ರಾಜಕಾರಣಿಗಳಂತೆ ಪತ್ರಕರ್ತರು ತಿರುಚುವ ಕೆಲಸ ಮಾಡಬಾರದು: ಶಾಸಕ ಎಚ್.ಕೆ.ಕುಮಾರಸ್ವಾಮಿ
ಸಕಲೇಶಪುರ, ಆ. 23: ಆರೋಪ ಪ್ರತ್ಯಾರೋಪಗಳಲ್ಲಿಯೇ ತೊಡಗಿರುವ ರಾಜಕಾರಣಿಗಳು ತಮ್ಮ ತಪ್ಪು ಮುಚ್ಚಿಕೊಳ್ಳಲು ತಾವಾಡಿದ ಮಾತನ್ನೇ ತಿರುಚಿ ಹೇಳಬಹುದು. ಆದರೆ ಜವಬ್ದಾರಿಯುತ ಪತ್ರಕರ್ತರು ಇದನ್ನೇ ಅನುಸರಿಸಬಾರದು ಎಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ಲಯನ್ಸ್ ಹಾಲ್ನಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಮಾಧ್ಯಮ ದಿನಾಚರಣೆಯಲ್ಲಿ ಪಾಲ್ಗೊಂಡು ಸಾಧಕರಿಗೆ ಸನ್ಮಾನಿಸಿ ಮಾತನಾಡಿದ ಅವರು, ಸಮಸ್ಯೆಗಳ ವೈಭವೀಕರಣ ಮಾಡದೆ ನೈಜತೆಯ ಸತ್ಯ ದರ್ಶನ ಮಾಡಿಸಬೇಕು. ಇದ್ದುದನ್ನು ಇದ್ದಹಾಗೆಯೇ ಹೇಳುವ ಮೂಲಕ ವರ್ತಮಾನದ ಸನ್ನಿವೇಶಕ್ಕೆ ಕನ್ನಡಿ ಹಿಡಿಯಬೇಕು ಎಂದರು.
ಶಿಫಾರಸು:
ಸರ್ಕಾರ ಎಲ್ಲಾ ಮಹನಿಯರ ಜಯಂತಿ, ರಾಷ್ಟ್ರೀಯ, ನಾಡ ಹಬ್ಬಗಳು, ಇನ್ನಿತರೆ ಕಾರ್ಯಕ್ರಮಗಳಿಗೆ ಅನುದಾನ ಬಿಡುಗಡೆ ಮಾಡುತ್ತಿರುವಂತೆ ಮಾಧ್ಯಮ ದಿನಾಚರಣೆಗೆ ತಾಲುಕು ಮಟ್ಟದಲ್ಲಿ ಕನಿಷ್ಟ 25 ಸಾವಿರ ರೂ.ಅನುದಾನ ಬಿಡುಗಡೆ ಮಾಡಬೇಕು. ಜಿಲ್ಲೆ ಹಾಗೂ ರಜ್ಯ ಮಟ್ಟಕ್ಕೆ ಅಗತ್ಯಕ್ಕೆ ಅನುಗುಣವಾಗಿ ಸಪಂದಿಸಬೇಕು ಎಂದು ಶಾಸಕರು ಈ ಸಂದರ್ಭ ಸರ್ಕಾರವನ್ನು ಒತ್ತಾಯಿಸಿದರು.
ಜಿಲ್ಲಾ ಪತ್ರಕತ್ರ ಸಂಘದ ಅಧ್ಯಕ್ಷ ರವಿ ನಾಕಲಗೂಡು ಅವರು ಗಿಡಕ್ಕೆ ನೀರೆರೆಯುವ ಮೂಲಕ ಸಮಾರಂಭ ಉದ್ಘಾಟಿಸಿ ಮಾತನಾಡಿ, ರಾಜಕಾರಣಿಗಳ ಭಾಷಣಗಳಿಗಷ್ಟೇ ಸೀಮಿತವಾಗಿರುವ ಪತ್ರಿಕಾ ದಿನಾಚರಣೆಗಳು ಅರ್ಥ ಕಳೆದುಕೊಳ್ಳುತ್ತಿವೆ. ರಾಜಕಾರಣಿಗಳ ಸಹಭಾಗಿತ್ವ ಪತ್ರಿಕೋಧ್ಯಮ ಕ್ಷೇತ್ರಕ್ಕೆ ಅಗತ್ಯವಿದ್ದರೂ ಪತ್ರಿಕಾ ದಿನಾಚರಣೆಯಲ್ಲಿ ಕೇವಲ ಭಾಷಣ ಕೇಳಿ ಎದ್ದು ಹೋಗುವ ಬದಲು ಸಮಾಜ ಪರಿವರ್ತನೆ ಹಾಗೂ ಪತ್ರಕರ್ತರ ಹಕ್ಕು, ಕರ್ತವ್ಯಗಳ ಬಗ್ಗೆ ಸಂವಾದಗಳು ಏರ್ಪಡಬೇಕು. ಹಿರಿಯ ಚಿಂತಕರು, ವಿದ್ವಾಂಸರು, ಅನುಭವಿ ಪತ್ರಕರ್ತರೊಂದಿಗೆ ಸಂವಾದ ಏರ್ಪಟ್ಟು ಹೊಸ ಚಿಂತನೆಗಳೆಡೆ ಪತ್ರಕರ್ತರು ಮುಖ ಮಾಡುವಂತಾಗಬೇಕು. ಆಗ ಮಾತ್ರವೇ ಪತ್ರಿಕಾ ದಿನಾಚರಣೆ ಮೂಲ ಉದ್ದೇಶ ಫ;ಇಸುತ್ತದೆ ಎಂದರು.
ಬಹುಮಾನ ವಿತರಣೆ ಮಾಡಿದ ಅಪರ ಜಿಲ್ಲಾಧಿಕರಿ ಪಿ.ಶಿವರಾಜ್ ಮಾತನಾಡಿ, ಗಂಭೀರ ಹಾಗೂ ಸೂಕ್ಷ್ಮ ವಿಚಾರಗಳ ಬಗ್ಗೆ ಸುದ್ದಿ ಮಾಡುವಾಗ ಪತ್ರಕರ್ತರು ವಾಸ್ತವ ಅಂಶಗಳನ್ನು ಮಾತ್ರ ಬಿತ್ತರಿಸಬೇಕು. ಇಲ್ಲವಾದರೆ ಎಷ್ಟೋ ಅನಾಹುಗಳು ನಡೆಯುತ್ತವೆ. ಗುಂಪು ಗಲಭೆಗಳು, ಹತ್ಯೆಗಳಾಗುವ ಸಾಧ್ಯತೆಗಲೂ ಇರುತ್ತವೆ. ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪನವರ ಆತ್ಮಹತ್ಯೆಯೂ ಇದೇ ಅಚಾತುರ್ಯಗಳಿಂದ ಉಂಟಾಯಿತು. ಪತ್ರಿಕೆಯಲ್ಲಿ ಏನೇ ಬಂದರೂ ಅದನ್ನು ಜನ ಸತ್ಯವೆಂದು ನಂಬುತ್ತಾರೆ. ಈ ಕಾರಣದಿಂದ ವರದಿಗಳು ಸತ್ಯಕ್ಕೆ ಹತ್ತಿರವಾಗಿರಬೇಕು.
ರಾಷ್ಟ್ರಮಟ್ಟದ ಸಾಧಕ ಮಹಿಳೆ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತೆ ಹಾಗೂ ಹಾಸನವಾಣಿ ಪತ್ರಿಕೆ ಸಂಪಾದಕಿ ಲೀಲಾವತಿ, ಜನತಾ ಮಾಧ್ಯಮ ಪತ್ರಿಕೆ ತಾಲೂಕು ವರದಿಗಾರ ಸಿ.ಪಿ.ಪ್ರಸನ್ನ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಪ್ರೌಢಶಾಲೆ ಮಕ್ಕಳಿಗಾಗಿ ಗೀತ ಗಾಯನ ಸ್ಪರ್ಧೆ ಏರ್ಪಟಿಸಲಾಗಿತ್ತು. ಮಾಧ್ಯಮ ದಿನಾಚರಣೆ ಅಂಗವಾಗಿ ನಡೆಸಲದ ಸೌಹಾರ್ದ ಕ್ರಿಕೆಟ್ ಪಮದ್ಯಾವಳಿಯಲ್ಲಿ ಬಹುಮಾನ ಪಡೆದ ಪೊಲೀಸ್, ಕಮದಾಯ ಹಾಗೂ ಪುರಸಭೆ ತಂಡಗಳಿಗೆ ಈ ಸಂದರ್ಭ ಬಹುಮಾನ ವಿತರಿಸಲಾಯಿತು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಂಘದ ಉಪಾಧ್ಯಕ್ಷ ಶಿವಾನಂದ ತಗಡೂರು ಮುಖ್ಯ ಭಾಷಣ ಮಾಡಿದರು. ಆರಕ್ಷಕ ಉಪ ಅಧೀಕ್ಷಕ ಎಚ್.ಸಿ.ಜಗದೀಶ್, ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ.ನವೀನ್ ಚಂದ್ರಶೆಟ್ಟಿ, ಜಿಪಂ ಸದಸ್ಯ ಸುಪ್ರದೀಪ್ ಯಜಮಾನ್, ತಾಲೂಕು ಕಸಾಪ ಗೌರವಾಧ್ಯಕ್ಷೆ ಚನ್ನವೇಣಿ ಎಂ.ಶೆಟ್ಟಿ ಇದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಜೈಕುಮಾರ್ ಮಲ್ನಾಡ್ ಕಾರ್ಯಕ್ರಮ ನಿರೂಪಿಸಿದರು. ಕಿರಣ್ ಕುಮಾರ್ ಪ್ರಾರ್ಥಿಸಿದರು. ಎಸ್.ಎಂ.ಮಂಜುನಾಥ್ ಸ್ವಾಗತಿಸಿದರು, ಎನ್.ಎಸ್.ವಿಠಲ್ ವಂದಿಸಿದರು.