ನಗರ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟಲು ಕ್ರಮ

Update: 2017-07-28 13:00 GMT

ಸಾಗರ, ಜು.28: ನಗರವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟಲು ಫಾಗಿಂಗ್ ಹಾಗೂ ಮೆಲಾಥಿನ್ ದ್ರಾವಣ ಸಿಂಪಡಣೆಯನ್ನು 31 ವಾರ್ಡ್‌ಗಳಲ್ಲೂ ಕೈಗೊಳ್ಳಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಉಷಾ ಎನ್. ತಿಳಿಸಿದ್ದಾರೆ.

ನಗರದ ಶಿವಪ್ಪ ನಾಯಕ ಬಡಾವಣೆಯಲ್ಲಿ ಶುಕ್ರವಾರ ನಗರಸಭೆ ವತಿಯಿಂದ ಫಾಗಿಂಗ್ ಹಾಗೂ ಮೆಲಾಥಿನ್ ದ್ರಾವಣ ಸಿಂಪಡಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಏಕಕಾಲದಲ್ಲಿ ನಾಲ್ಕು ಫಾಗಿಂಗ್ ಯಂತ್ರಗಳು ಹಾಗೂ ಎರಡು ಮೆಲಾಥಿನ್ ದ್ರಾವಣ ಸಿಂಪಡಣೆ ಯಂತ್ರದ ಜೊತೆಗೆ ಹತ್ತಕ್ಕೂ ಹೆಚ್ಚು ಪೌರ ಕಾರ್ಮಿಕರು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದರು.

ನಗರವ್ಯಾಪ್ತಿಯಲ್ಲಿ ಮೂರ್ನಾಲ್ಕು ಶಂಕಿತ ಡೇಂಗ್ ಪ್ರಕರಣ ಪತ್ತೆಯಾಗಿದ್ದು, ಸೂಕ್ತ ಸಂದರ್ಭದಲ್ಲಿ ಚಿಕಿತ್ಸೆ ನೀಡಿದ್ದರಿಂದ ಯಾವುದೆ ಸಾವುನೋವು ಸಂಭವಿಸಿಲ್ಲ. ಬಿಸಿಲು ಮತ್ತು ಮಳೆ ಇರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇರುತ್ತದೆ. ಜನರಲ್ಲಿ ಜಾಗೃತಿ ಮೂಡಿಸಲು ನಗರಸಭೆ ವತಿಯಿಂದ ಕರಪತ್ರ ಹಂಚುವುದು, ಕಸ ಸಂಗ್ರಹಣ ವಾಹನದಲ್ಲಿ ಧ್ವನಿವರ್ಧಕ ಅಳವಡಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಇರಿಸಿಕೊಂಡು ಜನರಿಗೆ ಸೂಕ್ತ ಮಾಹಿತಿ ನೀಡಲಾಗುತ್ತಿದೆ ಎಂದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜೂರಾಲಿ ಖಾನ್ ಮಾತನಾಡಿ, ಮೆಲಾಥಿನ್ ದ್ರಾವಣ ಸಿಂಪಡಣೆಗೆ ಸುಮಾರು 50ಸಾವಿರ ರೂ. ವೆಚ್ಚದಲ್ಲಿ ಎರಡು ಆಧುನಿಕ ಯಂತ್ರವನ್ನು ಖರೀದಿಸಲಾಗಿದೆ. ಜೊತೆಗೆ ಬೆಳಿಗ್ಗೆ ಮತ್ತು ಸಂಜೆ ಫಾಗಿಂಗ್ ಮಾಡಲಾಗುತ್ತಿದೆ. ನಗರವ್ಯಾಪ್ತಿಯಲ್ಲಿ ಖಾಲಿ ಇರುವ ನಿವೇಶನಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ಸಂಬಂಧಪಟ್ಟ ಮಾಲೀಕರು ಸ್ವಚ್ಚಗೊಳಿಸಬೇಕು. ಇಲ್ಲವಾದಲ್ಲಿ ನಗರಸಭೆ ವತಿಯಿಂದ ಅಂತಹ ಜಾಗದ ಮಾಲೀಕರ ಮೇಲೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಜನರು ಮನೆಯ ಅಕ್ಕಪಕ್ಕ ಸ್ವಚ್ಚವಾಗಿರಿಸಿಕೊಳ್ಳಬೇಕು. ಸೊಳ್ಳೆ ಉತ್ಪತ್ತಿಯಾಗುವ ಸ್ಥಳಗಳ ಬಗ್ಗೆ ಕರಪತ್ರದ ಮೂಲಕ ಮಾಹಿತಿ ನೀಡಲಾಗಿದೆ. ಅದನ್ನು ಪರಿಶೀಲನೆ ನಡೆಸಿ, ಅದರಂತೆ ನಡೆದುಕೊಳ್ಳಬೇಕು. ಒಡೆದ ಮಡಿಕೆ, ಎಳನೀರು ಚಿಪ್ಪು, ಚರಂಡಿಯಲ್ಲಿ ಹೆಚ್ಚು ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪೌರ ಕಾರ್ಮಿಕರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News