ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ
ತುಮಕೂರು, ಜೂ.29: ರಸ್ತೆ ಅಪಘಾತಗಳು ಸಂಭವಿಸಿದ ಸಂಕಷ್ಟ ಪರಿಸ್ಥಿತಿಯಲ್ಲಿ ಗಾಯಾಳುಗಳಿಗೆ ಕೂಡಲೇ ಚಿಕಿತ್ಸೆ ಕೊಡಿಸಲು ನೆರವಾಗುವವರಿಗೆ ಜೀವರಕ್ಷಕ ಪ್ರಶಸ್ತಿ ನೀಡಿ ಗೌರವಿಸಲು ಅರ್ಹರಿಂದ ಅರ್ಜಿ ಅಹ್ವಾನಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.
ಕೆ.ವಿ.ರಂಗಸ್ವಾಮಿ ತಿಳಿಸಿದ್ದಾರೆ.
ಸಮೀಕ್ಷೆ ಪ್ರಕಾರ ಅಪಘಾತ ಹಾಗೂ ಸಾವುಗಳ ಸಂಖ್ಯೆಯಲ್ಲಿ ರಾಜ್ಯವು 3ನೇ ಸ್ಥಾನದಲ್ಲಿದ್ದು, ಇದನ್ನು ತಗ್ಗಿಸುವ ಸಲುವಾಗಿ ಅಪಘಾತದ ಸಂದರ್ಭದಲ್ಲಿ ಸ್ಥಳದಲ್ಲಿ ಲಭ್ಯವಿರುವ ವ್ಯಕ್ತಿಗಳು ಯಾವುದೇ ವಿಳಂಬವಿಲ್ಲದೆ ಗಾಯಾಳುಗಳನ್ನು ರಕ್ಷಿಸಲು ತಕ್ಷಣವೇ ಆಸ್ಪತ್ರೆಗಳಿಗೆ ಸಾಗಿಸುವುದು ಹಾಗೂ ಚಿಕಿತ್ಸೆ ಕೊಡಿಸಲು ನೆರವಾಗುವಂತೆ ಪ್ರೋತ್ಸಾಹಿಸಲು ಈ ಪ್ರಶಸ್ತಿ ನೀಡಲಾಗುತ್ತಿದೆ. ಯಾವುದೇ ಬಹುಮಾನ ಅಥವಾ ಲಾಭದ ನೀರಿಕ್ಷೆಗಳಿಲ್ಲದೆ, ವಿಶೇಷ ಸಂಬಂಧಗಳಿಲ್ಲದೆ ಸ್ವಯಂ ಪ್ರೇರಿತರಾಗಿ ಬಂದು ಗಾಯಾಳುಗಳಿಗೆ ಸಹಾಯ ಮಾಡುವ ದಯಾಳು ಹಾಗೂ ಉಪಕಾರಿ ವ್ಯಕ್ತಿಗಳು ಈ ಪ್ರಶಸ್ತಿಗೆ ಅರ್ಹರು.
ಕರ್ನಾಟಕ ರಾಜ್ಯ ವ್ಯಾಪ್ತಿಯೊಳಗಿನ ರಸ್ತೆ ಅಪಘಾತದ ಗಾಯಾಳುಗಳಿಗೆ ಸಹಾಯ ಮಾಡಲು ಶ್ರಮಿಸುವ ಯಾವುದೇ ವಯಸ್ಸಿನ, ಯಾವುದೇ ರಾಷ್ಟ್ರೀಯತೆಯ ವ್ಯಕ್ತಿ, ರಸ್ತೆ ಅಪಘಾತ ಗಾಯಾಳುಗಳಿಗೆ ನೆರವಾದ ಅಥವಾ ಜೀವ ಉಳಿಸಲು ಶ್ರಮಿಸಿದ ವ್ಯಕ್ತಿಯು ಪ್ರಶಸ್ತಿಗಾಗಿ ಸ್ವಯಂ ರೂಪದಲ್ಲಿ ಅಥವಾ ಸಾಕ್ಷಿಯಾದ ವ್ಯಕ್ತಿಯಿಂದ ನಾಮಕರಣಗೊಳ್ಳಬಹುದಾಗಿದೆ.
ಎಲ್ಲಾ ನಾಮಕರಣ ಅರ್ಜಿಗಳನ್ನು ಜಿಲ್ಲಾ ಜೀವರಕ್ಷಕ ಪ್ರಶಸ್ತಿ ಸಮಿತಿಯು ಪರೀಶೀಲಿಸಿ ಮಾರ್ಗಸೂಚಿಯ ಅನ್ವಯ ಮೌಲ್ಯಮಾಪನ ನಡೆಸಿ, ವ್ಯಕ್ತಿಗಳು ನೀಡಿದ ಸಹಾಯ ಹಾಗೂ ಸದರಿ ಸಹಾಯದಿಂದ ಉಂಟಾದ ಉತ್ತಮ ಪರಿಣಾಮ, ಮುಂತಾದವುಗಳನ್ನು ಆಧರಿಸಿ,ಪ್ರಶಸ್ತಿಗಳನ್ನು ಪ್ರಥಮ,ದ್ವೀತೀಯ ಹಾಗೂ ತೃತೀಯ ಎಂದು ವಿಭಾಗಿಸಿ ಘೋಷಿಸಲಾಗುತ್ತದೆ. ಪ್ರಥಮ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಹಾಗೂ ಇನ್ನುಳಿದ ಪ್ರಶಸ್ತಿಗಳನ್ನು ಸಂಬಂಧಿಸಿದ ಜಿಲ್ಲೆಗಳಲ್ಲಿ ಪ್ರಧಾನ ಮಾಡಲಾಗುವುದು. ಪ್ರಶಸ್ತಿಯನ್ನು ಪ್ರತಿ ವರ್ಷ ಎರಡು ಬಾರಿ ನೀಡಲಾಗುವುದು. ನಾಮಕರಣ ಅರ್ಜಿಗಳನ್ನು ಜನವರಿಯಿಂದ ಜುಲೈವರೆಗೆ ಹಾಗೂ ಆಗಸ್ಟ್ನಿಂದ ಡಿಸೆಂಬರ್ ವರೆಗೆ ಸ್ವೀಕರಿಸಲಾಗುವುದು. ಪ್ರಶಸ್ತಿಗಳನ್ನು ಪ್ರತಿ ವರ್ಷ ಆಗಸ್ಟ್ 15ರ ಸ್ವಾತಂತ್ರ ದಿನಾಚರಣೆ ಮತ್ತು ಜನವರಿ 26ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ನೀಡಲಾಗುವುದು.
ಅರ್ಜಿಯನ್ನು 2017ರ ಜುಲೈ 31ರೊಳಗೆ ಸಲ್ಲಿಸಬೇಕು.ಹೆಚ್ಚಿನ ಮಾಹಿತಿಗಾಗಿ ತುಮಕೂರು-7259003320, ಚಿಕ್ಕನಾಯಕನಹಳ್ಳಿ-7259003316, ಕೊರಟಗೆರೆ-7259003308, ಮಧುಗಿರಿ-7259003313, ಗುಬ್ಬಿ-9739545854, ತುರುವೇಕೆರೆ-8904179964,ಶಿರಾ-7259003307,ಪಾವಗಡ-7259003310/09/12,ಕುಣಿಗಲ್-7259003319,ತಿಪಟೂರು-7259003318 ಅಥವಾ ಜಿಲ್ಲಾ ಸಂಯೋಜಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ತುಮಕೂರು ಅಥವಾ ದೂರವಾಣಿ ಸಂಖ್ಯೆ-7349254649 ಅನ್ನು ಸಂಪರ್ಕಿಸಬಹ್ಮದೆಂದುಡಾ.ಹೆಚ್.ವಿ.ರಂಗಸ್ವಾಮಿತಿಳಿಸಿದ್ದಾರೆ.