ಶಾಲೆಗಳಿಗೆ ಅನುದಾನ ನೀಡಲು ಒತ್ತಾಯಿಸಿ ಸೆ.6ರಿಂದ ಧರಣಿ: ಕೆ.ಟಿ.ಶ್ರೀಕಂಠೇಗೌಡ
ಮದ್ದೂರು, ಆ.26: ರಾಜ್ಯದಲ್ಲಿ 1995ರ ಬಳಿಕ ಆರಂಭಗೊಂಡ ಎಲ್ಲ ಶಾಲೆಗಳಿಗೆ ಅನುದಾನ ನೀಡುವುದು ಸೇರಿದಂತೆ, ಇತರ ಸಮಸ್ಯೆಗಳ ಈಡೇರಿಕೆಗೆ ಒತ್ತಾಯಿಸಿ ಸೆ.6ರಿಂದ 14 ಮಂದಿ ಶಿಕ್ಷಕ ಹಾಗೂ ಪದವಿಧರ ಕ್ಷೇತ್ರದ ಪ್ರತಿನಿಧಿಗಳು ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ತಿಳಿಸಿದ್ದಾರೆ.
ಶನಿವಾರ ಪ್ರವಾಸಿಮಂದಿರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಶಿಕ್ಷಕರ ವೇತನ ನಿಗದಿಯಲ್ಲಿ ತಾರತಮ್ಯವಿದ್ದು, 6ನೆ ವೇತನ ಆಯೋಗದಲ್ಲಿ ಶಿಕ್ಷಕರಿಗೆ ಪ್ರತ್ಯೇಕ ವೇತನ ಶ್ರೇಣಿ ನಿಗದಿಪಡಿಸುವಂತೆ ಮುಖ್ಯಮಂತ್ರಿಯನ್ನು ಒತ್ತಾಯಿಸಲಾಗಿದೆ ಎಂದರು.
ವೇತನ ತಾರತಮ್ಯ ನಿವಾರಣೆಗಾಗಿ ಶಿಕ್ಷಕರಿಗೆ ಪ್ರತ್ಯೇಕವಾಗಿ ವಿಶೇಷ ವೇತನ ನಿಗದಿಗೊಳಿಸುವಂತೆ ಕೋರಲಾಗಿದೆ. ಅಲ್ಲದೆ, ವೇತನ ಸಮಿತಿಯು 4 ತಿಂಗಳೊಳಗೆ ವೇತನ ನಿಗದಿ ಮಾಡುವಲ್ಲಿ ವಿಳಂಬ ತೋರಿದರೆ ಮಧ್ಯಂತರ ಪರಿಹಾರ ನೀಡಬೇಕುಎಂದು ಅವರು ಆಗ್ರಹಿಸಿದರು.
ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯಜಂಟಿ ಕಾರ್ಯದರ್ಶಿ ಬಿ.ಲಿಂಗರಾಜು, ಜಿಲ್ಲಾಧ್ಯಕ್ಷ ಎಚ್.ಎಸ್.ರವೀಶ್, ತಾಲೂಕು ಅಧ್ಯಕ್ಷ ಎಚ್.ಎಸ್.ಶಿವರಾಮು, ಕಾರ್ಯದರ್ಶಿ ಡಿ.ದೇವರಾಜು ಹಾಗು ಖಜಾಂಚಿ ಕೆಂಚೇಗೌಡ ಮತ್ತಿತರರು ಉಪಸ್ಥಿತರಿದ್ದರು.