ಟೆಂಪೋ ಬೈಕ್ ನಡುವೆ ಭೀಕರ ಅಪಘಾತ; ಇಬ್ಬರು ಮೃತ್ಯು
ಭಟ್ಕಳ, ಆ.7: ಪ್ಯಾಸೆಂಜರ್ ಟೆಂಪೋ ಹಾಗೂ ದ್ವಿಚಕ್ರ ವಾಹನದ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ರ್ಘಟನೆ ಸೋಮವಾರ ಬೆಳಗಿನ ಜಾವಾ 4.20ಕ್ಕೆ ಶಿರಾಲಿಯ ರಾ.ಹೆ.ಯಲ್ಲಿ ಜರಗಿದೆ.
ದುರ್ಘಟನೆಯಲ್ಲಿ ಮೃತಪಟ್ಟವರನ್ನು ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿಗಳಾದ ಮಂಜುನಾಥ್ ಬಸವನ ಗೌಡ (24) ಹಾಗೂ ಹನುಮಂತಪ್ಪ ಕಲ್ಲಪ್ಪ(30) ಎಂದು ಗುರುತಿಸಲಾಗಿದೆ.
ಇವರು ಉಡುಪಿಯಿಂದ ಕಲಘಟಗಿ ಗೆ ಹೋಗುತ್ತಿರುವಾಗ ಮುರುಡೇಶ್ವರದಿಂದ ಭಟ್ಕಳಕ್ಕೆ ಹೋಗುತ್ತಿರುವ ಪ್ಯಾಸೆಂಜರ್ ಟೆಂಪೋಗೆ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.
ನಸುಕಿನ ಜಾವ ಅತಿವೇಗವಾಗಿ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಟೆಂಪೋಗೆ ಡಿಕ್ಕಿ ಹೊಡೆದಿದ್ದು, ಅದರ ಮುಂದಿನ ಗಾಲಿ ಬೈಕ್ ನಿಂದ ಬೇರ್ಪಡೆಗೊಂಡು ರಸ್ತೆ ಬದಿಗೆ ಬಿದ್ದಿದೆ. ಅಲ್ಲದೆ ಬೈಕ್ ಸವಾರರು ಹಾಕಿಕೊಂಡಿದ್ದ ಹೆಲ್ಮೆಟ್ ಕೂಡ ತಲೆಯಿಂದ ಬೇರ್ಪಟ್ಟಿದ್ದು ಕಂಡರೆ ಅಪಘಾತದ ತೀವ್ರತೆಯ ಅರಿವಾಗುತ್ತದೆ ಎಂದು ಸ್ಥಳಿಯರು ತಿಳಿಸಿದ್ದಾರೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಮುರ್ಡೇಶ್ವರ ಪೊಲೀಸರು ಘಟನಾಸ್ಥಳಕ್ಕೆ ಬಂದು ಪರಿಶೀಲಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮುರುಡೇಶ್ವರ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಪ್ರಕರಣ ದಾಖಲಾಗಿದೆ.