ಈಶ್ವರಪ್ಪ ಪಿಎ ಅಪಹರಣ ಯತ್ನ ಪ್ರಕರಣ : ಬಿಎಸ್ವೈ ಪಿಎ ಸಂತೋಷ್ಗೆ ಶರತ್ತುಬದ್ಧ ಜಾಮೀನು
Update: 2017-08-05 21:39 IST
ಬೆಂಗಳೂರು, ಆ.5: ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ಪಿಎ ವಿನಯ್ ಅಪಹರಣ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಪಿಎ ಸಂತೋಷ್ಗೆ 62ನೆ ಸೆಷನ್ ಕೋರ್ಟ್ ಶರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಈ ಸಂಬಂಧ ಜಾಮೀನು ಕೋರಿ ಸಂತೋಷ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಎಸ್.ಎ.ಚಿಕ್ಕೋಡೆ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು. 30 ದಿನಗಳ ಒಳಗೆ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಸಂತೋಷ್ಗೆ ಸೂಚನೆ ನೀಡಲಾಗಿದೆ. ಯಾವುದೇ ಸಾಕ್ಷ ನಾಶಪಡಿಸಬಾರದು. ತನಿಖಾಧಿಕಾರಿ ಕರೆದಾಗ ತನಿಖೆಗೆ ಸಹಕರಿಸಬೇಕು. ಬೆಂಗಳೂರು ಬಿಟ್ಟು ಎಲ್ಲಿಗೂ ತೆರಳಬಾರದು. ಆರೋಪಿಯ ಸರಿಯಾದ ವಿಳಾಸವನ್ನು ತನಿಖಾಧಿಕಾರಿಗೆ ನೀಡುವಂತೆ ಕೋರ್ಟ್ ಸೂಚಿಸಿದೆ.