ಸುಂಟಿಕೊಪ್ಪ: ಪತ್ರಿಕಾ ದಿನಾಚರಣೆ
ಸುಂಟಿಕೊಪ್ಪ, ಜು.21: ಪತ್ರಿಕಾರಂಗ ಪ್ರಬಲವಾಗಿ ಬೆಳೆದಿರುವುದರಿಂದಲೇ ಭಾರತದ ಪ್ರಜಾಪ್ರಭುತ್ವ ಬೇರು ಗಟ್ಟಿಯಾಗಲು ಕಾರಣವಾಗಿದೆ ಎಂದು ಹಾಸನ ಜಿಲ್ಲಾ ಗ್ರಾಹಕರ ವ್ಯಾಜ್ಯ ನ್ಯಾಯಾಲಯದ ಅಧ್ಯಕ್ಷ ಎ.ಲೋಕೇಶ್ ಕುಮಾರ್ ಅಭಿಮತ ವ್ಯಕ್ತಪಡಿಸಿದರು.
ಸೋಮವಾರಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಸುಂಟಿಕೊಪ್ಪ ಹೋಬಳಿ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಟ್ಟದಲ್ಲಿರುವ ಗುಂಡುಗುಟ್ಟಿ ಮಂಜನಾಥಯ್ಯ ಸಹಕಾರ ಭವನದಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಪತ್ರಕರ್ತರು ವೃತ್ತಿನಿಷ್ಠರಾಗಿ ಸಮಾಜ ಮುಖಿ ಕೆಲಸ ಮಾಡುತ್ತಿದ್ದಾರೆ. ದೇಶ ವಿದೇಶದ ಸುದ್ಧಿಗಳನ್ನು ಸಂಗ್ರಹಿಸಿ ಜನರಿಗೆ ನೀಡುವ ಪತ್ರಕರ್ತರ ಸೇವೆ ಅನನ್ಯವಾದುದುದು. ಆದರೆ ರಾಷ್ಟ್ರ , ರಾಜ್ಯ ರಾಜಧಾನಿ ಜಿಲ್ಲಾ ಮಟ್ಟದ ಪತ್ರಕರ್ತರಿಗೆ ಸೂಕ್ತ ವೇತನ ಲಭಿಸುತ್ತಿದ್ದು , ತಾಲೂಕು, ಹೋಬಳಿ ಗ್ರಾಮೀಣ ಮಟ್ಟದ ಪತ್ರಕರ್ತರಿಗೆ ದೊರಕುವ ವೇತನ ಏನೇನೂ ಸಾಲದು. ಈ ನಿಟ್ಟಿನಲ್ಲಿ ಪತ್ರಿಕಾ ಮಾಲೀಕರು ಯೋಚಿಸಬೇಕಾಗಿದೆ ಎಂದು ಸಲಹೆ ನೀಡಿದರು. ದೃಶ್ಯ ಮಾದ್ಯಮದವರು ಸುದ್ಧಿ ಪೈಪೋಟಿಗೆ ಇಳಿದು ಎಲ್ಲೋ ಒಂದೆಡೆ ಎಡವುತ್ತಿದ್ದಾರೆ ಎಂಬ ಭಾವನೆ ಮೂಡಿಬರುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಸುಂಟಿಕೊಪ್ಪ ಕ್ಷೇತ್ರದ ಜಿ.ಪಂ.ಸದಸ್ಯೆ ಕೆ.ಪಿ.ಚಂದ್ರಕಲಾ ಮಾತನಾಡಿ, ಪತ್ರಕರ್ತರಿಗೆ ಪಕ್ಷ ಇಲ್ಲ. ಆದರೆ ರಾಜಕಾರಣಿಗಳು ಪತ್ರಕರ್ತರನ್ನು ಹಾಳು ಮಾಡುತ್ತಿದ್ದಾರೆ. ನಾನು ರಾಜಕೀಯದಲ್ಲಿ ಬೆಳೆಯಲು ಪತ್ರಿಕಾ ಪ್ರತಿನಿಧಿಗಳೆ ಕಾರಣವೆಂದು ಹೇಳಲು ಹೆಮ್ಮೆಪಡುತ್ತೇನೆ. ಎಲೆ ಮರೆಯ ಕಾಯಿಯಂತೆ ಸಮಾಜವನ್ನು ತಿದ್ದಿ ಆರೋಗ್ಯಕರ ಸಮಾಜಕ್ಕೆ ಪ್ರಯತ್ನಿಸುತ್ತಿರುವ ಕೊಡಗಿನ ಆನೇಕ ಪತ್ರಕರ್ತರು ಬಡವರಿದ್ದಾರೆ. ಅವರಿಗೆ ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ 30 40 ಅಗಲದ ನಿವೇಶನ ದೊರಕಿಸಿಕೊಡಲು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಅದನ್ನು ಒದಗಿಸಿಕೊಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಜಿ.ಪಂ.ಸದಸ್ಯೆ ಕುಮುಧಾ ಧರ್ಮಪ್ಪ, ಸಮಾಜವನ್ನು ಸರಿದಾರಿಗೆ ತರುವ ಪ್ರರ್ತಕರ್ತರ ಸೇವೆ ಕಠಿಣವಾದುದು. ಎಷ್ಟೋ ಪತ್ರಕರ್ತರು ಬಡವರಿದ್ದಾರೆ. ಅವರಿಗೆ ಸರಕಾರದ ಸೌಲಭ್ಯ ಸಿಗುವಂತಾಬೇಕು. ನಿವೇಶನ ಒದಗಿಸಲು ತಾನು ಶ್ರಮೀಸುತ್ತೇನೆ. ಎಲ್ಲೋ ದೃಶ್ಯ ಮಾಧ್ಯಮ ಎಡುವುತ್ತಿದ್ದಾರಾ ಎಂಬ ಭಾವನೆ ಸಹಜವಾಗಿ ಜನರಲ್ಲಿ ಮೂಡಿ ಬರುತ್ತಿದೆ ಎಂದು ಹೇಳಿದರು. ಸಮಾಜ ಏನನ್ನು ಬಯಸುತ್ತಿದೆ ಎಂದು ಗ್ರಹಿಸಿ ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಪತ್ರಿಕೆ ನೀಡುತ್ತಿದೆ. ಸಮಾಜ ಮುಖಿಯಾಗಿ ಕೆಲಸ ಮಾಡುವ ಜವಾಬ್ಧಾರಿ ಪತ್ರಕರ್ತರಿಗಿದೆ. ಪತ್ರಿಕಾ ಮಾಲೀಕರು 5 ರೂ.ವಿಗೆ ಓದುಗರಿಗೆ 16ಪುಟದಲ್ಲಿ ಸುದ್ಧಿ ಕೊಡುತ್ತಾರೆ. ನಷ್ಟದಲ್ಲಿ ಪತ್ರಿಕೆ ನಡೆಸಲು ಸಾಧ್ಯವಾಗದೆ ಇರುವುದರಿಂದ ಅನಿವಾರ್ಯವಾಗಿ ಜಾಹೀರಾತನ್ನು ಅವಲಂಭಿಸಬೇಕಾಗಿದೆ ಎಂದು ಹೇಳಿದರು.
ಸಾಧಕರಿಗೆ ಸನ್ಮಾನ: ಕೊಡಗರಹಳ್ಳಿಯ ಸುಂಟಿಕೊಪ್ಪ ನಾಡು ಪ್ರೌಢಶಾಲೆಯಲ್ಲಿ ಕಳೆದ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮ ಶಾಲಾ ವಿಭಾಗದಲ್ಲಿ ನವ್ಯ ಬಿ. 601 ಅಂಕಗಳನ್ನು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಹಾಗೂ ಪಿ.ಎಫ್. ಸಬಾಸ್ಟೀನ್ ಅವರ ಪುತ್ರಿ ಪಿ.ಎಸ್. ಆನ್ಲೀಶ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅತ್ಯಧಿಕ ಅಂಕವನ್ನು ಪಡೆದಿದ್ದು ಅವರನ್ನು ಸನ್ಮಾನಿಸಲಾಯಿತು. ಅದೇ ರೀತಿ ಪತ್ರಿಕಾ ಕ್ಷೇತ್ರದಲ್ಲಿ ಛಾಯಾಗ್ರಾಹಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಘ್ನೇಶ್ ಭೂತನಕಾಡು, ಈ ಬಾರೀ ಜಿಲ್ಲಾ ಪ್ರಶಸ್ತಿಗೆ ಪತ್ರಕರ್ತರಾದ ಚಂದ್ರಮೋಹನ,ಹಿರಿಕರ ರವಿ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸೋಮವಾಪೇಟೆ ತಾಲ್ಲೂಕು ಪತ್ರಕರ್ತರ ಸಂಘದಿಂದ ಕೊಡ ಮಾಡುವ ಪ್ರಶಸ್ತಿಗೆ ಭಾಜನರಾದ ಕುಶಾಲನಗರ ವರದಿಗಾರ ಚಂದ್ರಮೋಹನ್ (ಅರಣ್ಯ ಪರಿಸರ ವನ್ಯಜೀವಿ ವರದಿ), ದಿನೇಶ್ ಮಾಲಂಬಿ ( ಅತ್ಯುತ್ತಮ ಮಾನವೀಯ ವರದಿ), ಎಂ.ಬಿ.ವಿನ್ಸೆಂಟ್ ವಿನೋದ್ (ಕ್ರೀಡಾ ವರದಿ), ಬಿ.ಎ.ಭಾಸ್ಕರ ( ಅತ್ಯುತ್ತಮ ತನಿಖಾ ವರದಿ), ಕೆ.ಕೆ.ನಾಗರಾಜಶೆಟ್ಟಿ (ಗ್ರಾಮೀಣ ವರದಿ), ಇವರುಗಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ನೂತನ ಪ್ರೆಸ್ಕ್ಲಬ್ ಅಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರನ್ನು ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸೋಮವಾಪೇಟೆ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಕವನ್ ಕಾರ್ಯಪ್ಪ, ಹಿರಿಯ ಸಾಹಿತಿ ಹಾ.ತಿ. ಜಯಪ್ರಕಾಶ್, ಜಿಲ್ಲಾ ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್ ಇದ್ದರು. ಸುಂಟಿಕೊಪ್ಪ ಪತ್ರಕರ್ತರ ಸಂಘದ ಸದಸ್ಯ ಪಿ.ಎಫ್.ಸಬಾಸ್ಟೀನ್ ಸ್ವಾಗತಿಸಿ, ಕಾರ್ಯಕ್ರಮವನ್ನು ವಿಜಯಹಾನಗಲ್ ನಿರೂಪಿಸಿ, ತಾಲೂಕು ಕಾರ್ಯದರ್ಶಿ ಬಿ.ಎ.ಭಾಸ್ಕರ್ ವಂದಿಸಿದರು.