ವರದಕ್ಷಿಣೆ ಕಿರುಕುಳ ಪ್ರಕರಣ: ಶಿಕ್ಷೆ ಪ್ರಕಟ
ದಾವಣಗೆರೆ, ಜು.18: ವರದಕ್ಷಿಣೆ ಕಿರುಕುಳ ಪ್ರಕರಣದ ಸಂಬಂಧ ನ್ಯಾಯಾಲಯದ ಮೆಟ್ಟಿಲು ಏರಿದ್ದ ಮಹಿಳೆಯ ಪತಿ ಮತ್ತು ಅತ್ತೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಇಲ್ಲಿನ ಮೂರನೇ ಜೆ.ಎಂ.ಎಫ್.ಸಿ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.
ಷಡಕ್ಷರಪ್ಪ ಮತ್ತು ಈತನ ತಾಯಿ ಸುಶೀಲಮ್ಮ ಶಿಕ್ಷೆಗೆ ಗುರಿಯಾದವರು. ಕಲ್ಪನಾ ಎಂಬ ಗೃಹಿಣಿ ವರದಕ್ಷಿಗೆ ಕಿರುಕುಳ ಸಂಬಂಧ ತಮ್ಮ ಗಂಡ ಷಡಕ್ಷರಪ್ಪ ಮತ್ತು ಅತ್ತೆ ಸುಶೀಲಮ್ಮ ವಿರುದ್ಧ ಮಾನಸಿಕ ಮತ್ತು ದೈಹಿಕ ಹಿಂಸೆ ಕುರಿತು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸಂತ್ರಸ್ಥ ಮಹಿಳೆ ಕಲ್ಪನಾ ದೂರಿನ ಮೇರೆಗೆ ಮಹಿಳಾ ಠಾಣಾ ಪೊಲೀಸರು ನ್ಯಾಯಾಲಯಕ್ಕೆ ದೋಷಾ ರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎನ್. ಶಿವಕುಮಾರ್ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಷಡಕ್ಷರಪ್ಪಗೆ 6 ತಿಂಗಳು ಸಾದಾ ಸಜೆ ಹಾಗೂ 10 ಸಾವಿರ ರು. ದಂಡ, ಅತ್ತೆ ಸುಶೀಲಮ್ಮಗೆ 1 ತಿಂಗಳು ಸಾದಾ ಸಜೆ ಹಾಗು 5 ಸಾವಿರ ರು. ದಂಡ ವಿಧಿಸಿದೆ. ದಂಡದ ಹಣದಲ್ಲಿ 10 ಸಾವಿರ ರು. ಪರಿಹಾರವಾಗಿ ನೊಂದ ಮಹಿಳೆಗೆ ನೀಡುವಂತೆ ಆದೇಶಿಸಿದ್ದಾರೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಅಂಕದ ಮುರಿಗೇಶ ಹುಚ್ಚಪ್ಪ ವಾದ ಮಂಡಿಸಿದ್ದರು.