ದೇಶದಲ್ಲಿ ಪ್ರತಿದಿನ ಒಂದಲ್ಲ ಒಂದು ಕಾರಣದಿಂದ ಮಾನವ ಹಕ್ಕುಗಳು ಉಲ್ಲಂಘನೆ: ಡಾ॥. ಲಕ್ಷ್ಮಣ ಸಿಂಗ್
ಬಾಗೇಪಲ್ಲಿ: 30 ರಾಜ್ಯಗಳು, ಸುಮಾರು 6 ಲಕ್ಷ ಗ್ರಾಮಗಳು, ಸುಮಾರು 6 ಸಾವಿರ ಜಾತಿಗಳು, 25 ರಾಷ್ಟ್ರೀಯ ಪಕ್ಷಗಳು, ಸುಮಾರು 130 ಕೋಟಿ ಜನಸಂಖ್ಯೆ ಇರುವ ಈ ಬೃಹತ್ ದೇಶದಲ್ಲಿ ಪ್ರತಿದಿನ ಒಂದಲ್ಲ ಒಂದು ಕಾರಣದಿಂದ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿವೆ ಎಂದು ಮಾನವ ಹಕ್ಕುಗಳ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಡಾ॥. ಸಮೇತನ ಹಳ್ಳಿ ಲಕ್ಷ್ಮಣ ಸಿಂಗ್ ಅಭಿಪ್ರಾಯಪಟ್ಟರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ, ಕೆರೆ, ಕುಂಟೆ, ಕಾಲುವೆ, ನದಿ ಅಂಗಳ, ರಸ್ತೆ ಇತ್ಯಾದಿಗಳ ಒತ್ತುವರಿ ಮಾನವ ಹಕ್ಕುಗಳ ಉಲ್ಲಂಘಣೆಯಾಗಿದೆ. ಸರ್ಕಾರದಿಂದ ಬರುವ ಅನುದಾನಗಳು ಅರ್ಹ ಫಲಾನುಭವಿಗಳ ಸಿಗದಂತೆ ಮಾಡುತ್ತಿರುವುದು ಮಾನವ ಹಕ್ಕುಗಳ ಉಲ್ಲಂಘಣೆಯಾಗಿದೆ. ಶುದ್ಧ ಕುಡಿಯುವ ನೀರು ಪಡೆಯದೆ ಇರುವುದು ಮಾನವ ಹಕ್ಕುಗಳ ಉಲ್ಲಂಘಣೆಯಾಗಿದೆ ಎಂದರು. ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ, ಸರ್ವೋಚ್ಛ ನ್ಯಾಯಾಲಯದ ರಾಜೇಂದ್ರಬಾಬು, ಲೋಕಾಯುಕ್ತ ವೆಂಕಟಾಚಲಯ್ಯ, ವಿಜ್ಞಾನಿ ಸಿ.ಎನ್. ರಾವ್, ಜಸ್ಟೀಸ್ ಆನಂದ್, ನಾಗಮೋಹನ್ದಾಸ್, ಇನ್ಪೋಸೀಸ್ ನಾರಾಯಣಮೂರ್ತಿ ಇಂತಹ ಮಹನೀಯರಿಗೆ ಜನ್ಮ ನೀಡಿದ್ದು ಇದೇ ಅವಿಭಜಿತ ಕೋಲಾರ ಜಿಲ್ಲೆ ಎಂದು ಅವರು ಹೇಳಿದರು.
ನಂದಿಬೆಟ್ಟ, ಚಿಕ್ಕತಿರುಪತಿ, ಅಂತರಗಂಗೆ, ಅವಣಿ ದೇವಾಲಯ ಕೈವಾರ ಇತ್ಯಾದಿ ಅನೇಕ ಪುಣ್ಯಕ್ಷೇತ್ರಗಳನ್ನು ಒಳಗೊಂಡಿದೆ. ಇಂತಹ ಜಿಲ್ಲೆಯಲ್ಲಿ ಶಾಶ್ವತ ನೀರಾವರಿಗಾಗಿ ಭಿಕ್ಷೆ ಬೇಡಬೇಕಾಗಿರುವ ಸ್ಥಿತಿ ನಿರ್ಮಾಣವಾಗಿದೆ. ಶಾಶ್ವತ ನೀರಿಗಾಗಿ ನದಿ ಜೋಡನೆಯಂತಹ ಯೋಜನೆಯ ಬಗ್ಗೆ ನಮ್ಮನ್ನಾಳುವ ಯಾವುದೇ ಸರ್ಕಾರಗಳು ಗಮನ ಹರಿಸುತ್ತಿಲ್ಲ. ಸಂವಿಧಾನದಲ್ಲಿ ಇರುವಂತೆ ಆಹಾರ ಭದ್ರತೆ, ಮೂಲಭೂತ ಸೌಕರ್ಯಗಳು, ಶಿಕ್ಷಣ ನೀಡದೇ ಇರುವುದು ಮಾನವ ಹಕ್ಕುಗಳ ಸ್ಪಷ್ಷ ಉಲ್ಲಂಘನೆಯಾಗುತ್ತಿದೆ ಎಂದರು.
ತಾಲೂಕು ಅಧ್ಯಕ್ಷ ಗಿರೀಶ್ ಮಾತನಾಡಿ, ಬಾಗೇಪಲ್ಲಿ ತಾಲೂಕು ಹಿಂದುಳಿದ ಪ್ರದೇಶವಾಗಿದೆ. ಈ ಭಾಗದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿವೆ. ಈ ಭಾಗದ ಜನ ಸರ್ಕಾರದ ಸೌಲಭ್ಯ ಪಡೆಯಲು ವಿಫಲವಾಗುತ್ತಿದ್ದಾರೆ. ವಿದ್ಯುನ್ಮಾನ ವ್ಯವಸ್ಥೆ ಹಾಗೂ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಮಾನ್ಯ ಜನ ಬದುಕು ನಡೆಸುವುದು ದುಸ್ತರವಾಗಿದೆ. ನವ ಸಮಾಜದ ನಿರ್ಮಾಣಕ್ಕಾಗಿ ಹಾಗೂ ಮಾನವ ಹಕ್ಕುಗಳ ಜಾಗೃತಿಗಾಗಿ ಸಮಿತಿಯನ್ನು ಅಸ್ಥಿತ್ವಕ್ಕೆ ತರಲಾಗಿದೆ ಎಂದರು.
ಇದೇ ಸಂದರ್ದಲ್ಲಿ ತಾಲ್ಲೂಕು ಗೌರವಾಧ್ಯಕ್ಷ ಟಿ.ಷಫಿಉಲ್ಲಾ, ತಾಲ್ಲೂಕು ಉಪಾಧ್ಯಕ್ಷ ಎಂ.ಎನ್. ಅಶೋಕ್, ಸಹಕಾರ್ಯದರ್ಶಿ ಆರ್.ಜಿ. ನಾಗೇಶ್, ಖಜಾಂಚಿ ಎಸ್. ರುದ್ರೇಶ್, ಸುನಿಲ್ಕುಮಾರ್, ಉಪಾಧ್ಯಕ್ಷ ಟಿ.ಸಿ. ಮಧು, ರೈತ ಸಮಿತಿ ಅಧ್ಯಕ್ಷ ರನ್ನಾಗಿ ಆದಿನಾರಾಯಣರೆಡ್ಡಿ, ಕಾರ್ಮಿಕ ಸಮಿತಿ ಅಧ್ಯಕ್ಷರನ್ನಾಗಿ ಪಿ.ಎನ್. ಶಿವಪ್ಪ ಹಾಗೂ ಮಹಿಳಾ ಸಮಿತಿ ಅಧ್ಯಕ್ಷರಾಗಿ ಶ್ರೀಮತಿ ಕೆ.ಎಲ್. ಸುಬ್ಬರತ್ನ ರವರನ್ನು ಆಯ್ಕೆ ಮಾಡಲಾಯಿತು.