ತಪ್ಪು ಎಸಗಿದರೆ ಶಿಸ್ತಕ್ರಮ: ಎ. ಮಂಜು

Update: 2017-07-23 13:57 GMT

ಹಾಸನ, ಜು.23: ದೃಢೀಕೃತ ಬಿತ್ತನೆ ಆಲೂಗೆಡ್ಡೆಯಿಂದಲೇ ರೈತರ ಬೆಳೆ ನಾಶವಾಗಿದ್ದು, ಇದರಲ್ಲಿ ಯಾರೇ ತಪ್ಪು ಎಸಗಿದ್ದರೂ ಅವರ ವಿರುದ್ಧ ಶಿಸ್ತುಕ್ರಮ ಕೈಗೊಂಡು ಶಿಕ್ಷೆ ವಿಧಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಕಡಕ್ ಎಚ್ಚರಿಕೆ ನೀಡಿದರು.

ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ದೃಢೀಕೃತ ಬಿತ್ತನೆ ಆಲೂಗೆಡ್ಡೆಯು ಹವಾಮಾನ ಹಾಗೂ ಮಳೆಯ ಕೊರತೆಯಿಂದ ನಾಶವಾಗಿದೆ. ರೈತರಿಗೆ ಅನ್ಯಾಯವಾಗಬಾರದು ಎಂದು ಸರ್ಟಿಪೈಡ್ ಆಲೂಗಡ್ಡೆ ಕೊಡಲಾಯಿತು. ನೀಡಿರುವ ಆಲೂಗಡ್ಡೆ ಬಗ್ಗೆ ಸಂಪೂರ್ಣ ಬೆಳೆ ಬಂದಿರುವುದಿಲ್ಲ ಎಂದು ವರದಿ ಬಂದಿದೆ. ಪರಿಶೀಲಿಸಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗೇ ಆಗುತ್ತದೆ ಎಂದರು. ಈ ಬಾರಿ ವಾಡಿಕೆಗಿಂತ ಮಳೆ ಕಡಿಮೆಯಾಗಿರುವುದರಿಂದ ರೈತರಿಗೆ ಅರಿವು ಮೂಡಿಸುವಂತೆ ಕೆಲಸವನ್ನು ಕೃಷಿ, ತೋಟಗಾರಿಕೆ ಮತ್ತು ನೀರಾವರಿ ಇಲಾಖೆ ಸೂಚನೆ ನೀಡಿರುವುದಾಗಿ ತಿಳಿಸಿದರು.

ರಾಜ್ಯ ಸರ್ಕಾರ ರೈತರ 50 ಸಾವಿರ ರೂ.ವರೆಗಿನ ಸಹಕಾರಿ ಸಂಘಗಳಲ್ಲಿನ ಸಾಲವನ್ನು ಮನ್ನಾ ಮಾಡುವ ಮೂಲಕ ಬದ್ದತೆ ಮೆರೆದಿದ್ದು, ಈಗ ಯಡಿಯೂರಪ್ಪನವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ಸಾಲವನ್ನು ಮನ್ನಾ ಮಾಡಿಸಲಿ ಎಂದು ಆಗ್ರಹಿಸಿದರು. ಸುಮಾರು 52 ಸಾವಿರ ಕೋಟಿ ರೂ. ಸಾಲದಲ್ಲಿ ಈಗಾಗಲೇ ರಾಜ್ಯ ಸರ್ಕಾರ 11 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ರೈತರ ಸಾಲವನ್ನು ಮನ್ನಾ ಮಾಡಿದೆ. ಇನ್ನು ಉಳಿದ ಸಾಲವನ್ನು ಸಂಸದರ ಸಭೆಯನ್ನು ಕರೆದು ಕೇಂದ್ರ ಸರ್ಕಾರದಿಂದ ಮನ್ನಾ ಮಾಡಿಸಲು ಮುಂದಾಗಲಿ ಎಂದು ಸಲಹೆ ನೀಡಿದರು.
   

ಶ್ರವಣಬೆಳಗೊಳದಲ್ಲಿ 2018ರ ಫೆಬ್ರವರಿಯಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ನಡೆಯುವ ಮೊದಲು ಡಿಸೆಂಬರ್ ಒಳಗಾಗಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವಿವಿಧ ಇಲಾಖೆ ಅಧಿಕಾರಿಗಳ ಸಭೆಯನ್ನು ನಡೆಸಲಾಗಿದ್ದು, ಈಗಾಗಲೇ ಅಧಿಕಾರಿಗಳೂ ಸಹ ಕಾಮಗಾರಿ ಕೆಲಸ ಕಾರ್ಯಗಳನ್ನು ಡಿಸೆಂಬರ್ ಒಳಗಾಗಿ ಪೂರ್ಣಗೊಳಿಸುತ್ತಾರೆಂಬ ವಿಶ್ವಾಸವಿದೆ. ಇನ್ನು ಪ್ರಾಕೃತಿಕ ವಿಶ್ವವಿದ್ಯಾನಿಲಯ ಮತ್ತು ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿರುವುದಾಗಿ ಇದೆ ವೇಳೆ ಹೇಳಿದರು.

ಯಾವ ಕೆರೆಯಲ್ಲಿ ನೀರು ನಿಲ್ಲುವುದಿಲ್ಲ ಹಾಗೂ ಸಾರ್ವಜನಿಕವಾಗಿ ಅನುಕೂಲವಾಗುವುದಿಲ್ಲ ಎಂತಹ ಕೆರೆಗಳನ್ನು ಡಿ-ನೋಟಿಪಿಕೇಶನನ್ನು ಸರಕಾರ ಮಾಡಲಿದೆ. ಯಾವಾ ಯಾವ ಸರಕಾರದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಬೃಹತ್ ಕಟ್ಟಡ ನಿರ್ಮಿಸಿದ್ದಾರೆ, ಎಷ್ಟು ಕೆರೆ ಮುಚ್ಚಿದ್ದಾರೆ ಎಲ್ಲಾ ತಿಳಿದಿದೆ ಎಂದರು. ನಾನು ಯಾರ ಬಗ್ಗೆ ಆಪಾಧನೆ ಮಾಡುತ್ತಿಲ್ಲ. ಆದರೇ ಇರುವ ಸತ್ಯಾಂಶವನ್ನು ಹೇಳುತ್ತಿರುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹಾಲು ಉತ್ಪಾಧನೆಯಲ್ಲಿ ಯಾವ ರೈತ ಸಾವನಪ್ಪಿದ್ದಾನೆ ಎಂಬುದರ ಬಗ್ಗೆ ದೂರು ಬಂದಿರುವುದಿಲ್ಲ. ಹಸು ಸಾಕಿದವರು ಸುಖವಾಗಿಯೇ ಇದ್ದಾರೆ. ಹಾಲು ಉತ್ಪಾಧನೆಗೆ ಸರಕಾರದಿಂದ ರೈತರಿಗೆ ನೀಡುತ್ತಿರುವ ಪ್ರೋತ್ಸಹಧನ ಕಡಿಮೆ ಆಗಿದೆ ಎಂಬುದು ಅಲ್ಲ. ಆಧಾರ್ ಕಾರ್ಡ್ ಲಿಂಕ್ ಇರುವ 58 ಸಾವಿರ ಜನ ರೈತರಿಗೆ ಇಂತಹ ಬರಗಾಲದಲ್ಲಿ 5 ರೂ ಪ್ರೋತ್ಸಹ ಧನ ಕೊಡುತ್ತಿರುವುದು ಒಂದು ದಾಖಲೆ ಎಂದರು.  ಹಿಂದಿ ಭಾಷೆ ಎಂದರೇ ಅದು ನ್ಯಾಷನಲ್ ಭಾಷೆ ಆಗಿದೆ. ಹಿಂದಿಯನ್ನೆ ಮಾತನಾಡಬೇಕು ಎಂದು ಎಲ್ಲಿಯೂ ಬಲವಂತವಾಗಿ ಹೇಳಿರುವುದಿಲ್ಲ. ಅವರಿಗೆ ಇಷ್ಟ ಬಂದರೇ ಮಾತನಾಡಬಹುದು. ಆದರೇ ಕನ್ನಡ ಭಾಷೆಗೆ ನಮ್ಮದೇ ಆದ ಪ್ರಾಧಾನ್ಯತೆ ಇದ್ದು, ಜೊತೆಗೆ ಗೌರವ ನೀಡಲಾಗುತ್ತದೆ. ಇದನ್ನು ಹಿಂದಿಗೆ ಹೋಲಿಸುವಾಗಿಲ್ಲ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕಾಂಗ್ರೆಸ್ ಪಾರ್ಟಿಯಲ್ಲಿ ಯಾರ ಮುಖಂಡತ್ವದಲ್ಲಿ ರಾಜ್ಯದೊಳಗೆ ಚುನಾವಣೆ ನಡೆಯುವುದೋ ಅವರಿಗೆ ಟಿಕೆಟ್ ಹಂಚಿಕೆ ಮಾಡುವ ಅಧಿಕಾರವಿದೆ. ಅಭ್ಯರ್ಥಿಯ ಬಗ್ಗೆ ಗಮನಕ್ಕೆ ತಂದವರಿಗೆ ಕೊಡಲಾಗುವುದು. ಬಿ.ಫಾರಂ ಕೊಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸತ್ಯಮಂಗಲ ಗ್ರಾಮಪಂಚಾಯತ್ ಹಾಗೂ ಹುಡಾ ನಿರ್ದೇಶಕ ಮೋಹನ್ ಕುಮಾರ್, ಕಾಂಗ್ರೆಸ್ ಮುಖಂಡ ಹೆಚ್.ಕೆ. ಮಹೇಶ್ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News