ತೆಲಗಿ ತಂಡದ ಮೂವರಿಗೆ ಕೆಳ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಎತ್ತಿ ಹಿಡಿದ ಹೈಕೋರ್ಟ್
ಬೆಂಗಳೂರು, ಜು.17: ನಕಲಿ ಛಾಪಾ ಕಾಗದ ಮಾರಾಟ ಮತ್ತು ಮುದ್ರಣ ಹಗರಣದ ಪ್ರಮುಖ ಅಪರಾಧಿ ತೆಲಗಿ ತಂಡದ ಮೂವರಿಗೆ ಸಿಬಿಐ ವಿಶೇಷ ನ್ಯಾಯಾಲಯ ವಿಧಿಸಿದ್ದ 5 ವರ್ಷ ಜೈಲು ಶಿಕ್ಷೆ ಹಾಗೂ ತಲಾ 50 ಸಾವಿರ ರೂ.ದಂಡವನ್ನು ಹೈಕೋರ್ಟ್ ಕಾಯಂಗೊಳಿಸಿದೆ.
ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅಬ್ದುಲ್ ವಾಹಿದ್, ಸದಾಶಿವ ಸೇರಿ ಮೂವರು ಸಲ್ಲಿಸಿದ್ದ ಮೇಲ್ಮನವಿಗಳನ್ನು ನ್ಯಾಯಮೂರ್ತಿ ರವಿ ಮಳೀಮಠ ಹಾಗೂ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹ ಅವರಿದ್ದ ವಿಭಾಗೀಯ ಪೀಠ ವಜಾ ಮಾಡಿದೆ.
ತನಿಖೆ ವೇಳೆ ಆರೋಪಿಗಳಿಂದ ಲಕ್ಷಾಂತರ ರೂ.ನಗದು ಹಾಗೂ ನಕಲಿ ಛಾಪಾ ಕಾಗದ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿತ್ತು. ಮಡಿವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಅಲ್ಲದೆ, ನಕಲಿ ಛಾಪಾ ಕಾಗದ ಮುದ್ರಣ ಮಾಡುತ್ತಿದ್ದೇವೆ ಎಂಬ ಸಂಗತಿ ಅರಿವಿದ್ದರೂ ಆರೋಪಿಗಳು ಕಾನೂನು ಬಾಹಿರ ಕೆಲಸದಲ್ಲಿ ನಿರತರಾಗಿದ್ದರು. ಇಡೀ ಹಗರಣದಲ್ಲಿ ದೇಶದ ಬೊಕ್ಕಸಕ್ಕೆ 25 ಸಾವಿರ ಕೋಟಿ ನಷ್ಟವಾಗಿರುವುದು ತನಿಖೆ ವೇಳೆ ಕಂಡು ಬಂದಿದೆ ಎಂದು ಸಿಬಿಐ ಆರೋಪಿಸಿತ್ತು.