ವೈ.ಎಸ್.ವಿ. ದತ್ತರ ಪಾದಯಾತ್ರೆ ಅಂತ್ಯ
ಕಡೂರು, ಅ. 12: ಶಾಸಕ ವೈ.ಎಸ್.ವಿ. ದತ್ತ ಅವರ 1 ಸಾವಿರ ಕಿ.ಮೀ ಪಾದಯಾತ್ರೆ ಶನಿವಾರ ಕಡೂರು ಪಟ್ಟಣವನ್ನು ಪ್ರವೇಶಿಸುವ ಮೂಲಕ ಮುಕ್ತಾಯವಾಯಿತು.
ಕಳೆದ ಜೂ.25ರಂದು ತಾಲೂಕಿನ ಜಿ.ಯರದಕೆರೆ ಗ್ರಾಮದಿಂದ ಪ್ರಾರಂಭವಾಗಿದ್ದ ಪಾದಯಾತ್ರೆ ಸುಮಾರು 380 ಗ್ರಾಮಗಳನ್ನು ಹಾಯ್ದು 45 ಗ್ರಾಪಂ ಗಳ ಕೇಂದ್ರ ಭೇಟಿ ಮಾಡಿ ಅಲ್ಲಲ್ಲಿ ಶಂಕುಸ್ಥಾಪನೆ, ಉದ್ಟಾಟನೆಯಂತಹ ಅಭಿವೃದ್ದಿ ಕಾರ್ಯಕ್ರಮಗಳನ್ನು ದತ್ತ ನಿರ್ವಹಿಸಿಕೊಂಡು ಇದೀಗ ಕಡೂರು ಪಟ್ಟಣಕ್ಕೆ ಬಂದಿದ್ದಾರೆ. ಪಾದಯಾತ್ರೆಯನ್ನು ಪಟ್ಟಣಕ್ಕೆ ಬರಮಾಡಿಕೊಳ್ಳಲು ನೂರಾರು ಕಾರ್ಯಕರ್ತರು ದತ್ತ ಅವರ ಅಭಿಮಾನಿಗಳು ಹಾಗೂ ನಾಗರೀಕರು ಪಟ್ಟಣಕ್ಕೆ ಸಮೀಪದ ಮಲ್ಲೇಶ್ವರ ಗ್ರಾಮದ ಬಳಿ ಜಮಾಯಿಸಿದ್ದರು.
ಮಲ್ಲ್ಲೇಶ್ವರದಿಂದ ಪಟ್ಟಣದವರೆಗೆ ತಳಿರು-ತೋರಣಗಳನ್ನು ಕಟ್ಟಲಾಗಿತ್ತು. ಆಳೆತ್ತರದ ಫ್ಲೆಕ್ಸ್ಗಳಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಮಜಿ ಪ್ರಧಾನಿ ದೇವೇಗೌಡ, ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ, ಸಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರನ್ನು ಕಂಡು ಜನರು ಪುಳಕಿತರಾದರು.
ಮಧ್ಯಾಹ್ನ 12.30ಕ್ಕೆ ಪಾದಯಾತ್ರೆ ಪಟ್ಟಣ ಪ್ರವೇಶ ಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಕಾರ್ಯಕ್ರಮ ನಡೆಯುವ ಗಣಪತಿ ಪೆಂಡಾಲ್ನಲ್ಲಿ ಮುಕ್ತಾಯವಾಯಿತು. ಪಾದಯಾತ್ರೆಯಲ್ಲಿ ಸಾಂಸ್ಕೃತಿಕ ತಂಡಗಳ ಪ್ರದರ್ಶನ ಮತ್ತು ಅಭಿಮಾನಿಗಳ ಜಯಘೋಷ ಮುಗಿಲು ಮುಟ್ಟಿತ್ತು. ಸಾಂಪ್ರದಾಯಕ ಉಡುಗೆ ತೊಟ್ಟ ಬಂಜಾರ ಮಹಿಳೆಯರ ನ್ಯತ್ಯ, ಮುಸ್ಲಿಂ ಫಕೀರರ ಕುಣಿತ ಮುಂತಾದ ಕಲಾತ್ಮಕ ಪ್ರದರ್ಶನಗಳು ಪಾದಯಾತ್ರೆಗೆ ಮೆರಗು ನೀಡಿದವು. ರಸ್ತೆಯ ಇಕ್ಕೆಲಗಳಲ್ಲಿ ಹಲವಾರು ನಾಗರೀಕರು ನಿಂತು ಪಾದಯಾತ್ರೆ ವೀಕ್ಷಿಸಿದರು.