ರಾಷ್ಟ್ರ ನಿರ್ಮಾಣದಲ್ಲಿ ಯುವ ಪೀಳಿಗೆಯ ಜವಾಬ್ದಾರಿಗಳು, ರ್ಯಾಗಿಂಗ್ ಬಗ್ಗೆ ಅರಿವು ನೆರವು ಕಾರ್ಯಕ್ರಮ
ಸೊರಬ, ಆ.1: ರ್ಯಾಗಿಂಗ್ನ್ನು ವಿರೋಧಿಸುವ ಪ್ರಥಮ ವರ್ಷದ ವಿದ್ಯಾರ್ಥಿಗಳು, ಅಂತಿಮ ವರ್ಷದ ವಿದ್ಯಾರ್ಥಿಗಳಾದಾಗ ಅವರೇ ರ್ಯಾಗಿಂಗ್ನಲ್ಲಿ ತೊಡಗಿಕೊಳ್ಳುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಧೀಶೆ ಉಷಾರಾಣಿ ಆರ್ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಹಾಗೂ ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ರಾಷ್ಟ್ರ ನಿರ್ಮಾಣದಲ್ಲಿ ಯುವ ಪೀಳಿಗೆಯ ಜವಾಬ್ದಾರಿಗಳು ಮತ್ತು ರ್ಯಾಗಿಂಗ್ ಬಗ್ಗೆ ಅರಿವು ನೆರವು ಕಾರ್ಯಕ್ರಮವನ್ನು ಉಧ್ಘಾಟಿಸಿ ಅವರು ಮಾತನಾಡಿದರು.
ಈ ಮೊದಲು ಹೊಸ ವಿದ್ಯಾರ್ಥಿಗಳ ಪರಿಚಯಕ್ಕಾಗಿ ಇದ್ದ ವ್ಯವಸ್ಥೆಯು ಇಂದು ಅತಿರೇಕಕ್ಕೆ ಮುಟ್ಟಿ ನೂತನ ವಿದ್ಯಾರ್ಥಿಗಳ ಮನಸ್ಸಿಗೆ ತೀವ್ರ ಆಘಾತವನ್ನುಂಟು ಮಾಡುತ್ತಿದೆ. ಈ ಅಪರಾಧವು ಎಲ್ಲಾ ದೇಶಗಳಲ್ಲಿದ್ದು ನಮ್ಮ ದೇಶದಲ್ಲಿ ರ್ಯಾಗಿಂಗ್ ಬಗ್ಗೆ ಪ್ರತ್ಯೇಕವಾದ ಕಾನೂನು ಇಲ್ಲದಿದ್ದರೂ ಸಹ ಕೇರಳದ ವಿಶ್ವವಿದ್ಯಾನಿಲಯದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟಿನ ಭಾರತೀಯ ದಂಡ ಸಂಹಿತೆಯೊಳಗೆ ಇದಕ್ಕೆ ಸಂಬಂದಪಟ್ಟ ಕಾನೂನುಗಳು ಇವೆ ಎಂದರು. ಸುಪ್ರೀಂ ಕೊರ್ಟ್ ರ್ಯಾಗಿಂಗ್ ಅನ್ನು ತಡೆಯುವ ನಿಟ್ಟಿನಲ್ಲಿ ರಾಘವನ್ ಕಮಿಟಿಯನ್ನು ನೇಮಕ ಮಾಡಿದ್ದು ಆ ಮೂಲಕ ವರದಿಯನ್ನು ಪಡೆದು ಹಲವಾರು ಹೊಸ ನಿಯಮಗಳನ್ನು ರೂಪಿಸಿದೆ ಎಂದರು.
ಯು.ಜಿ.ಸಿ ರೆಗ್ಯುಲೇಟಿಂಗ್ ಪ್ರಕಾರ ವಿದ್ಯಾರ್ಥಿಗಳು ಮತ್ತು ಪಾಲಕರು ಕಾಲೇಜಿಗೆ ಸೇರುವ ಸಂಧರ್ಭದಲ್ಲಿ ರ್ಯಾಗಿಂಗ್ ಮಾಡದಿರುವ ಬಗ್ಗೆ ಪ್ರಮಾಣ ಪತ್ರವನ್ನು ನೀಡುವುದು ಕಡ್ಡಾಯವಾಗಿರುತ್ತದೆ. ಅದಾಗಿಯೂ ರ್ಯಾಗಿಂಗ್ ಮಾಡಿದ್ದಲ್ಲಿ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರ ಹಾಕುವುದು, ಪರೀಕ್ಷೆಗೆ ಕೂರಿಸದಿರುವುದು ರೂ.25.000/- ಗಳಷ್ಟು ಮೊತ್ತದ ಹಣವನ್ನು ದಂಡದಂತೆ ವಸೂಲಿ ಮಾಡುವುದಕ್ಕೆ ಅವಕಾಶವಿದೆ ಎಂದರು. ವಿದ್ಯಾರ್ಥಿ ಜೀವನ ಅಮೂಲ್ಯ ಘಟ್ಟದಾಗಿದ್ದು ಸದುಪಯೋಗ ಪಡಿಸಿಕೊಂಡು ಜೀವನದಲ್ಲಿ ಯಶಸ್ವಿ ಆಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಗುರುನಾಥ್ ಎಂ. ಪಾಟೀಲ್ ವಹಿಸಿದ್ದರು. ಹಿರಿಯ ವಕೀಲ ಎಂ ಆರ್ ಪಾಟೀಲ್, ಅಶೋಕ ಸಿ ವೈ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕಿರಿಯ ವಿಭಾಗದ ನ್ಯಾಯಾಧೀಶ ರಾಘವೇಂದ್ರ ಶೆಟ್ಟಿಗಾರ್, ವಿವೇಕಾನಂದ ಪ್ರೌಡಶಾಲೆಯ ಅಧ್ಯಕ್ಷ ದಿವಾಕರ್ ಭಾವೆ, ವಕೀಲರಾದ ದಿನಕರ್ ಭಟ್ ಭಾವೆ, ವೈ.ಜಿ ಪುಟ್ಟಸ್ವಾಮಿ, ಸುಧಾಕರ್ ನಾಯಕ್, ಸಿ ಎಸ್ ರುದ್ರಪ್ಪ, ಓಂಕಾರಪ್ಪ, ಎಸ್. ಗೋಪಾಲ್, ಮುಖ್ಯ ಶಿಕ್ಷಕ ಸಂದೀಪ್ ರಾಯ್ಕರ್.ಮತ್ತಿತರರಿದ್ದರು.