×
Ad

ಶಿವಮೊಗ್ಗ ಜಿಲ್ಲೆಯ ಹೆಸರನ್ನು ಯಡಿಯೂರಪ್ಪ ಅಪವಿತ್ರಗೊಳಿಸಿದ್ದಾರೆ: ಎಐಸಿಸಿ ಕಾರ್ಯದರ್ಶಿ ಮಧುಯಾಸ್ಕಿಗೌಡ

Update: 2017-07-21 18:13 IST

ಶಿಕಾರಿಪುರ, ಜು.21: ರಾಜಕೀಯ ಇತಿಹಾಸದಲ್ಲಿ ಹಲವು ಮುಖ್ಯಮಂತ್ರಿಗಳನ್ನು ಪರಿಚಯಿಸಿದ ಶಿವಮೊಗ್ಗ ಜಿಲ್ಲೆಗೆ ಉತ್ತಮ ಹೆಸರಿದ್ದು, ಇಂತಹ ಜಿಲ್ಲೆಯ ಹೆಸರನ್ನು ಯಡಿಯೂರಪ್ಪ ಅಪವಿತ್ರಗೊಳಿಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಎಐಸಿಸಿ ಕಾರ್ಯದರ್ಶಿ ಮಧುಯಾಸ್ಕಿಗೌಡ ಆರೋಪಿಸಿದರು.

ಪಟ್ಟಣದ ಗುರುಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸದೃಡವಾಗಿದ್ದು, ಬಿಜೆಪಿಯ ವಿಸ್ತಾರಕರ ವಿರುದ್ದ ಸಂಘಟನಾತ್ಮಕವಾಗಿ ಹೋರಾಡಲು ಪ್ರತಿ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಧಾದಿಕಾರಿಗಳ ಸಮಿತಿ ರಚಿಸಿ ಪಕ್ಷವನ್ನು ಸದೃಡಗೊಳಿಸುವಂತೆ ಸೂಚಿಸಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಿಂದ ವಂಚಿತವಾದಾಗ ಕರ್ನಾಟಕದಲ್ಲಿ ಜನತೆ ಪಕ್ಷಕ್ಕೆ ಪುನರ್ಜನ್ಮ ನೀಡಿದ್ದಾರೆ ಎಂದು ಸ್ಮರಿಸಿದ ಅವರು, ರಾಜ್ಯದಲ್ಲಿ ಬಿಜೆಪಿ ಅಲೆ ಇಲ್ಲ. ಮೋದಿ ಅಲೆ ಇಲ್ಲ. ಕೇವಲ ಕಾಂಗ್ರೆಸ್ ಅಲೆ ಮಾತ್ರ ಎಂದರು. ರಾಜ್ಯದಲ್ಲಿ ಪುನಃ ಪಕ್ಷ ಅಧಿಕಾರವನ್ನು ಪಡೆಯಲಿದೆ. ತಾಲೂಕಿನ ಜನತೆ ಚಾಣಾಕ್ಷರಿದ್ದು, ಹೆಚ್ಚು ನಿಗಾವಹಿಸಿದಲ್ಲಿ ಯಡಿಯೂರಪ್ಪನವರ ಸುದೀರ್ಘ 4 ದಶಕದ ರಾಜಕೀಯಕ್ಕೆ ವಿಶ್ರಾಂತಿ ನೀಡಬಹುದಾಗಿದೆ. ಬೂತ್ ಮಟ್ಟದ ಸಂಘಟನೆ ಮೂಲಕ ಯಡಿಯೂರಪ್ಪನವರನ್ನು ಮಣಿಸಬಹುದಾಗಿದೆ ಎಂದು ತಿಳಿಸಿದರು.

ಜಾತ್ಯಾತೀತ ದೇಶದಲ್ಲಿ ಬಿಜೆಪಿ ಜಾತಿ ಹಾಗೂ ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸಿ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದ ಅವರು, ಸುಳ್ಳು ಹೇಳುವಲ್ಲಿ ಸಿದ್ದಹಸ್ತರಾದ ಬಿಜೆಪಿ ವಿಸ್ತಾರಕರಿಗೆ ಸೂಕ್ತ ಪಾಠ ಕಲಿಸಲು ಕಾಂಗ್ರೆಸ್ ಕಾರ್ಯಕರ್ತರು ಪಕ್ಷಕ್ಕಾಗಿ ಹೆಚ್ಚಿನ ಸಮಯ ನೀಡಬೇಕಾಗಿದೆ ಎಂದರು. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ, ಸಚಿವ ಕಾಗೋಡು ತಿಮ್ಮಪ್ಪ ಸಹಿತ ಹಲವು ಶ್ರೇಷ್ಠರನ್ನು ರಾಜಕೀಯ ಕ್ಷೇತ್ರಕ್ಕೆ ಪರಿಚಯಿಸಿದ ಜಿಲ್ಲೆಗೆ ಉತ್ತಮ ಹೆಸರಿದ್ದು, ಇಂತಹ ಜಿಲ್ಲೆಯಲ್ಲಿನ ರಾಜಕಾರಣಿಯಾಗಿ ಯಡಿಯೂರಪ್ಪ ಜೈಲಿಗೆ ತೆರಳಿ ಅಪವಿತ್ರಗೊಳಿಸಿದ್ದಾರೆ. ಇದೀಗ ವಿಷನ್ 150 ಕನಸಿನಲ್ಲಿರುವ ಅವರಿಗೆ ತವರು ತಾಲೂಕಿನಲ್ಲಿ ಮಣಿಸಿ ಪ್ರತ್ಯುತ್ತರ ನೀಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ವಿಧಾನಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಮಾತನಾಡಿ, ಪಕ್ಷ ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ದಿಸಲು ಅವಕಾಶ ನೀಡಿದ ಸಾಮಾನ್ಯ ಕಾರ್ಯಕರ್ತರನ್ನು ಗೆಲ್ಲಿಸಲು ಎಲ್ಲರೂ ಶ್ರಮಿಸಬೇಕು. ಕೇವಲ ಯಡಿಯೂರಪ್ಪನವರನ್ನು ಮಣಿಸುವ ಏಕೈಕ ಗುರಿ ಸಾಧನೆಗೆ ಕೈಜೋಡಿಸುವಂತೆ ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ವತಿಯಿಂದ ಮಧುಯಾಸ್ಕಿಗೌಡ ರನ್ನು ಸನ್ಮಾನಿಸಲಾಯಿತು. ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕ ಚಂದ್ರಶೇಖರಪ್ಪ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷೆ ಪಲ್ಲವಿ, ಕಾಡಾ ಮಾಜಿ ಅಧ್ಯಕ್ಷ ನಗರದಮಹಾದೇವಪ್ಪ, ಜಿ.ಪಂ ಸದಸ್ಯ ನರಸಿಂಗನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ, ಯುವ ಘಟಕದ ಅಧ್ಯಕ್ಷ ಉಳ್ಳಿ ದರ್ಶನ್, ಮುಖಂಡ ಮಹೇಶ ಹುಲ್ಮಾರ್, ಹಳ್ಳೂರು ಪರಮೇಶ್ವರಪ್ಪ, ಸುಧೀರ, ಶಿವ್ಯಾನಾಯ್ಕ, ರವಿ, ತಿ ಮ್ಮಣ್ಣ, ಭಂಡಾರಿ ಮಾಲತೇಶ, ರಾಘವೇಂದ್ರ ನಾಯ್ಕ, ಉಮೇಶ ಮಾರವಳ್ಳಿ, ಜಿದ್ದು ಮಂಜುನಾಥ, ಜೀನಳ್ಳಿ ದೊಡ್ಡಪ್ಪ ಮತ್ತಿತರರು ಹಾಜರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News