ಯುವತಿ ಪೋಷಕರಿಂದ ಯುವಕನ ತಂದೆ, ತಮ್ಮನನ್ನು ಕಟ್ಟಿ ಹಾಕಿ ಹಲ್ಲೆ
ವಿಜಯಪುರ, ಜೂ. 28: ಪರಸ್ಪರ ಪ್ರೀತಿಸುತ್ತಿದ್ದ ಅನ್ಯಕೋಮಿನ ಪ್ರೇಮಿಗಳು ಪರಾರಿಯಾದ ಹಿನ್ನೆಲೆಯಲ್ಲಿ ಯುವತಿಯ ಪೋಷಕರು ಯುವಕನ ತಂದೆ ಹಾಗೂ ತಮ್ಮನನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹಾಳಗುಂಡಕನಾಳ ಗ್ರಾಮದಲ್ಲಿ ಬುಧವಾರ ವರದಿಯಾಗಿದೆ.
ಹಾಳಗುಂಡಕನಾಳ ಗ್ರಾಮದ ದಲಿತ ಯುವಕ ನಿಂಗಪ್ಪ ಹರಿಜನ ಹಾಗೂ ಮಾಬುಸಾಬ್ ಎಂಬವರ ಪುತ್ರಿ ಮಾಶಾಬಿ ಪರಸ್ಪರ ಪ್ರೀತಿಸುತ್ತಿದ್ದು, ಇತ್ತೀಚೆಗೆ ಪರಾರಿಯಾಗಿದ್ದರೆಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಯುವತಿಯ ತಂದೆ ಮಾಬುಸಾಬ್ ಹಾಗೂ ಆಕೆಯ ಕುಟುಂಬಸ್ಥರು ಯುವಕ ನಿಂಗಪ್ಪನ ತಂದೆ ಮರಿಯಪ್ಪ ಮತ್ತು ತಮ್ಮ ರಮೇಶ್ನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದು, ಈ ಘಟನೆಯ ವೀಡಿಯೊ ಮೊಬೈಲ್ನಲ್ಲಿ ಸೆರೆಯಾಗಿದೆ.
ಘಟನೆಯಲ್ಲಿ ಇಬ್ಬರೂ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಕೇವಲ ಮರಕ್ಕೆ ಕಟ್ಟಿ ಹಾಕಿದ್ದವರನ್ನು ಬಿಡಿಸಿ ತೆರಳಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.