ಭಾರತದ ನಿಜವಾದ ಸಮಸ್ಯೆ ಭೂತಾನ್ ಗಡಿಯಲ್ಲ; ಭೂತಾನ್ ನೀತಿ

Update: 2017-07-19 18:29 GMT

ಭಾಗ-1 

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಾಗ ಹಿಮಾಲಯ ಪ್ರದೇಶದ ಭೂತಾನ್‌ನ ಆಯಕಟ್ಟಿನ ಅನಿವಾರ್ಯ ಸಮಸ್ಯೆಗಳೇನೆಂದು ಅವರಿಗೆ ಸ್ಪಷ್ಟವಾದ ಅರಿವು ಇತ್ತು ಎನ್ನುವುದರಲ್ಲಿ ಅನುಮಾನವಿಲ್ಲ. ಅವರ ಮೊದಲ ಮೊದಲ ವಿದೇಶಿ ಭೇಟಿ ಭೂತಾನ್‌ಗೆ ನೀಡಿದ ಭೇಟಿಯಾಗಿತ್ತು. ಬಳಿಕ 2014ರಲ್ಲಿ ಅವರು ನೇಪಾಳಕ್ಕೆ ಭೇಟಿ ನೀಡಿದರು.

ಭೂತಾನ್‌ನಲ್ಲಿರುವ ಹೇರಳವಾದ ನೈಸರ್ಗಿಕ ಸಂಪನ್ಮೂಲಗಳು, ಜಲವಿದ್ಯುತ್ ಸಾಮರ್ಥ್ಯ ಇತ್ಯಾದಿಗಳಿಂದ ಲಾಭ ಪಡೆಯುವುದೂ ಸೇರಿದಂತೆ, ಹಲವು ವಿಷಯಗಳು ಮೋದಿಯವರ ಭೂತಾನ್ ಭೇಟಿಯ ಮುಖ್ಯ ಕಾಳಜಿಗಳಾಗಿದ್ದವು. ಆದರೆ ಇವೆಲ್ಲವುಗಳ ಆಳದಲ್ಲಿ ಚೀನಾ, ಭೂತಾನ್‌ನೊಂದಿಗೆ ತನ್ನ ಸಂಪರ್ಕಗಳನ್ನು, ಸಂಬಂಧಗಳನ್ನು ವೃದ್ಧಿಸಿಕೊಳ್ಳುತ್ತಿರುವುದರ ಸೂಚನೆಗಳ ಕುರಿತ ನೋವಿನಿಂದ ಕೂಡಿದ ಅರಿವು ಕೂಡ ಅವರಿಗೆ ಇತ್ತು.
ನಿಜವಾಗಿ, 2013ರ ಬೇಸಿಗೆಯಲ್ಲಿ ಸಂಕಷ್ಟದ ಸ್ಥಿತಿಯೊಂದು ಎದುರಾದಾಗ, ಆ ಬಗ್ಗೆ ಟೀಕಾಕಾರರು ಬೊಬ್ಬೆ ಹೊಡೆಯುವವರೆಗೆ ಹೆಚ್ಚಿನ ಭಾರತೀಯರಿಗೆ ಭಾರತ್-ಭೂತಾನ್ ಸಮಸ್ಯೆ ಗೊತ್ತಿರಲಿಲ್ಲ. 2013ರಲ್ಲಿ ಎದುರಾದ ಸಮಸ್ಯೆ ಎಷ್ಟು ಗಂಭೀರವಾದದ್ದೆಂದು ಬಹಳ ಸಮಯದಿಂದ ಭಾರತವು ಜತನದಿಂದ ಪೋಷಿಸಿ ಕಾಪಾಡಿಕೊಂಡು ಬಂದಿದ್ದ ಭೂತಾನ್‌ನೊಂದಿಗಿನ ಸಂಬಂಧಗಳನ್ನು ತುಂಬ ಹದಗೆಡಿಸಿತು. ಅದೇನಿದ್ದರೂ, ಬಹಳ ವರ್ಷಗಳಿಂದ ಭಾರತದ ಪಾಲಿಗೆ ಭೂತಾನ್ ಎನ್ನುವುದು ಭಾರತವು ಚೀನಾದ ವಿರುದ್ಧ ನಡೆಸುತ್ತ ಬಂದಿರುವ ಆಯಕಟ್ಟಿನ ರಾಜಕೀಯ ಆಟದ ಕೇವಲ ಒಂದು ದಾಳವಾಗಿತ್ತು, ವಸ್ತುವಾಗಿತ್ತು. ಈ ಆಟದಲ್ಲಿ ‘ಕ್ಯಾರಟ್-ಆ್ಯಂಡ್-ಸ್ಟಿಕ್’ ತಂತ್ರವೇ ಒಟ್ಟು ವ್ಯವಹಾರದ ನಿಯಮವಾಯಿತು.


ಗ್ಯಾಗರ್‌ಗೆ ಡ್ರಕ್‌ರವರ ನಿಷ್ಠೆ
1949ರಲ್ಲಿ ನಡೆದ ಮಿತ್ರತ್ವ ಒಪ್ಪಂದವು ಸಮಕಾಲೀನ ಭಾರತ-ಭೂತಾನ್ ಸಂಬಂಧವನ್ನು ಮುನ್ನಡೆಸುತ್ತ ಬಂದಿದೆ. ಈ ಒಪ್ಪಂದದ ಎರಡನೆ ಪರಿಚ್ಛೇದವು ಭಾರತಕ್ಕೆ ಭೂತಾನ್‌ನ ವಿದೇಶ ನೀತಿಯನ್ನು ಮುನ್ನಡೆಸುವ, ಗೈಡ್ ಮಾಡುವ ಜವಾಬ್ದಾರಿ ವಹಿಸಿತು. ಒಪ್ಪಂದವು ಪರಸ್ಪರ ವಿಶ್ವಾಸ ಮತ್ತು ಸಮಾನತೆಯ ವೌಲ್ಯಗಳನ್ನು ಒಳಗೊಂಡಿತ್ತು. ಆದರೆ, ‘ಗ್ಯಾಗರ್’ಗೆ ಅಂದರೆ, ಪವಿತ್ರ ಭೂಮಿ ಭಾರತದ ಬಗ್ಗೆ, ಭೂತಾನ್‌ಗೆ ಇದ್ದ ಆಳವಾದ ನಿಷ್ಠೆಯೇ ಒಪ್ಪಂದವನ್ನು ಮುನ್ನಡೆಸಿದ ಶಕ್ತಿಯಾಗಿತ್ತು. ‘ಗುರು’ ಎಂದೂ ಕರೆಯಲ್ಪಡುವ, 8ನೆ ಶತಮಾನದ ಭಾರತೀಯ ನಾಯಕ ಮತ್ತು ತತ್ವಜ್ಞಾನಿ ಪದ್ಮಸಂಭವನ ಜ್ಞಾನದ, ವಿವೇಕದ ಕೊಡುಗೆಯಾಗಿರುವ ರಾಷ್ಟ್ರೀಯ ಭಾವಪುಂಜ ಹಾಗೂ ವೌಲ್ಯಗಳು ಆಳವಾಗಿ ಬೇರೂರಿರುವ ನಿಷ್ಠೆ, ಸ್ವಾಮಿಭಕ್ತಿ ಈ ಶಕ್ತಿಯ ಹಿಂದಿತ್ತು.
ಎಲ್ಲ ಭೌಗೋಲಿಕ ಸೆಳೆತ ಹಾಗೂ ಒತ್ತಡಗಳ ಹೊರತಾಗಿಯೂ ಭೂತಾನ್, ಭಾರತದ ಅತ್ಯಂತ ವಿಶ್ವಾಸಾರ್ಹ ಮಿತ್ರನಾಗಿ ಭಾರತದ ಬೆಂಬಲಕ್ಕೆ ನಿಂತಿತು. ಭಾರತದ ಕುರಿತ ಅದರ ಬದ್ಧತೆ ಅಚಲವಾಗಿತ್ತು. 1962ರಲ್ಲಿ ಭಾರತ-ಚೀನಾ ಸಂಘರ್ಷದ ವೇಳೆ ಅದು ಭಾರತದ ಪರವಾಗಿ ನಿಂತಿತು. 1972ರಲ್ಲಿ ಭಾರತವು ಪಾಕಿಸ್ತಾನವನ್ನು ಹೋಳುಗಳಾಗಿ ಮಾಡಿದಾಗ, ಬಾಂಗ್ಲಾದೇಶಕ್ಕೆ ಸ್ವಾತಂತ್ರ ದೊರಕಿಸಿದ ಭಾರತದ ಕ್ರಮವನ್ನು ಅನುಮೋದಿಸಿದ ಮೊದಲ ರಾಷ್ಟ್ರಗಳೆಂದರೆ ಭೂತಾನ್ ಮತ್ತು ಮಂಗೋಲಿಯಾ. ಭೂತಾನ್ ಯಾವತ್ತೂ ಚೀನಾದ ಪರವಾಗಿ ನಿಂತು ರಾಜಕಾರಣ ಮಾಡಲಿಲ್ಲ. ಭೂತಾನ್‌ನ ಜಲವಿದ್ಯುತ್ ಸಂಪನ್ಮೂಲಗಳ, ಸೊತ್ತುಗಳ ಶೋಷಣೆಯನ್ನು ಅಥವಾ ಬಳಕೆಯನ್ನು, ನೇಪಾಲದ ಹಾಗೆ, ಭೂತಾನ್ ಎಂದೂ ನಿರಾಕರಿಸಲಿಲ್ಲ.


ಕಂದಕ
ಭಾರತದ ಆಯಕಟ್ಟಿನ ಅತಿ ಮುಖ್ಯ ತಿಳುವಳಿಕೆ ಕೂಡ ಕಣ್ಮರೆಯಾದಂತೆ ತೋರುತ್ತದೆ. ವಸಾಹತುಶಾಹಿ ರೀತಿಯ ರಕ್ಷಿತ ರಾಜ್ಯತ್ವ(ಪ್ರೊಟೆಕ್ಟೊರೇಟ್-ಶಿಪ್)ನ ಕಾಲ ಕಳೆದುಹೋಗಿದ್ದರೂ ಭಾರತದ ಕಂದುಬಣ್ಣದ(ಬ್ರೌನ್) ನವ ಬ್ರಿಟಿಷರು ಭೂತಾನ್‌ನಂತಹ ಒಂದು ದೇಶವನ್ನು ಹಗುರವಾಗಿ ಪರಿಗಣಿಸಲಾರಂಭಿಸಿದರು. ಆರ್ಥಿಕ ನೆರವಿನ ಮೂಲಕ ಸ್ವಾಮಿನಿಷ್ಠೆ(ಲಾಯಲ್ಟಿ)ಯನ್ನು ಖರೀದಿಸುವ ವಸಾಹತುಶಾಹಿ ರೀತಿಯನ್ನು ಭಾರತದ ನೀತಿ ನಿರೂಪಕರು ವಿವೇಚನಾರಹಿತವಾಗಿ ಮುಂದುವರಿಸಿದರು. ಆಟದಲ್ಲಿ ಸಮತೋಲನ ಸಾಧಿಸುವ ಕಲೆಯನ್ನು ಭಾರತದ ಇತರ ನೆರೆರಾಷ್ಟ್ರಗಳು ಕರಗತಮಾಡಿಕೊಂಡವಾದರೂ, ಭಾರತ ವಿರೋಧಿಗಳ ಸಾಲಿಗೆ ಸೇರುವಲ್ಲಿ ಭೂತಾನ್ ಸ್ವಲ್ಪ ವಿಳಂಬ ಮಾಡಿದೆ.
ವಿಶೇಷವಾಗಿ, 1962ರ ಭಾರತ-ಚೀನಾ ಮತ್ತು 1971 ಭಾರತ-ಪಾಕ್ ಯುದ್ಧದ ಬಳಿಕ, ತನ್ನನ್ನು ರಕ್ಷಿಸುವ ಭಾರತದ ಸಾಮರ್ಥ್ಯವನ್ನು ಭೂತಾನ್ ಅನುಮಾನಿಸತೊಡಗಿತು.
1971ರಲ್ಲಿ ಭೂತಾನ್‌ಗೆ ವಿಶ್ವಸಂಸ್ಥೆಯ ಸದಸ್ಯತ್ವ ದೊರಕಿಸಲು ಭಾರತ ನೆರವು ನೀಡಿತಾದರೂ, ಇದರ ಹಿಂದೆ ಭೂತಾನ್‌ಗೆ ಅಂತಾರಾಷ್ಟ್ರೀಯ ಅಭಿವೃದ್ಧಿ ಮತ್ತು ಹಣಕಾಸಿನ ನೆರವು ದೊರಕುವಂತೆ ಮಾಡುವ ಉದ್ದೇಶವಿತ್ತು.
ಹೀಗೆ, ಭೂತಾನ್‌ನ ವಿಶ್ವಸಂಸ್ಥೆಯ ಸದಸ್ಯತ್ವವು 1949ರ ಮಿತ್ರತ್ವ ಒಪ್ಪಂದದ ಪಾವಿತ್ರವನ್ನು ಮೂಲಭೂತವಾಗಿ ಹಾಳುಗೆಡವಿತು. ತರುವಾಯ, ಇದರ ಪರಿಣಾಮವಾಗಿ, ಭೂತಾನ್ ತನ್ನ ಸ್ವತಂತ್ರ ಸ್ಥಾನಮಾನವನ್ನು ದೃಢಪಡಿಸಿತು. ಅಂದರೆ, ಬಾಂಗ್ಲಾದೇಶದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿತು ಮತ್ತು ದಿಲ್ಲಿಯಲ್ಲಿರುವ ತನ್ನ ರಾಜತಾಂತ್ರಿಕ ಪ್ರಾತಿನಿಧ್ಯವನ್ನು 1971ರಲ್ಲಿ ಪೂರ್ಣಪ್ರಮಾಣದ ರಾಯಭಾರ ಮಟ್ಟಕ್ಕೆ ಏರಿಸಿತು.

 ಕೃಪೆ: Thewire.in 

Writer - ಪಿ.ಸ್ಟೊಬ್‌ದನ್

contributor

Editor - ಪಿ.ಸ್ಟೊಬ್‌ದನ್

contributor

Similar News