ಸಮರ್ಥ ನಾಯಕತ್ವದಿಂದ ನೆಮ್ಮದಿಯ ಬದುಕು: ಶಿವು ಮಾದಪ್ಪ ಅಭಿಪ್ರಾಯ
ಮಡಿಕೇರಿ ಆ.4 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮರ್ಥ ಆಡಳಿತದಿಂದಾಗಿ ರಾಜ್ಯದ ಎಲ್ಲಾ ವರ್ಗದ ಜನ ಇಂದು ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಮುಕ್ಕಾಟಿರ ಶಿವು ಮಾದಪ್ಪ ಅಭಿಪ್ರಾಯಪಟ್ಟಿದ್ದಾರೆ.
ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ವತಿಯಿಂದ ಕುಟ್ಟ ಗ್ರಾಮದ ಕಮ್ಯೂನಿಟಿ ಹಾಲ್ನಲ್ಲಿ ಗ್ರಾಮ ಸಂವಾದ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿವುಮಾದಪ್ಪ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಸಿವು ಮುಕ್ತ ಸಮಾಜ ನಿರ್ಮಾಣವಾಗಿದೆ ಎಂದರು. ಅನ್ನಭಾಗ್ಯ, ಕ್ಷೀರಭ್ಯಾಗ್ಯ, ವಿದ್ಯಾಸಿರಿ, ದುರ್ಬಲ ವರ್ಗದ ಅಭ್ಯುದಯ, ಸಮೃದ್ಧ ಕೃಷಿ, ಕೃಷಿ ಭಾಗ್ಯ, ಭೂಚೇತನ, ರಾಜೀವ್ ಆರೋಗ್ಯ ಭಾಗ್ಯ, ಅಲ್ವಸಂಖ್ಯಾತರ ಕಲ್ಯಾಣ, ಗ್ರಾಮ ವಿಕಾಸ, ಬಾಪೂಜಿ ಸೇವಾ ಕೇಂದ್ರ, ರೈತರ ಸಾಲಮನ್ನಾ, ಗ್ರಾಮಿಣ ಪ್ರದೇಶದ ಅಭಿವೃದ್ಧಿಗೆ ವಿಶೇಷ ಯೋಜನೆಗಳು ಹೀಗೆ ಸುಮಾರು 160ಕ್ಕೂ ಹೆಚ್ಚು ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಗೆ ತಂದು ಇತಿಹಾಸವನ್ನೇ ನಿರ್ಮಿಸಿದ್ದಾರೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವುದು ಕಾರ್ಯಕರ್ತರ ಗುರಿಯಾಗಿರಬೇಕೆಂದು ಕರೆ ನೀಡಿದರು.
ಸಂವಾದ ನಡೆಸಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ, ಪಂಚಾಯತ್ ರಾಜ್ ವ್ಯವಸ್ಥೆ 1992 ರ ತಿದ್ದುಪಡಿ, 2015ರ ಗ್ರಾಮ ಸ್ವರಾಜ್ ಬಗ್ಗೆ ವಿವರಣೆ ನೀಡಿದರು.
ಸಂಘಟನೆಯ ಜಿ.ಪಂ ಕ್ಷೇತ್ರ ಸಂಘಟಕರಾದ ಹೆಚ್.ವೈ.ರಾಮಕೃಷ್ಣ, ತಾ.ಪಂ ಸದಸ್ಯರಾದ ಪಲ್ಲಿನ್ ಪೂಣಚ್ಚ, ಗ್ರಾ.ಪಂ ಅಧ್ಯಕ್ಷರಾದ ಲೀಲಾ ಪ್ರಭು, ಉಪಾಧ್ಯಕ್ಷರಾದ ಹೆಚ್.ಎಂ.ಪ್ರಕಾಶ್, ಸದಸ್ಯರಾದ ಬಿ.ಕೆ.ರಾಮಕೃಷ್ಣ, ಮಾರ, ಅರುಣ್ ಕುಮಾರ್, ಯೋಗರಾಣಿ, ಐಯ್ಯಪ್ಪ, ವಿಜಯ, ಮೈಮುನ್ನೀಸ, ಸುನಿತಾ, ಸುಲೈಮಾನ್, ರಂಜಿತ್ ಕುಮಾರ್, ರುಕ್ಮಿಣಿ, ಪಿ. ಆಶಾ, ರೋಷಲಿನ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕುಂಞಪ್ಪು, ಎಸ್.ಸಿ ಘಟಕದ ಪಳನಿ, ಧರ್ಮಸ್ಥಳ ಸಂಘದ ಅಧ್ಯಕ್ಷರಾದ ಹೇಮಾವತಿ ವೇಲಾಯಧನ್ ಸೇರಿದಂತೆ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.