಸಂಖ್ಯೆಯ ಪ್ರವಾಸಿ ವಾಹನಗಳ ಕಾರಣದಿಂದ ಪ್ರವಾಸಿತಾಣಗಳಲ್ಲಿ ವಾಹನದಟ್ಟಣೆ ಇತ್ತು. ಎಟಿಎಂಗಳಲ್ಲಿ ನಗದು ಖಾಲಿಯಾಗಿ ಪ್ರವಾಸಿಗರು ಪರದಾಡುವ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಹೊಟೇಲ್, ಹೋಂಸ್ಟೇಗಳು ಬಹುತೇಕ ಭರ್ತಿಯಾಗಿದ್ದವು. ಮಳೆಯಲ್ಲೇ ಮೈ ಮರೆಯುವುದಕ್ಕಾಗಿ ಮಡಿಕೇರಿಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರವಾಸಿಗರ ನಿರೀಕ್ಷೆಯಂತೆ ಮಳೆಯೂ ಸಾಥ್ ನೀಡುತ್ತಿದೆ.