ಕಾಂಗ್ರೆಸ್ 160 ಸ್ಥಾನ ಗೆಲ್ಲಲಿದೆ: ಭವಿಷ್ಯ ನುಡಿದ ಝಮೀರ್ ಅಹಮದ್

Update: 2017-08-13 09:35 GMT

ತುಮಕೂರು, ಆ.13: ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 160ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಬೆಂಗಳೂರಿನ ಚಾಮರಾಜಪೇಟೆ ಶಾಸಕ ಝಮೀರ್ ಅಹಮದ್ ಭವಿಷ್ಯ ನುಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರಾಗಲಿ, ಅಮಿತ್ ಶಾ ಆಗಲಿ ಯಾರೇ ಬಂದರೂ ಅವರ ಪಕ್ಷ 60 ಸ್ಥಾನಕ್ಕಿಂತ ಹೆಚ್ಚು ಗೆಲ್ಲುವುದಿಲ್ಲ ಎಂದು ತಿಳಿಸಿದರು.

ನಗರದ ಶಾಸಕ ಡಾ.ರಫೀಕ್ ಅಹಮದ್ ಅವರ ಮನೆಗೆ ಆಕಸ್ಮಿಕವಾಗಿ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಶಿರಾದ ಮಾಜಿ ಸಚಿವ ಬಿ.ಸತ್ಯನಾರಾಯಣ ಅವರ ಮನೆಗೆ ಹೋಗುತ್ತಿದ್ದೇನೆ. ಮಾರ್ಗ ಮಧ್ಯೆ ಇಲ್ಲಿಗೆ ಬಂದೆ. ಮಾಜಿ ಶಾಸಕ ಶಫೀ ಅಹಮದ್ ಅವರ ಜತೆ ಹಳೆಯ ಬಾಂಧವ್ಯ ಹೊಂದಿದ್ದೇನೆ. ಇನ್ನು ಶಾಸಕ ಡಾ.ರಫೀಕ್ ಅಹಮದ್ ಅತ್ಯಂತ ಸರಳ-ಸಜ್ಜನಿಕೆ ವ್ಯಕ್ತಿ ಎಂದು ಹೇಳಿದರು.

ನಾನು ಜೆಡಿಎಸ್ ಪಕ್ಷದಲ್ಲಿ ಇದ್ದರೂ ದೇವೇಗೌಡರು ಏಕೆ ಅಮಾನತು ಮಾಡಿದರು. ನನ್ನನ್ನು ಮೀರ್ ಸಾದಿಕ್ ಎಂದು ಹೇಳಿದ್ದಾರೆ. ನಾನು ಯಾರಿಗೂ ದ್ರೋಹ ಬಗೆದಿಲ್ಲ. ಪಕ್ಷಕ್ಕೆ ರಾಜೀನಾಮೆ ಕೊಡಿ ಎಂದು ಅವರು ಹೇಳುವಂತಿಲ್ಲ. ನನಗೆ ಮತ ಹಾಕಿರುವವರು ಜನ. ದೇವೇಗೌಡರು ಅಲ್ಲ ಎಂದು ಹೇಳಿದರು.
ಜೆಡಿಎಸ್ ಅತೃಪ್ತ ಶಾಸಕರಿಗೆ ರಾಹುಲ್ ಗಾಂಧಿ ಆಹ್ವಾನ ನೀಡಿದ್ದಾರೆ. ನಾವು ಏಳು ಜನ ಜೆಡಿಎಸ್‍ಗೆ ಸೇರ್ಪಡೆಯಾಗಲಿದ್ದೇವೆ. ಇದೇ 17ರಂದು ರಾಹುಲ್ ಗಾಂಧಿಯವರನ್ನು ಭೇಟಿಯಾಗುತ್ತೇವೆ. ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಹೋಗುತ್ತೇವೆ. ಡಿಸೆಂಬರ್‍ಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತೇವೆ. ಫೆಬ್ರವರಿಯಲ್ಲಿ ಇನ್ನೂ 6 ಜನ ಜೆಡಿಎಸ್ ಅತೃಪ್ತ ಶಾಸಕರು ಕಾಂಗ್ರೆಸ್‍ಗೆ ಬರಲಿದ್ದಾ ರೆ ಎಂದು ತಿಳಿಸಿದರು.

ನಟ ಉಪೇಂದ್ರ ಚಿತ್ರರಂಗದಿಂದ ನಿವೃತ್ತಿ ಹೊಂದುತ್ತಿದ್ದಾರೆ. ಈಗ ಅವರು ಬದಲಿ ವ್ಯವಸ್ಥೆ ಕಂಡುಕೊಳ್ಳಲು ರಾಜಕೀಯ ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಅವರ ಗಿಮಿಕ್ ಇಲ್ಲಿ ನಡೆಯೋದಿಲ್ಲ. ಬಡವರ ಪರ ಕಾಳಜಿ ಇದ್ದರೆ ತಮ್ಮ ಸಂಪಾದನೆಯಲ್ಲಿ ಜನರಿಗೆ ಸಹಾಯ ಮಾಡಬೇಕಿತ್ತು. ಏನು ಮಾಡಿದ್ದಾರೆ ಜನರಿಗೆ. ಸಿನಿಮಾ ಡೈಲಾಗ್ ಸಿನಿಮಾಕ್ಕೆ ಮಾತ್ರ ಸೀಮಿತ ಎಂದು ಅವರು ತಿಳಿಸಿದರು.  

ಅಮಿತ್ ಷಾ ಮೋಡಿ ಕರ್ನಾಟಕದಲ್ಲಿ ನಡೆಯುವುದಿಲ್ಲ. ಇದು ಬಿಹಾರ, ಗುಜರಾತ್ ಅಲ್ಲ. ಅಮಿತ್ ಷಾ, ಮೋದಿ ಬಂದು ಇಲ್ಲಿ ಕುಳಿತರೂ ಕರ್ನಾಟಕದಲ್ಲಿ 60 ಸ್ಥಾನಕಿಂತ ಹೆಚ್ಚು ಸ್ಥಾನ ಅವರಿಗೆ ಬರಲ್ಲ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಮತ್ತೆ 160 ಕ್ಕೂ ಹೆಚ್ಚು ಸ್ಥಾನ ಪಡೆಯುವ ಮೂಲಕ ಮತ್ತೆ ಆಧಿಕಾರಕ್ಕೆ ಬರಲಿದೆ. ಎರಡನೆ ಬಾರಿಗೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುವುದು ಖಚಿತ ಎಂದು ಝಮೀರ್ ಅಹಮದ್ ಪುನರುಚ್ಚರಿಸಿದರು.

ಮಾಜಿ ಶಾಸಕರಾದ ಹೆಚ್.ನಿಂಗಪ್ಪ, ಷಫೀ ಅಹಮದ್ ಹಾಗೂ ಆಟೋ ರಾಜು, ಶಕೀಲ್ ಮೆಹಬೂಬ್ ಪಾಷ, ಅಫ್ತಬ್ ಆಹಮದ್ ಸೇರಿದಂತೆ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News