×
Ad

ಜಿಲ್ಲೆಯ ಗಡಿ ಭಾಗದ ಜನರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಜಿ.ಸತ್ಯವತಿ

Update: 2017-08-23 21:44 IST

ಚಿಕ್ಕಮಗಳೂರು, ಆ.23: ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ವಿಮೆ ಹಣವನ್ನು ಸಮರ್ಪಕವಾಗಿ ವಿತರಿಸದ ವಿಮಾ ಕಂಪನಿಗಳ ಕಾರ್ಯದ ಬಗ್ಗೆ ಸರ್ಕಾರದ ಮಟ್ಟದಲ್ಲೂ ಚರ್ಚೆ ನಡೆದಿದೆ ಎಂದು ಜಿಲ್ಲಾಧಿಕಾರಿ ಜಿ. ಸತ್ಯವತಿ ತಿಳಿಸಿದರು.

  ಅವರು ತಾಲ್ಲೂಕಿನ ಕುಂಕನಾಡು ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳು ಮತ್ತು ಕುಂದುಕೊರತೆಗಳ ಪರಿಶೀಲನೆ ನಡೆಸಿ ನಂತರ ಸಭೆಯಲ್ಲಿ ಮಾತನಾಡಿದರು. ಭೇಟಿಯ ಸಮಯದಲ್ಲಿ ಜಿಲ್ಲಾಧಿಕಾರಿಗಳಿಗೆ ಸ್ಥಳೀಯ ಗ್ರಾಮಸ್ಥರು ಕಳೆದ 3 ವರ್ಷಗಳಿಂದ ಮಳೆಯ ಕೊರತೆ ಹಿನ್ನಲೆಯಲ್ಲಿ ಕುಡಿಯುವ ನೀರಿಗೂ ಹಾಹಾಕಾರವಿದೆ. ಗಾಯದ ಮೇಲೆ ಬರೆ ಎಳೆದಂತೆ ಈ ಬಾರಿ ಮುಂಗಾರು ಕೈಕೊಟ್ಟಿದ್ದು ಬೆಳೆಗಳು ನಾಶವಾಗಿದೆ ಎಂದು ತಿಳಿಸಿದರು.

  ಕಳೆದ 2 ವರ್ಷಗಳಲ್ಲಿ ಬೆಳೆ ಸಂಪೂರ್ಣ ಹಾಳಾಗಿದ್ದು ಇದಕ್ಕೆ ಹವಮಾನ ಆಧಾರಿತ ಹಾಗೂ ಪ್ರಧಾನಮಂತ್ರಿ ಫಸಲ್‍ಭೀಮಾ ಯೋಜನೆಯಡಿ ವಿಮೆ ಮಾಡಿಸಿದ್ದು ಆದರೆ ಈವರೆಗೂ ಯಾವುದೇ ಪರಿಹಾರ ಬಂದಿಲ್ಲ ಇದರಿಂದ ರೈತರು ಸಂಕಷ್ಟಕ್ಕೆ ಈಡಾಗಿದ್ದು ಪರಿಹಾರ ಸಿಗದೇ ಹೋದರೂ ವಿಮಾ ಕಂತಿನ ಹಣವನ್ನಾದರೂ ವಾಪಾಸ್ಸು ಕೊಡಿಸುವಂತೆ ಮನವಿ ಮಾಡಿಕೊಂಡರು.

 ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ 10 ಸಾವಿರ ರೈತರು ಬೆಳೆವಿಮೆ ಮಾಡಿಸಿದ್ದರು ಅದರಲ್ಲಿ ಕೇವಲ 2 ಸಾವಿರ ರೈತರಿಗೆ ಮಾತ್ರ ಪರಿಹಾರ ದೊರಕಿದೆ. ಉಳಿದ 8 ಸಾವಿರ ರೈತರಿಗೆ ಇನ್ನೂ ಪರಿಹಾರ ಬಂದಿಲ್ಲ ಎಂದು ತಿಳಿಸಿದರು.

   ಈ ಭಾಗದಲ್ಲಿ ಅವಶ್ಯಕತೆ ಇರುವಲ್ಲಿ ಕೊಳವೆ ಬಾವಿ ಕೊರೆಸುವಂತೆ ಹಾಗೂ ಅಗತ್ಯ ದುರಸ್ಥಿ ಕಾರ್ಯಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಗ್ರಾಮೀಣ ಕುಡಿಯುವ ನೀರು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚಿಸಿದರು.

  ತಾಲ್ಲೂಕಿನಲ್ಲಿ ಮಳೆಯ ಕೊರತೆಯ ಹಿನ್ನಲೆಯಲ್ಲಿ ತೆಂಗು ಮತ್ತು ಅಡಿಕೆ ಮರಗಳು ನಾಶವಾಗಿದ್ದು ಈ ಬಗ್ಗೆ ಮಾಹಿತಿಯನ್ನು ಕ್ರೋಡೀಕರಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಲ್ಲದೇ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕುಂಕನಾಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನೇಮಿಸುವಂತೆ ಸ್ಥಳದಲ್ಲಿ ಹಾಜರಿದ್ದ ತಾಲ್ಲೂಕು ವೈದ್ಯಾಧಿಕಾರಿಗೆ ತಾಕೀತು ಮಾಡಿದರು.

  ಮೇವಿನ ಕೊರತೆ ಉಂಟಾದಲ್ಲಿ ಮತ್ತೆ ಈ ಗೋಶಾಲೆಯನ್ನು ಈ ಭಾಗದಲ್ಲಿ ಪುನರ್ ಪ್ರಾರಂಭಿಸುವುದಾಗಿ ನುಡಿದರು. ಕಂದಾಯ ಇಲಾಖೆಯಲ್ಲಿ ಖಾತೆ ಬದಾಲಾವಣೆ ಹಾಗೂ ಸರ್ವೇ ನಕ್ಷೆ ಮತ್ತಿತರ ಕಾರ್ಯಗಳು ಸಮರ್ಪಕವಾಗಿ ಅಧಿಕಾರಿಗಳು ನಿರ್ವಹಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದಾಗ ಈ ಕೂಡಲೇ ಈ ಬಗ್ಗೆ ಕ್ರಮ ವಹಿಸಿ ನಿಗಧಿತ ಸಮಯದಲ್ಲಿ ನಾಗರೀಕರ ಕಾರ್ಯಗಳನ್ನು ಪೂರ್ಣಗೊಳಿಸುವಂತೆ ತಹಶೀಲ್ದಾರ್‍ರವರಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.

  ಕುಂಕನಾಡು ಗ್ರಾಪಂ ಪಿಡಿಓ ಕಛೇರಿಗೆ ಬರದೇ ಕಡೂರಿನಲ್ಲಿಯೇ ಇರುತ್ತಾರೆ. ಇದರಿಂದ ಈ ಭಾಗದ ನಾಗರೀಕರು ಅನೇಕ ಕಷ್ಟಗಳನ್ನು ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ದೂರಿದಾಗ ಇನ್ನು 15 ದಿನಗಳಲ್ಲಿ ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದರೆ ಅವರನ್ನು ಅಮಾನತ್ತು ಮಾಡುವುದಾಗಿ ತಿಳಿಸಿದರು.

  ಈ ಸಂದರ್ಭ ಜಿಪಂ ಸದಸ್ಯ ಮಹೇಶ್‍ಒಡೆಯರ್, ತಹಶೀಲ್ದಾರ್ ಎಂ.ಭಾಗ್ಯ, ಜಿಪಂ ಸದಸ್ಯರಾದ ಶರತ್‍ಕೃಷ್ಣಮೂರ್ತಿ, ಗ್ರಾಪಂ ಅಧ್ಯಕ್ಷೆ ಶೋಭಾ ಗಂಗಾಧರಶೆಟ್ಟಿ.ಕೃಷಿ ಸಹಾಯಕ ನಿರ್ದೇಶಕ ಶಿವಕುಮಾರ್, ಆಹಾರ ಇಲಾಖೆಯ ಉಪನಿರ್ದೇಶಕರು, ತಾಲ್ಲೂಕಿನ ವಿವಿಧ ಇಲಾಖಾ ಅಧಿಕಾರಿಗಳು ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.

‘ವಿಮೆ ಕಂಪನಿಗಳಿಂದ ರೂ 35 ಸಾವಿರ ಕೋಟಿ ಪರಿಹಾರ ಮೊತ್ತ ಬರಬೇಕಾಗಿತ್ತು ಅದರಲ್ಲಿ ಕೇವಲ ರೂ 10 ಸಾವಿರ ಕೋಟಿ ಪರಿಹಾರ ಹಣ ಬಂದಿದೆ. ಇದು ರಾಜ್ಯದ ಎಲ್ಲಾ 30 ಜಿಲ್ಲೆಗಳ ಸಮಸ್ಯೆಯಾಗಿದೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಂಡಿದೆ. ಕುಂಕನಾಡು ಗ್ರಾಪಂ ವ್ಯಾಪ್ತಿಯ 11 ಹಳ್ಳಿಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆಯಿದ್ದು ಇದರಲ್ಲಿ ಎರಡು ಹಳ್ಳಿಗಳಾದ ಸೋಮನಾಥಪುರ ಮತ್ತು ಆಲದಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವುದು ಗಮನಕ್ಕೆ ಬಂದಿದೆ. ತೀವ್ರ ಸಮಸ್ಯೆ ಇರುವ ಗ್ರಾಮಗಳಲ್ಲಿ ಖಾಸಗಿಯವರಿಂದ ನೀರು ಪಡೆದು ವಿತರಿಸಬೇಕು ಅವರಿಗೆ ಅದರ ಶುಲ್ಕವನ್ನು ಪಾವತಿಸಬೇಕು’

- ಜಿ.ಸತ್ಯವತಿ, ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News