ಕರ್ತವ್ಯ ಸ್ಥಗಿತಗೊಳಿಸಿ ಬಿಎಸ್ಎನ್ಎಲ್ ನೌಕರರ ಪ್ರತಿಭಟನೆ
ಮಡಿಕೇರಿ, ಜು.27 :ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಬಿಎಸ್ಎನ್ಎಲ್ ನೌಕರರರು ಕರ್ತವ್ಯ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.
ಬಿಎಸ್ಎನ್ಎಲ್ ನೌಕರರಸಂಘದ ಪದಾಧಿಕಾರಿಗಳು ನಗರದ ಬಿಎಸ್ಎನ್ಎಲ್ ಕಚೇರಿ ಎದುರು ತಮ್ಮ ಬೇಡಿಕೆಗಾಗಿ ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಸಂಘದ ವಲಯ ಉಪಾಧ್ಯಕ್ಷರಾದ ಕುಶಾಲಪ್ಪ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಹಿಂದೆ ನಡೆದ ಸಭೆಗಳಲ್ಲಿ ಸಾರ್ವಜನಿಕ ಉದ್ದಿಮೆಗಳ ಬಾಕಿ ಇರುವ ವೇತನ ಪರಿಷ್ಕರಣೆಗೆ ಇರುವ ಶಿಫಾರಸ್ಸಿನ ಮಾರ್ಪಾಡುಗಳ ಬಗ್ಗೆ ಚರ್ಚೆ ನಡೆಸಲಾಯಿತು. ಆದರೆ ಇಲ್ಲಿಯವರೆಗೆ ಯಾವುದೇ ಮಾರ್ಪಡುಗಳಾಗಿಲ್ಲಎಂದು ಅಸಮಾಧಾನ ವ್ಯಕ್ತಪಡಿಸಿದರು.
ವೇತನ ಪರಿಷ್ಕರಣೆ ಆಗದಿದ್ದರೆ ನಿವೃತ್ತಿ ಹೊಂದುವ ನೌಕರರಿಗೆ ಪಿಂಚಣಿಯಲ್ಲಿ ನಷ್ಟಉಂಟಾಗುತ್ತದೆ. ಈ ಬಗ್ಗೆ ನವದೆಹಲಿ ಸೇರಿದಂತೆ, ವಿವಿಧೆಡೆ ಹೋರಾಟ ನಡೆಸಲಾಗಿದೆ,ಆದರೂ ಬೇಡಿಕೆಗಳು ಈಡೇರಿಲ್ಲ. ಕೇಂದ್ರ ಸರಕಾರ ಯಾವುದೇ ನಿರ್ಧಾರ
ಕೈಗೊಳ್ಳದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.