×
Ad

ಸಾಹಿತಿ ಬರಗೂರು ರಾಮಚಂದ್ರಪ್ಪ ವಿರುದ್ಧ ಪ್ರತಿಭಟನೆ

Update: 2017-08-17 16:48 IST

ಸಾಗರ,ಆ.17 : ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಭಾಷಾ ಪುಸ್ತಕದಲ್ಲಿ `ಯುದ್ದ ಒಂದು ಉದ್ಯಮ’ ಎಂಬ ಪಠ್ಯದಲ್ಲಿ ಸೈನಿಕರನ್ನು ಅವಮಾನಿಸಿರುವುದನ್ನು ಖಂಡಿಸಿ ಗುರುವಾರ ಮಾಜಿ ಯೋಧರ ಕಲ್ಯಾಣ ಟ್ರಸ್ಟ್ ವತಿಯಿಂದ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಯೋಧ ಹಾಗೂ ವನವಾಸಿ ಕಲ್ಯಾಣ ಸಮಿತಿಯ ಪ್ರಚಾರಕ್ ಕೃಷ್ಣಮೂರ್ತಿ ಕೆ. ಸೈನಿಕರನ್ನು ಅವಮಾನಿಸುವ ಕೆಲಸ ಮಾಡಿರುವ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಬರಹ ಖಂಡನೀಯವಾದದ್ದು. ಸೈನಿಕರು ತಮ್ಮ ಕುಟುಂಬವರ್ಗವನ್ನು ಬಿಟ್ಟು ಗಡಿಯನ್ನು ದೇಶ ಕಾಯುತ್ತಿರುವುದರಿಂದಲೆ ದೇಶವಾಸಿಗಳು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ಅಂತಹ ಸೈನಿಕರನ್ನು, ಅವರ ಕುಟುಂಬವನ್ನು ಅವಹೇಳನಕಾರಿಯಾಗಿ ಚಿತ್ರಿಸುವುದು, ಪಠ್ಯಗಳಲ್ಲಿ ಅವರ ಕುರಿತು ಅವಹೇಳನೆಯಾಗಿ ಬರೆಯುವುದು ಅಕ್ಷಮ್ಯ ಅಪರಾಧ ಎಂದು ದೂರಿದರು.

ಸೈನಿಕರು ದೇಶದ ಮುಕುಟವಿದ್ದಂತೆ. ಇಂತಹ ಸೈನಿಕರ ಕುರಿತು ಮಂಗಳೂರು ವಿಶ್ವವಿದ್ಯಾಲಯದ 2017-18ನೇ ಸಾಲಿನ ಶೈಕ್ಷಣಿಕ ವರ್ಷದ ಭಾಷಾ ಪುಸ್ತಕದಲ್ಲಿ ಪದಚಿತ್ತಾರ ಎಂಬ ಕನ್ನಡ ಪುಸ್ತಕದಲ್ಲಿ ಬರಗೂರು ರಾಮಚಂದ್ರಪ್ಪ ಯುದ್ದ ಒಂದು ಉದ್ಯಮ ಎಂಬ ಪಾಠವನ್ನು ಬರೆದಿದ್ದಾರೆ. ಇದು ಸೈನಿಕರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವಂತಹದ್ದಾಗಿದೆ. ಇಂತಹ ಬರಹಗಳಿಂದ ಯುವಜನರು ಸೈನ್ಯಕ್ಕೆ ಸೇರಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಬರಗೂರು ರಾಮಚಂದ್ರಪ್ಪ ಅವರು ಹೊಂದಿರುವ ಎಲ್ಲ ಸಾಂವಿಧಾನಿಕ ಹುದ್ದೆಗಳಿಂದ ಉಚ್ಚಾಟಿಸಬೇಕು. ಇದುವರಗೆ ಬರಗೂರು ಅವರಿಗೆ ನೀಡಿದ ಎಲ್ಲ ಪ್ರಶಸ್ತಿಗಳನ್ನು ಹಿಂದಕ್ಕೆ ಪಡೆಯಬೇಕು. ಮುಂದೆ ಸರ್ಕಾರದ ಯಾವುದೆ ಹುದ್ದೆ ಅಥವಾ ಪ್ರಶಸ್ತಿಗೆ ಇವರ ಹೆಸರನ್ನು ಪರಿಗಣಿಸಬಾರದು ಎಂದು ಒತ್ತಾಯಿಸಿದರು.

ಟ್ರಸ್ಟ್‍ನ ಗೌರವಾಧ್ಯಕ್ಷ ಬಿ.ಟಿ.ಸೋಮನ್ ಮಾತನಾಡಿ, ಪದವಿ ಪ್ರಥಮ ವರ್ಷದ ಪಠ್ಯದಲ್ಲಿ ಬರಗೂರು ರಾಮಚಂದ್ರಪ್ಪ ಅವರು ಸೈನಿಕ ಕ್ರೂರಿಯಾಗಿರುತ್ತಾನೆ. ಮದ್ಯಮಾಂಸ ಸೇವನೆ ಲಾಲಸೆಯಿಂದ ಆತನನ್ನು ಸೈನ್ಯಕ್ಕೆ ಸೆಳೆಯಲಾಗುತ್ತದೆ. ಗಡಿಭಾಗದಲ್ಲಿ ಸೈನಿಕರು ಅತ್ಯಾಚಾರ ಎಸಗುತ್ತಾರೆ. ಸೈನಿಕರ ಮಡದಿಯರು ಒಂಟಿತನ ಕಾಡಿ ತಪ್ಪುದಾರಿ ಹಿಡಿಯುತ್ತಾರೆ. ಜೀವದ ಹಂಗು ತೊರೆದು ತಾಯ್ನಾಡಿನ ರಕ್ಷಣೆ ಮಾಡುವ ಯುದ್ದವನ್ನು ಬರಗೂರು ರಾಮಚಂದ್ರಪ್ಪ ಯುದ್ದೋದ್ಯಮ ಎಂದು ಉಲ್ಲೇಖಿಸುವ ಮೂಲಕ ತಮ್ಮ ಕೀಳುಮಟ್ಟದ ಸಾಹಿತ್ಯಬುದ್ದಿಯನ್ನು ಪ್ರದರ್ಶಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟ್ರಸ್ಟ್ ಅಧ್ಯಕ್ಷ ರಂಗರಾಜು ಬಾಳೆಗುಂಡಿ ಮಾತನಾಡಿ ಬರಗೂರು ರಾಮಚಂದ್ರಪ್ಪ ಬರವಣಿಗೆಯಿಂದ ಸಮಸ್ತ ಸೈನಿಕರಿಗೆ ಅವಮಾನವಾಗಿದೆ. ಇಂತಹ ಅವಹೇಳನಕಾರಿ ವಿಷಯವನ್ನು ವಿಶ್ವವಿದ್ಯಾಲಯದ ಪಠ್ಯ ವಿಷಯದಲ್ಲಿ ಪ್ರಕಟಿಸಲು ಭಾಗಿಯಾದ ಪಠ್ಯ ಸಮಿತಿಯ ಎಲ್ಲ ಮುಖ್ಯಸ್ಥರನ್ನು ಮತ್ತು ಸದಸ್ಯರನ್ನು ಈ ಕೂಡಲೆ ವಜಾಗೊಳಿಸಿ, ಶಿಸ್ತುಕ್ರಮ ಜರುಗಿಸಬೇಕು. ಅವರಿಗೆ ನೀಡಿರುವ ಸರ್ಕಾರಿ ಸವಲತ್ತುಗಳನ್ನು ಹಿಂದಕ್ಕೆ ಪಡೆಯಬೇಕು. ಮುಂದಿನ ದಿನಗಳಲ್ಲಿ ಸೈನಿಕರ ಕುರಿತ ಅಸತ್ಯ ಸಂಗತಿಗಳನ್ನು ಯಾವುದೆ ಪುಸ್ತಕದಲ್ಲಿ ಪ್ರಕಟಿಸದಂತೆ ಸರ್ಕಾರ ನಿಗಾವಹಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಟ್ರಸ್ಟ್‍ನ ಕಾರ್ಯದರ್ಶಿ ವಿಷ್ಣು ಹೆಗಡೆ, ಉಪಾಧ್ಯಕ್ಷ ಈಶ್ವರಪ್ಪ, ಕೃಷ್ಣಮೂರ್ತಿ, ವೆಂಕಟೇಶ್, ದಿನೇಶ್ ಜೆ.ವಿ. ಗಂಗಾಧರ ಟಿ., ಅಣ್ಣಪ್ಪ ಡಿ.ಕೆ., ಮಮತಾ ಭಾಸ್ಕರ, ನೇತ್ರಾವತಿ ನಾರಾಯಣ, ಗಿರಿಜಾ ಇನ್ನಿತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News