ಪರಿಸ್ಥಿತಿ ಅರಿತು ಸರಕಾರದೊಂದಿಗೆ ಸಹಕರಿಸಲು ರೈತರಿಗೆ ಸಚಿವ ಲಾಡ್ ಮನವಿ
ಬಳ್ಳಾರಿ, ಆ.19: ತುಂಗಭದ್ರಾ ಜಲಾಶಯದ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ 35,727 ಹೆಕ್ಟೇರ್, ರಾಯಚೂರು ಜಿಲ್ಲೆಯಲ್ಲಿ 1,19,171 ಹೆಕ್ಟೇರ್ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ 95,606 ಹೆಕ್ಟೇರ್ ಹೀಗೆ ಒಟ್ಟು 2,50,504 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವಿದೆ. ಮುಂಗಾರು ಹಂಗಾಮಿನಲ್ಲಿ ಸದರಿ ಪ್ರದೇಶದಲ್ಲಿ ಸಂಪೂರ್ಣವಾಗಿ ಬೆಳೆ ಬೆಳೆಯಬೇಕಾದರೆ ಕನಿಷ್ಠ 70 ಟಿಎಂಸಿ ನೀರು ಅವಶ್ಯಕತೆ ಇರುತ್ತದೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಜಲಾಶಯದ 60 ವರ್ಷಗಳ ಇತಿಹಾಸದಲ್ಲಿ 50 ವರ್ಷಗಳಲ್ಲಿ 230 ಟಿಎಂಸಿಗಳ ಹೆಚ್ಚಿನ ಪ್ರಮಾಣದ ನೀರು ಬಂದಿದ್ದು, 10 ವರ್ಷಗಳಲ್ಲಿ ಕಡಿಮೆ ಪ್ರಮಾಣದ ನೀರು ಬಂದಿರುತ್ತದೆ. ವಿಶೇಷವಾಗಿ 2016-17ನೆ ಸಾಲಿನಲ್ಲಿ ಜಲಾಶಯಕ್ಕೆ ಕೇವಲ 85.719 ಟಿಎಂಸಿಯಷ್ಟು ಒಳಹರಿವು ಬಂದು ಅದರಲ್ಲಿ ಕರ್ನಾಟಕದ ಪಾಲು 56,062 ಟಿಎಂಸಿ ಬಳಕೆಯಾದರೂ ಪೂರ್ಣಪ್ರಮಾಣದ ಬೆಳೆಗಳನ್ನು ಬೆಳೆಯಲು ಆಗಿಲ್ಲ.
ಪ್ರಸಕ್ತ ಸಾಲಿನಲ್ಲಿ ಜಲಾಶಯಕ್ಕೆ ಒಳಹರಿವು ಪ್ರಮಾಣವು ಕಳೆದ ವರ್ಷಕ್ಕಿಂತ ಶೇ.25 ರಷ್ಟು ಕಡಿಮೆ ಇದ್ದು, ಇನ್ನು 60 ಟಿಎಂಸಿಯಷ್ಟು ನೀರು ಬರಬಹುದಾಗಿರುತ್ತದೆ. ಇದರಲ್ಲಿ ಕರ್ನಾಟಕದ ಪಾಲು 39.00 ಟಿಎಂಸಿಗಳಷ್ಟು ಆಗಿರುತ್ತದೆ. ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ ನಗರ, ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಅವಶ್ಯಕತೆಗಾಗಿ ಕನಿಷ್ಠ 15 ಟಿಎಂಸಿಯಷ್ಟು ನೀರಿನ ಅವಶ್ಯಕತೆ ಇರುತ್ತದೆ. ಹೀಗಾಗಿ, ನೀರಾವರಿಗಾಗಿ ಕೇವಲ 24 ಟಿಎಂಸಿ ಮಾತ್ರ ಲಭ್ಯವಾಗಿದ್ದು, ಕಾಲುವೆಗಳಲ್ಲಿ 30 ದಿವಸ ಮಾತ್ರ ನೀರು ಹರಿಸಬಹುದಾಗಿರುತ್ತದೆ ಎಂದಿದ್ದಾರೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆ.13 ರಂದು ಮೂರು ಜಿಲ್ಲೆಗಳ ರೈತರು ಪ್ರತಿನಿಧಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿ ಅವರಿಂದ ಸಲಹೆ ಸೂಚನೆಗಳನ್ನು ಪಡೆದಿದ್ದಾರೆ. ಅಲ್ಲದೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಸುದೀರ್ಘ ಚರ್ಚೆಯ ನಂತರ ಕುಡಿಯುವ ನೀರಿನ ಉದ್ದೇಶಕ್ಕಾಗಿ ನೀರನ್ನು ಕಾಯ್ದಿರಿಸುವುದು ಮತ್ತು 2017 ಆಗಸ್ಟ್ ಅಂತ್ಯದವರೆಗೆ ಒಳಹರಿವನ್ನು ಪರಿಗಣಿಸಿ, ಪರಿಸ್ಥಿತಿ ಸುಧಾರಿಸಿದಲ್ಲಿ ತುರ್ತು ನೀರಾವರಿ ಸಲಹಾ ಸಮಿತಿ ಸಭೆ ಕರೆದು ರೈತರಿಗೆ ಅನುಕೂಲವಾಗುವಂತಹ ಬೆಳೆಗಾದರು ನೀರು ಹರಿಸುವ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು. ರೈತಬಾಂಧವರು ಇಂದಿನ ಪರಿಸ್ಥಿತಿಯನ್ನು ಅರಿತು ಸರಕಾರದೊಂದಿಗೆ ಸಹಕರಿಸಬೇಕೆಂದು ಸಚಿವ ಸಂತೊಷಷ್ ಎಸ್..ಲಾಡ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.