ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದಿಂದ ಪ್ರತಿಭಾ ಪುರಸ್ಕಾರ
ತುಮಕೂರು,ಆ.20:ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶೈಕ್ಷಿಕ ಸಂಘ ವತಿಯಿಂದ 2016-17ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ., ಪಿಯುಸಿ ಮತ್ತು ಪದವಿಯಲ್ಲಿ ಅತ್ಯುತ್ತಮ ಅಂಕ ಪಡೆದ ಮಕ್ಕಳಿಗೆಪ್ರತಿಭಾ ಪುರಸ್ಕಾರ ಮತ್ತು ಶೇ100 ಫಲಿತಾಂಶ ಪಡೆದ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ಶ್ರೀಸಿದ್ದಗಂಗಾ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪೂರ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪಾಲಕರನ್ನು ಸಮನ್ವಯದ ಮೂಲಕ ಶೈಕ್ಷಣಿಕ ಪ್ರಗತಿ ಸಾಧಿಸಬೇಕೆಂಬುದು ಮಾಧ್ಯಮಿ ಶಿಕ್ಷಕ ಸಂಘದ ಉದ್ದೇಶವಾಗಿದೆ. ಆಗ ಮಾತ್ರ ಬದಲಾವಣೆ ತರಲು ಸಾಧ್ಯ ಎಂದರು.
ಭಾರತದಲ್ಲಿ ಒಂದೇ ದೇಶ, ಒಂದೇ ತೆರಿಗೆ ಎಂಬಂತೆ ಶಿಕ್ಷಕರಿಗೆ ಒಂದೇ ಸಂಬಳ ಎಂಬುದು ಇಲ್ಲ. ಹಲವಾರು ರಾಜ್ಯಗಳು ಕೇಂದ್ರದ ವೇತನಕ್ಕೆ ಸರಿಸಮನಾಗಿ ವೇತನ ನೀಡುತ್ತಿದ್ದರೂ ಕರ್ನಾಟಕದಲ್ಲಿ ಇದು ಸಾಧ್ಯವಾಗಿಲ್ಲ.ಶೈಕ್ಷಣಿಕವಾಗಿ ಇತರೆ ರಾಜ್ಯಗಳಿಗಿಂತ ಮುಂದಿದ್ದರೂ ವೇತನ ತಾರತಮ್ಯದಲ್ಲಿ ಬಹಳ ಹಿಂದೆ ಉಳಿದಿದೆ.ಅಲ್ಲದೆ ಈ ಸಾಲಿನ ಪಠ್ಯ ಪುಸ್ತಕ ಪರಿಷ್ಕರಣೆ ವೇಳೆಯಲ್ಲಿಯೂ ಸಾಕಷ್ಟು ತಪ್ಪುಗಳಿದ್ದು,182 ಪುಟಗಳ ತದ್ದಿಪಡಿ ಸುತ್ತೋಲೆ ನೀಡಲಾಗಿದೆ.ಅಲ್ಲದೆ ಕೆಳ ಹಂತದಿಂದ ಎನ್.ಸಿ.ಆರ್.ಟಿ. ಪಠ್ಯ ಅಳವಡಿಸುವ ಬದಲು ಮೊದಲು ಪಿಯುಸಿ, ನಂತರ 9ನೇ ತರಗತಿ, ಮುಂದಿನ ವರ್ಷದಿಂದ ಆರನೇ ತರಗತಿ ಹೀಗೆ ಹಿಮ್ಮುಖವಾಗಿ ಶಿಕ್ಷಣ ವ್ಯವಸ್ಥೆ ಚಲಿಸುತ್ತಿದೆ.ಇದನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಮಾಧ್ಯಮಿಕ ಶಿಕ್ಷಕ ಸಂಘ ಹೋರಾಟ ನಡೆಸುತ್ತಿದೆ ಎಂದು ಅರುಣ್ ಶಹಾಪೂರ ತಿಳಿಸಿದರು.
ಪ್ರತಿಭಾಪುರಸ್ಕಾರವೆಂಬುದು ಕೇವಲ ಹೆಚ್ಚು ಅಂಕ ತೆಗೆದುಕೊಂಡವರನ್ನು ಅಭಿನಂದಿಸುವುದಲ್ಲ.ಇನ್ನೊಬ್ಬರಿಗೆ ಸ್ಪೂರ್ತಿ ನೀಡುವುದರ ಜೊತೆಗೆ, ಅವರಲ್ಲಿರುವ ಒಳ್ಳೆಯತನವನ್ನು ಇತರರಿಗೆ ಪರಿಚಯಿಸುವುದೇ ಆಗಿದೆ.ಆ ಮೂಲಕ ಮಕ್ಕಳಲ್ಲಿ ಮೌಲ್ಯಗಳನ್ನು ಬಿತ್ತುವ ಕೆಲಸವನ್ನು ಸಂಸ್ಥೆ ನಡೆಸುತ್ತಿದೆ.ಮಕ್ಕಳು ಕೇವಲ ಅಂಕಗಳ ಹಿಂದೆ ಹೋಗದೆ ಶೈಕ್ಷಣಿಕ ಉನ್ನತಿಯ ಕಡೆಗೂ ಗಮನಹರಿಸಬೇಕೆಂದರು.
ಮತ್ತೋರ್ವ ವಿಧಾನ ಪರಿಷತ್ ಸದಸ್ಯ ಹಣುಮಂತ ನಿರಾಣಿ ಮಾತನಾಡಿ,ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಾಕಷ್ಟು ತಪ್ಪುಗಳಿದ್ದು,ಅವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಈ ಕ್ಷೇತ್ರದಿಂದ ಆಯ್ಕೆಯಾಗಿರುವ ಎಲ್ಲಾ ಸದಸ್ಯರು ಶ್ರಮಿಸುತ್ತಿದ್ದು, ನಮ್ಮ ಮುಂದಿರುವ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ನಿರಂತರ ಪ್ರಯತ್ನ ನಡೆಸುತ್ತಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾವಾಹಿನಿ ಸಂಸ್ಥೆಯ ಕೆ.ಬಿ.ಜಯಣ್ಣ,ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಕಾರ್ಯದರ್ಶಿ ವೃಷಬೇಂದ್ರಸ್ವಾಮಿ,ವಿಭಾಗೀಯ ಪ್ರಮುಖ್ ಪಿ.ಆರ್.ಬಸವರಾಜು,ಜಿಲ್ಲಾಧ್ಯಕ್ಷ ಕೆ.ಎಸ್.ಉಮಾಮಹೇಶ್, ಪ್ರೊ.ಎಸ್.ಬಿ.ಶಶಿಧರಯ್ಯ,ರೇಣುಕಾನಂದ,ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಉಮೇಶ್, ನಿಕಟಪೂರ್ವ ಜಿಲ್ಲಾಧ್ಯಕ್ಷ ಬಿ.ಯು.ಮಹೇಶ್,ಹಾಲೇನೂರು ಲೇಪಾಕ್ಷ ಮತ್ತಿತರರು ವೇದಿಕೆಯಲ್ಲಿದ್ದರು.
ಇದೇ ವೇಳೆ 2016-17ನೇ ಸಾಲಿನ ಎಸ್.ಎಸ್.ಎಲ್.ಸಿ.,ಪಿಯುಸಿ ಮತ್ತು ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ಹಾಗೂ ಶೇ 100ರಷ್ಟು ಫಲಿತಾಂಶ ಪಡೆದ ಶಾಲಾ, ಕಾಲೇಜುಗಳ ಮುಖ್ಯ ಶಿಕ್ಷಕರು, ಪ್ರಾಂಶುಪಾಲರನ್ನು ಗಳನ್ನು ಅಭಿನಂದಿಸಲಾಯಿತು.