ದೇಶದ ಹೋರಾಟ ವಿಶ್ವಕ್ಕೆ ಮಾದರಿ: ಸಚಿವ ಎಂ.ಕೃಷ್ಣಪ್ಪ
ಮಂಡ್ಯ, ಆ.15: ಜಿಲ್ಲೆಯಲ್ಲಿ ಬಿಡುವಿಲ್ಲದ ಮಳೆ ಸುರಿದ ಪರಿಣಾಮ ಮಂಗಳವಾರ 71ನೆ ಸ್ವಾತಂತ್ರ್ಯ ದಿನವನ್ನು ಸರಳವಾಗಿ ಆಚರಿಸಲಾಯಿತು. ಪಥ ಸಂಚಲನ ರದ್ದುಪಡಿಸಿ ಧ್ವಜ ವಂದನೆ, ಗಣ್ಯರ ಭಾಷಣಕ್ಕೆ ಕಾರ್ಯಕ್ರಮವನ್ನು ಸೀಮಿತಗೊಳಿಸಬೇಕಾಯಿತು.
ಸೋಮವಾರ ರಾತ್ರಿಯಿಂದಲೇ ಜಿಲ್ಲೆಯಲ್ಲಿ ಆರಂಭವಾದ ಮಳೆ ಮಂಗಳವಾರದ ಬೆಳಗಿನವರೆಗೂ ಸುರಿಯತಲೇ ಇತ್ತು. ಇದರಿಂದ ಕ್ರೀಡಾಂಗಣಗಳು ಜಲಾವೃತಗೊಂಡಿದ್ದವಲ್ಲದೆ, ಕಾರ್ಯಕ್ರಮಕ್ಕೆ ಪ್ರೇಕ್ಷಕರು ಆಗಮಿಸಲು ಅಡ್ಡಿಯಾಯಿತು.
ಪಥ ಸಂಚಲನ, ದೇಶಭಕ್ತಿ ಪ್ರತಿಬಿಂಬಿಸುವ ನೃತ್ಯ, ಇತರೆ ಕಾರ್ಯಕ್ರಮಗಳಿಗೆ ವಾರದಿಂದಲೂ ತಾಲೀಮು ನಡೆಸಿದ್ದ ವಿದ್ಯಾರ್ಥಿಗಳು ವರುಣನ ಆರ್ಭಟದ ಪರಿಣಾಮ ಕೇವಲ ಧ್ವಜ ವಂದನೆ ಕಾರ್ಯಕ್ರಮ ನೋಡಿ ಮನೆಗೆ ತೆರಳಿದರು.
ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣ ಅಕ್ಷರಸಹ ತುಂಬಿದ ಕೆರೆಯಂತೆ ಕಾಣುತ್ತಿತ್ತು. ಪಥ ಸಂಚಲನ, ಇತರೆ ಪ್ರದರ್ಶನಗಳನ್ನು ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪೊಲೀಸರು ಮಾತ್ರ ಪಥ ಸಂಚಲನ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಧ್ವಜಾರೋಹಣ ನೆರವೇರಿಸಿದರು.
ವಿಶ್ವಕ್ಕೆ ಮಾದರಿ ಹೋರಾಟ: ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಎಂ. ಕೃಷ್ಣಪ್ಪ, ಭಾರತವನ್ನು ಬ್ರಿಟೀಷರ ಆಡಳಿತದಿಂದ ಮುಕ್ತಿಗೊಳಿಸಲು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಅಹಿಂಸಾತ್ಮಕ ಹೋರಾಟ ವಿಶ್ವದ ಇತಿಹಾಸದಲ್ಲಿಯೇ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಯಾವುದೇ ರಕ್ತಪಾತವಿಲ್ಲದೆ, ಮದ್ದುಗುಂಡುಗಳ ಕಾಳಗವಿಲ್ಲದೆ ಸತ್ಯ, ಅಹಿಂಸೆ ಹಾಗು ಉಪವಾಸ ಸತ್ಯಾಗ್ರಹದಂತಹ ಅಹಿಂಸಾತ್ಮಕ ಅಸ್ತ್ರಗಳ ಮೂಲಕ ಬ್ರಿಟೀಷರು ತಾವಾಗಿಯೇ ದೇಶ ಬಿಟ್ಟು ಹೋಗುವಂತೆ ಮಾಡಿದ ವಿನೂತನ ಹೋರಾಟವಿದು ಎಂದು ಅವರು ಹೇಳಿದರು.
ಹಿರಿಯರ ತ್ಯಾಗ, ಬಲಿದಾನ, ಅವಿಚ್ಛಿನ್ನ ದೇಶಭಕ್ತಿಯ ಪರಿಣಾಮವಾಗಿ ನಾವಿಂದು ಸ್ವಾತಂತ್ರ್ಯ ಎಂಬ ಸ್ವರ್ಗದಲ್ಲಿದ್ದೇವೆ. ಈ ಪವಿತ್ರ ದಿನದಂದು ದೇಶಕ್ಕಾಗಿ ಬಲಿದಾನಗೈದ ಆ ಅಸಂಖ್ಯ ವೀರಚೇತನಗಳಿಗೆ ನಮನ ಸಲ್ಲಿಸುವುದು ಅಗ್ರ ಕರ್ತವ್ಯ ಎಂದು ಅವರು ನುಡಿದರು.
ಭಾರತವೀಗ ಜಾಗತಿಕ ನಾಯಕನಾಗುವ ಎಲ್ಲ ಗರಿಮೆ ತೋರಿದೆ. ಕೃಷಿ, ಕೈಗಾರಿಕೆ, ವಿಜ್ಞಾನ, ಶಿಕ್ಷಣ, ಸಾಮಾಜಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆಗೈದು ಜಾಗತಿಕಮಟ್ಟದ ಬಲಾಢ್ಯ ದೇಶಗಳ ಜತೆ ಗುರುತಿಸಿಕೊಂಡಿದೆ ಎಂದು ಅವರು ವಿವರಿಸಿದರು.
ಸ್ವಾತಂತ್ರ್ಯ ಚಳವಳಿಯ ಇತಿಹಾಸದಲ್ಲಿ ಮಂಡ್ಯ ಜಿಲ್ಲೆಗೆ ರಾಜ್ಯದಲ್ಲೇ ವಿಶೇಷ ಸ್ಥಾನಮಾವಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಮದ್ದೂರಿನ ಶಿವಪುರದಲ್ಲಿ ನಡೆದ ಧ್ವಜಸತ್ಯಾಗ್ರಹ ಹೋರಾಟವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರ್, ದಿವನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯ, ಸರ್.ಮಿರ್ಜಾ ಇಸ್ಮಾಯಿಲ್, ಖ್ಯಾತ ಕೃಷಿ ತಜ್ಞ ಲೆಸ್ಲಿ ಸಿ.ಕೋಲ್ಮನ್ ಸೇರಿದಂತೆ ಹಲವು ಮುತ್ಸದ್ಧಿಗಳು ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಬುನಾದಿ ಹಾಕಿದ್ದಾರೆ ಎಂದು ಅವರು ಸ್ಮರಿಸಿದರು.
ಯಾವುದೇ ಜಾತಿ, ಮತ ಬೇಧಗಳನ್ನು ಮಾಡುವ ಶಕ್ತಿಗಳನ್ನು ದಮನ ಮಾಡಿ ಸರ್ವ ಧರ್ಮೀಯರು ಪ್ರೀತಿ ಹಾಗೂ ಸೌಹಾರ್ದತೆಯಿಂದ ಬಾಳಿ ಸುಭದ್ರವಾದ ಭಾರತವನ್ನು ನಿರ್ಮಿಸುವ ಸಂಕಲ್ಪ ಮಾಡಬೇಕಾಗಿದೆ ಎಂದು ಕೃಷ್ಣಪ್ಪ ಕರೆ ನೀಡಿದರು.
ರಾಜ್ಯದ ಅಭಿವೃದ್ಧಿಯಲ್ಲಿ ಹಲವು ಸರಕಾರಗಳು ತಮ್ಮದೇ ಕೊಡುಗೆ ನೀಡಿವೆ ಎಂದ ಅವರು, ನಾಲ್ಕು ವರ್ಷದ ಕಾಂಗ್ರೆಸ್ ಸರಕಾರ ಅನ್ನಭಾಗ್ಯದ ಮೂಲಕ ಬಡವರ ಹಸಿವನ್ನು ನೀಗಿಸಿದ್ದರೆ, ಸಮಾಜದ ಎಲ್ಲ ಜನರ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ ಎಂದರು.
ಸತತ ಬರಗಾಲದ ಹಿನ್ನೆಲೆಯಲ್ಲಿ ಜನಜಾನುವಾರುಗಳ ಕುಡಿಯುವ ನೀರು, ಮೇವಿಗೆ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ರೈತರ ಸಹಕಾರ ಸಂಘಗಳ ಸಾಲಮನ್ನಾ ಮಾಡಿ ಆತ್ಮಸ್ಥೈರ್ಯ ತುಂಬಿದೆ. ಬರಪರಿಹಾರ ನೀಡಲಾಗಿದೆ. ಮನೆಯಿಲ್ಲದವರಿಗೆ ಮನೆ ಒದಗಿಸಲಾಗಿದೆ ಎಂದು ಅವರು ಸರಕಾರದ ಸಾಧನೆಗಳನ್ನು ಬಿಚ್ಚಿಟ್ಟರು.
ಸಿ.ಎಂ. ಚಿನ್ನದ ಪದಕ ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಕೆ.ಮಹೇಶ್, ಅಪಘಾತ ವೇಳೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಜೀವ ಉಳಿಸಿದ್ದ ಮಳವಳ್ಳಿಯ ಶಿವಪ್ಪ, ಕೆ.ಎಂ.ದೊಡ್ಡಿಯ ಶರತ್ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಲಾಯಿತು.
ಸ್ಥಳೀಯ ಶಾಸಕ ಅಂಬರೀಶ್ ಗೈರುಹಾಜರಿಗಿದ್ದರು. ವಿಧಾನಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ವಿಧಾನಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ, ಜಿಪಂ ಅಧ್ಯಕ್ಷೆ ಜೆ.ಪ್ರೇಮಕುಮಾರಿ, ನಗರಸಭೆ ಅಧ್ಯಕ್ಷ ಹೊಸಹಳ್ಳೀ ಬೋರೇಗೌಡ, ತಾಪಂ ಅಧ್ಯಕ್ಷ ಬೀರಪ್ಪ, ಜಿಲ್ಲಾಧಿಕಾರಿ ಮಂಜುಶ್ರೀ, ಎಸ್ಪಿ ರಾಧಿಕಾ, ಜಿಪಂ ಸಿಇಓ ಬಿ.ಶರತ್, ಇತರ ಗಣ್ಯರು ಪಾಲ್ಗೊಂಡಿದ್ದರು.