×
Ad

ಸಾಂಕ್ರಮಿಕ ರೋಗಗಳ ತಡೆ: ಸ್ವಚ್ಛತೆ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ

Update: 2017-08-18 21:59 IST

ಚಿಕ್ಕಮಗಳೂರು, ಆ.18:ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸ್ವಚ್ಛತೆ ಕೈಗೊಂಡು ಸಾಂಕ್ರಮಿ ರೋಗಗಳು ಹರಡದಂತೆ ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ಜಿ. ಸತ್ಯವತಿ ಅಧಿಕಾರಿಗಳಿಗೆ ಸೂಚಿಸಿದರು.

ಅವರು ಡೆಂಗ್ಯೂ ಮತ್ತು ಇತರೆ ಸಾಂಕ್ರಮಿಕ ರೋಗಗಳ ನಿಯಂತ್ರಣದ ಕುರಿತು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ 17 ಆಗಸ್ಟ್ 2017 ರ ಮಾಹೆಯ ಅಂತ್ಯದ ವರೆಗೆ 178 ಡೆಂಗ್ಯೂ ಪ್ರಕರಣಗಳು, 15 ಚಿಕೂನ್‍ಗುನ್ಯಾ ಪ್ರಕರಣಗಳು ಹಾಗೂ 6 ಮಲೇರಿಯ ಪ್ರಕರಣಗಳು ಕಂಡು ಬಂದಿವೆ, ಸ್ವಚ್ಛತೆಯನ್ನು ಕಾಪಾಡದಿದ್ದರೆ ಸೊಳ್ಳೆಗಳು ಹೆಚ್ಚಾಗಿ ರೋಗಗಳ ಹರಡುವಿಕೆಗೆ ಕಾರಣವಾಗುತ್ತದೆ ಅದ್ದರಿಂದ ತಮ್ಮ ವ್ಯಾಪ್ತಿಯಲ್ಲಿ ಕಸವನ್ನು ಆಗಾಗ್ಗೆ ತೆಗೆಯಬೇಕು, ಚರಂಡಿಗಳನ್ನು ಸ್ವಚ್ಛಗೊಳಿಸಬೇಕು ಎಂದು ತಿಳಿಸಿದರು.

ನಗರ ಗ್ರಾಮಂತರ ಪ್ರದೇಶಗಳಲ್ಲಿ ಹೆಚ್ಚು ಪ್ರಚಾರ ಕೈಗೊಂಡು ಜನರಲ್ಲಿ ಜಾಗೃತಿ ಮೂಡಿಸಿ ಮನೆಯ ಸುತ್ತ ಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಂಡು ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಹಾಗೂ ನೀರು ಶೇಖರಣೆಗೆ ನಿರ್ಮಿಸಿರುವ ತೊಟ್ಟಿಗಳನ್ನು ಭದ್ರವಾದ ಮುಚ್ಚುಳದಿಂದ ಮುಚ್ಚುವ ವ್ಯವಸ್ಥೆ ಮಾಡಬೇಕೆಂದು ಜನರಿಗೆ ತಿಳಿಸಬೇಕು ಎಂದ ಅವರು ಸ್ವಚ್ಛತೆ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಮಲೇರಿಯಾ ನಿಯಂತ್ರಣಕ್ಕಾಗಿ ಆನಾಫೀಲಿಸ್ ಸೊಳ್ಳೆ ಉತ್ಪತಿಗೆ ಕಾರಣವಾಗುವ ನೀರಿನ ತಾಣಗಳಿಗೆ ಲಾರ್ವಾಹಾರಿ ಮೀನು ಬಿಡಲು ಎಲ್ಲಾ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ತಿಳಿಸಲಾಗಿದೆ.  ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿಯ ಸದಸ್ಯರು ಮತ್ತು ಸ್ವಸಹಾಯ ಸಂಘಗಳ ನೆರವು ಪಡೆದು ಲಾರ್ವಾ ಸಮೀಕ್ಷೆ ಮತ್ತು ನಿರ್ಮೂಲನಾ ಕಾರ್ಯ ಕೈಗೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಕಲ್ಲು ಗಣಿಗಳಲ್ಲಿ ಮಳೆಗಾಲದಲ್ಲಿ ನೀರು ಶೇಖರಣೆಯಾಗಿ ಸೊಳ್ಳೆಗಳ ಉತ್ಪತಿಗೆ ಕಾರಣವಾಗುವುದರಿಂದ ಕ್ವಾರಿಗಳಲ್ಲಿ ನೀರು ನಿಲ್ಲದಂತೆ ಕ್ರಮವಹಿಸಬೇಕು ಹೆಚ್ಚಿನ ಪ್ರಕರಣಗಳು ಪಟ್ಟಣ ಪ್ರದೇಶಗಳಲ್ಲಿ ಕಂಡುಬರುತ್ತಿದ್ದು ನಗರಸಭೆ, ಪುರಸಭೆಗಳ ಅಧಿಕಾರಿಗಳು ಪ್ರತಿ ವಾರ್ಡ್‍ಗಳಿಗೂ ಭೇಟಿ ನೀಡಿ ಕಸದ ರಾಶಿಯಿದ್ದರೆ ತೆಗೆಸಿ ಚರಂಡಿಗಳಲ್ಲಿ ನೀರು ನಿಲ್ಲದಂತೆ ಕ್ರಮವಹಿಸಬೇಕು ಎಂದ ಅವರು, ಪ್ರತಿ ಹಳ್ಳಿಗಳಲ್ಲಿ ಆಶಾ ಕಾರ್ಯಕರ್ತೆಯರ ಮೂಲಕ ಅರಿವು ಮೂಡಿಸಲು ಕ್ರಮವಹಿಸಬೇಕು ಎಂದು ಸೂಚಿಸಿದರು,

ಸಭೆಯಲ್ಲಿ ಜಿ.ಪಂ. ಉಪ ಕಾರ್ಯದರ್ಶಿ ರಾಜಗೋಪಾಲ್, ಡಿಎಚ್‍ಓ ಡಾ. ಹೆಚ್.ಮಲ್ಲಿಕಾರ್ಜುನಪ್ಪ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಸವರಾಜಯ್ಯ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದರು.

‘ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು ಸಭೆಗೆ ಮಾಹಿತಿ ನೀಡುತ್ತಾ ಇದುವರೆಗೂ ಜಿಲ್ಲೆಯಲ್ಲಿ 6,41,771 ಮನೆಗಳ 36,02251 ತಾಣಗಳಲ್ಲಿ ಲಾರ್ವಾ ಸಮೀಕ್ಷೆ ನಡೆಸಿ 6,41,771 ಮನೆಗಳಲ್ಲಿ 18,611 ತಾಣಗಳಲ್ಲಿ ಲಾರ್ವಾ ಕಂಡು ಬಂದಿದ್ದು ನಿರ್ಮೂಲನೆ ಮಾಡಲಾಗಿದೆ, ರಾಷ್ಟ್ರೀಯ ಮಲೇರಿಯಾ ನಿರ್ಮೂಲನಾ ಚೌಕಟ್ಟು ಕಾರ್ಯಕ್ರಮದಡಿ 48 ಗ್ರಾಪಂ ಮಟ್ಟದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ಕಾರ್ಯಕ್ರಮ ಏರ್ಪಡಿಸಿ ಮಕ್ಕಳಲ್ಲಿ ಅರಿವು ಮೂಡಿಸಲಾಗಿದೆ’

- ಸತ್ಯವತಿ, ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News