×
Ad

ಜಿಲ್ಲಾಧಿಕಾರಿಗಳಿಂದ ಹೇಮಾವತಿ ನಾಲೆ ಪರಿಶೀಲನೆ

Update: 2017-08-23 23:10 IST

ತುಮಕೂರು,ಆ.23: ಜಿಲ್ಲೆಯ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಲು ಹೇಮಾವತಿಯಿಂದ ನೀರು ಹರಿಯುತ್ತಿರುವ ತುಮಕೂರು ನಾಲೆಯನ್ನು ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಹೇಮಾವತಿ ನಾಲೆಯ ಇಂಜಿನಿಯರ್‍ಗಳು ಹಾಗೂ ಇತರೆ ಇಲಾಖೆಯ ಅಧಿಕಾರಿಗಳೊಂದಿಗೆ “ವೈ” ಅಲೈನ್‍ಮೆಂಟ್ ಹಾಗೂ ತಿಪಟೂರು ತಾಲ್ಲೂಕಿನ ಗಂಗನ ಘಟ್ಟದಲ್ಲಿರುವ ನಾಲೆಯ “ಔ” ಚೈನೇಜ್ ಸ್ಥಳಕ್ಕೆ ಮೊದಲು ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. 

ಜಿಲ್ಲೆಯಲ್ಲಿ ಮಳೆ ಕಡಿಮೆ ಪ್ರಮಾಣದಲ್ಲಿ ಆಗುತ್ತಿದ್ದು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಆದುದರಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರನ್ನು ಒದಗಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ.ಹೇಮಾವತಿ ನಾಲೆಯಿಂದ ತುಮಕೂರು ನಾಲೆಗೆ ಹರಿಸುತ್ತಿರುವ ನೀರನ್ನು ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಉದ್ದೇಶಕ್ಕಲ್ಲದೆ ಬೇರೆ ಉದ್ದೇಶಕ್ಕೆ ನೀರನ್ನು ಬಳಸಲು ಅವಕಾಶವಿರುವುದಿಲ್ಲ.ನಾಲೆಯ ನೀರನ್ನು ಅಕ್ರಮವಾಗಿ ಪಡೆದುಕೊಳ್ಳದಂತೆ ಎಚ್ಚರವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. 

ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೆರೆಗಳಿಗೆ ನೀರನ್ನು ಹರಿಸಲಾಗುತ್ತಿದೆ.ಯಾವುದೇ ಕಾರಣಕ್ಕೂ ನೀರನ್ನು ಸೋರಿಕೆಯಾಗದಂತೆ ನೋಡಿಕೊಳ್ಳಿ, ನೀರನ್ನು ಅಕ್ರಮವಾಗಿ ಬಳಸಿಕೊಳ್ಳುವ ಕಡೆ ನಾಲೆಗೆ ಸೂಕ್ತ ಭದ್ರತೆ ಒದಗಿಸುವಂತೆ ಸಂಬಂಧಿಸಿದವರಿಗೆ ನಿರ್ದೇಶನ ನೀಡಿದರು. 

ಕುಡಿಯುವ ನೀರಿಗಾಗಿ ನಾಲೆಯಿಂದ ಕೆರೆಗಳಿಗೆ ನೀರನ್ನು ಹರಿಸಲಾಗುತ್ತಿದೆ. ಹಾಸನದ ಗೊರೂರು ಅಣೆಕಟ್ಟೆಗೆ 2-3 ದಿನದಿಂದ ಹೆಚ್ಚಿನ ನೀರು ಹರಿದು ಬರುತ್ತಿದ್ದು,ಮುಂದಿನ ದಿನಗಳಲ್ಲಿ ರೈತರ ಸಮಸ್ಯೆಯ ಕಡೆಗೂ ಗಮನಹರಿಸಲಾಗುವುದು.  ಇದಕ್ಕೆ ಯಾವುದೇ ಅನುಮಾನಬೇಡ ಎಂದು ರೈತರಿಗೆ ಭರವಸೆ ನೀಡಿದರು. 

ತುಮಕೂರು ನಾಲೆಯ “ಔ” ಸರಪಳಿಯಿಂದ 30 ಕಿ.ಮೀ. ಶಿವಪುರ ಎಸ್ಟೇಟ್‍ವರೆಗೆ ತುಮಕೂರು ಮುಖ್ಯ ನಾಲೆಯ ಮೇಲೆ ತೆರಳಿದ ಜಿಲ್ಲಾಧಿಕಾರಿಗಳು ನಾಲೆ ಪರಿಶೀಲನೆ ನಡೆಸಿದರು. 

ಈ ಸಂದರ್ಭದಲ್ಲಿ ತಿಪಟೂರು ಉಪವಿಭಾಗಾಧಿಕಾರಿ ಶಿಲ್ಪ, ಹೇಮಾವತಿ ನಾಲೆಯ ಮುಖ್ಯ ಇಂಜಿನಿಯರ್ (ಪ್ರಭಾರ) ಶಿವಕುಮಾರ್, ತಿಪಟೂರು ಡಿವೈಎಸ್‍ಪಿ, ತಹಶೀಲ್ದಾರ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News