ವಿಜ್ಞಾನವು ಅವಮಾನ, ಅಡೆತಡೆಗಳನ್ನು ಮೀರಿ ಬೆಳೆದಿದೆ; ಪ್ರೊ.ಚಂದ್ರಕಾಂತ್
ತುಮಕೂರು. ಆ.9: ಇತಿಹಾಸದುದ್ದಕ್ಕೂ ವಿಜ್ಞಾನವು ಅವಮಾನಗಳನ್ನು, ಅಡೆತಡೆಗಳನ್ನು ಎದುರಿಸುತ್ತಾ, ಅವುಗಳೆಲ್ಲವನ್ನೂ ಮೀರಿ ಇಂದು ಈ ಮಟ್ಟಕ್ಕೆ ಬೆಳೆದು ಬಂದಿದೆ ಎಂದು ಪ್ರೊ.ಚಂದ್ರಕಾಂತ್ ತಿಳಿಸಿದ್ದಾರೆ.
ತುಮಕೂರು ವಿಜ್ಞಾನ ಕೇಂದ್ರ ಹಾಗೂ ಯುವ ಮುನ್ನೆಡೆ ಸಮುದಾಯಗಳು ಆಯೋಜಿಸಿದ್ದ ವಿಜ್ಞಾನಕ್ಕಾಗಿ ಭಾರತ ನಡಿಗೆ ಕಾರ್ಯಕ್ರಮದಲ್ಲಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾವಿಂದು ಜಿಡಿಪಿಯಲ್ಲಿ ಶಿಕ್ಷಣಕ್ಕೆ ಶೇ.10 ಮತ್ತು ವಿಜ್ಞಾನ ಸಂಶೋಧನೆಗೆ ಶೇ.3 ಅನುದಾನವನ್ನು ಮೀಸಲಾಗಿಡಬೇಕೆಂದು ಬೇಡುವ ಸ್ಥಿತಿಗೆ ಬಂದಿದ್ದೇವೆ. ಆದರೆ ಆಳ್ವಿಕರು ಮಠಮಾನ್ಯಗಳಿಗೆ ತಾ ಮುಂದು, ನಾ ಮುಂದು ಎಂದು ಕೋಟಿಗಟ್ಟಲೆ ಸುರಿಯುತ್ತಿದ್ದಾರೆ.ಅವೈಜ್ಞಾನಿಕ ವಿಷಯಗಳನ್ನು ವಿಜ್ಞಾನದ ಹೆಸರಿನಲ್ಲಿ ಎಲ್ಲೆಡೆ ಹರಡುತ್ತಿರುವ ಇಂದಿನ ಸಂದರ್ಭದಲ್ಲಿ ಅದಕ್ಕೆ ಪ್ರತಿರೋಧ ಒಡ್ಡಬೇಕು ಎಂದು ಕರೆ ನೀಡಿದರು.
ಬಾಲಭವನದ ಅಂಗಳದಲ್ಲಿ ನಡೆದ ಸಭೆಯಲ್ಲಿ, ಪಿಯುಸಿಎಲ್ ಪರವಾಗಿ ಮಾತನಾಡಿದ ಕೆ.ದೊರೈರಾಜ್, ವಿಶ್ವದಾದ್ಯಂತ ಬಂಡವಾಳಶಾಹಿಗಳಿಗೆ ಸಮಸ್ಯೆಗಳನ್ನು ಪರಿಹರಿಸಲು ಅಸಾಧ್ಯವಾದುದರಿಂದ ಮೌಢ್ಯವನ್ನು ತುಂಬುವ ಕೆಲಸ ಮಾಡುತ್ತಿದ್ದಾರೆ. ಭಾರತದಲ್ಲಿ ಸನಾತನ ವಿಚಾರಗಳನ್ನು ಹೊಂದಿರುವವರೇ ಅಧಿಕಾರದಲ್ಲಿರುವುದರಿಂದ ಮೌಢ್ಯವನ್ನು ಹರಡಲಾಗುತ್ತಿದೆ. ಆದ್ದರಿಂದ ವೈಜ್ಞಾನಿಕ ಮನೋಭಾವವನ್ನು ಬೆಳೆಸಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಶ್ರೀಮತಿ ಬಾ.ಹ.ರಮಾಕುಮಾರಿ ಮಾತನಾಡಿ, ಮಾಧ್ಯಮಗಳು ಕ್ಷಣಮಾತ್ರದಲ್ಲಿ ವಿಶಾಲ ಜನಸ್ತೋಮಕ್ಕೆ ಮೌಢ್ಯವನ್ನು ಹರಡುತ್ತಿವೆ. ನಾವು ಚಿಕ್ಕವಯಸ್ಸಿನಿಂದಲೇ ಪ್ರಶ್ನಿಸುವ ಮನೋಭಾವವನ್ನು ಬೆಳೆಸಬೇಕು. ಕಲೆ ಸಾಹಿತ್ಯದಲ್ಲೂ ಮೌಢ್ಯ ಬಿತ್ತುವುದು ನಡೆಯುತ್ತಿದೆಯೆಂದು ವಿಷಾಧಿಸಿದರು.
ತುಮಕೂರು ವಿಜ್ಞಾನ ಕೇಂದ್ರದ ಪರವಾಗಿ ಸಿ.ವಿಶ್ವನಾಥ್ ಮಾತನಾಡಿ, ವಿಜ್ಞಾನದ ಫಲಗಳು ಜನರಿಗೆ ಸಿಗಬೇಕು ಮತ್ತು ಜನರಿಗಾಗಿ ವಿಜ್ಞಾನ ಆಗಬೇಕು ಎಂದರು. ವೈಜ್ಞಾನಿಕ ಮನೋಭಾವ ಬೆಳೆಸಲು, ಬಜೆಟ್ನಲ್ಲಿ ಶಿಕ್ಷಣಕ್ಕೆ ಮತ್ತು ವಿಜ್ಞಾನ ಸಂಶೋಧನೆಗೆ ಹೆಚ್ಚಿನ ಹಣ ನೀಡಬೇಕು ಮತ್ತು ಸಾಕ್ಷ್ಯಾಧಾರಗಳೊಂದಿಗೆ ವೈಜ್ಞಾನಿಕ ನೀತಿಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿ ಈ ವಿಜ್ಞಾನಕ್ಕಾಗಿ ಭಾರತ ನಡಿೆ ಭಾರತದಾದ್ಯಂತ ನಡೆಯುತ್ತಿದೆ ವಿಜ್ಞಾನಕೇಂದ್ರದ ಸಿ.ಯತಿರಾಜು ಕಾರ್ಯಕ್ರಮದ ಔಚಿತ್ಯ ಕುರಿತು ಮಾತನಾಡಿದರು.
ಇದೇ ವೇಳೆ ಇತ್ತೀಚಗೆ ನಿಧನರಾದ ಖ್ಯಾತ ವಿಜ್ಞಾನಿಗಳಾದ ಪ್ರೊ.ಯು.ಆರ್.ರಾವ್,ಪ್ರೊ.ಯಶಪಾಲ್ ಮತ್ತು ಪ್ರೊ.ಪಿ.ಎಂ.ಭಾರ್ಗವ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.