​ಘನತ್ಯಾಜ್ಯ ಘಟಕದ ಬಳಿ ಸಸಿ ನೆಡುವ ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವರಿಂದ ಚಾಲನೆ

Update: 2017-08-17 18:09 GMT

ಚಾಮಾಜನಗರ, ಆ. 17  : ನಗರದ ಹೊರವಲಯದ ಕರಿವರದರಾಜನ ಬೆಟ್ಟದ ಬಳಿಯಿರುವ ಘನತ್ಯಾಜ್ಯ ಘಟಕದ ಬಳಿ ಸಸಿ ನೆಡುವ ಕಾರ್ಯಕ್ರಮಕ್ಕೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಇಂದು ಚಾಲನೆ ನೀಡಿದರು.

ಪಟ್ಟಣದ ಘನತ್ಯಾಜ್ಯ ನಿರ್ವಹಣೆ ಘಟಕದ ಬಳಿ ಪರಿಸರವನ್ನು ಸಮತೋಲನವಾಗಿರಿಸುವ ಉದ್ದೇಶದಿಂದ ನಗರಸಭೆ ವತಿಯಿಂದ ಹಮ್ಮಿಕೊಂಡಿರುವ ವಿಶೇಷ ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಡುವ ಕೆಲಸಕ್ಕೆ ಉಸ್ತುವಾರಿ ಸಚಿವರು ಮುಂದಾದರು.

ಸಚಿವರೊಂದಿಗೆ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಬಿ. ರಾಮು ಸೇರಿದಂತೆ ಇತರರು ಸಹ ಸಸಿಗಳನ್ನು ನೆಟ್ಟು ನೀರೆರೆದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಘನತ್ಯಾಜ್ಯ ನಿರ್ವಹಣೆ ಜತೆಯಲ್ಲಿಯೇ ಪರಿಸರವನ್ನು ಉತ್ತಮವಾಗಿ ಕಾಪಾಡಿಕೊಳ್ಳುವ ಉದ್ದೇಶದಿಂದ ಸಸಿ ನೆಡುವ ಚಿಂತನೆ ಉತ್ತಮವಾಗಿದೆ. ಈ ದಿಕ್ಕಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಗಿಡಮರಗಳ ಪೋಷಣೆಗೆ ಮುಂದಾಗಿರುವುದು ಒಳ್ಳೆಯ ಕೆಲಸವಾಗಿದೆ. ಭವಿಷ್ಯದ ದೃಷ್ಠಿಯಿಂದ ಇದೊಂದು ಅತ್ಯುತ್ತಮ ಕಾರ್ಯವೆಂದು ಹೇಳಿದರು.

ಒಟ್ಟು 7.5 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಘನತ್ಯಾಜ್ಯ ಘಟಕ ನಿರ್ಮಾಣ ಆಗಲಿದೆ. ಒಟ್ಟಾರೆ 25 ಎಕರೆ ಪ್ರದೇಶವನ್ನು ಹೊಂದಿರುವ ಘನತ್ಯಾಜ್ಯ ಘಟಕ ಜತೆಯಲ್ಲಿಯೇ ಯಾವುದೇ ತೊಂದರೆಗೆ ಆಸ್ಪದವಾಗದಂತೆ ಉತ್ತಮ ಪರಿಸರ ಕಲ್ಪಿಸಲು ಈಗಿನಿಂದಲೇ ಕಾರ್ಯಪ್ರವೃತ್ತವಾಗುತ್ತಿದೆ. ಈ ಎಲ್ಲಾ ಕೆಲಸಗಳು ಸಮರ್ಪಕವಾಗಿ ನಡೆಯಲಿದೆ ಎಂಬ ಆಶಯವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ವ್ಯಕ್ತಪಡಿಸಿದರು.

ಇದೇ ವೇಳೆ ಪ್ರತಿನಿತ್ಯ ಸಂಗ್ರಹವಾಗುತ್ತಿರುವ ಘನತ್ಯಾಜ್ಯ ಪ್ರಮಾಣ, ಪ್ರಸ್ತುತ ಇದರ ವಿಲೇವಾರಿ ನಿರ್ವಹಣೆ ಕುರಿತು ಪರಿಸರ ಇಲಾಖೆ ಅಧಿಕಾರಿ ಗಿರಿಜಮ್ಮ ಅವರು ಮಾಹಿತಿ ನೀಡಿದರು.

ನಗರಸಭೆ ಪ್ರಭಾರ ಅಧ್ಯಕ್ಷರಾದ ಆರ್.ಎಂ. ರಾಜಪ್ಪ, ನಗರಸಭೆ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ರೇಣುಕ, ಮಹೇಶ್ ಉಪ್ಪಾರ್, ಚಿನ್ನಸ್ವಾಮಿ, ಗಾಳಿಪುರ ಮಹೇಶ್, ಬಂಗಾರು, ಗೋಪಾಲಕೃಷ್ಣ, ಇಮ್ರಾನ್, ಶೋಭ ಪುಟ್ಟಸ್ವಾಮಿ, ಎಪಿಎಂಸಿ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ನಗರಸಭೆ ಆಯುಕ್ತರಾದ ರಾಜಣ್ಣ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸತ್ಯಮೂರ್ತಿ, ಆರೋಗ್ಯ ನಿರೀಕ್ಷಕರಾದ ಮಹದೇವಸ್ವಾಮಿ, ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News