×
Ad

ಮಡಿಕೇರಿಯಲ್ಲಿ ರಸ್ತೆ ಗುಂಡಿಗಳ ಕಿರಿಕಿರಿ

Update: 2017-08-27 21:05 IST

ಮಡಿಕೇರಿ,ಆ.27 :ನಗರದಲ್ಲಿ ಕಳೆದ ಹತ್ತು ದಿನಗಳಿಂದ ಮಳೆಯಾಗುತ್ತಿದ್ದು, ಮೈಕೊರೆಯುವ ಚಳಿಯ ಸಹಿತ ಮಂಜು ಮುಸುಕಿದ ವಾತಾವರಣವಿದೆ. ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ಮಂಜಿನ ನಡುವೆ ಸಂಚಾರ ಅಪಾಯಕಾರಿ ಎನಿಸಿದೆ.

 ಮಳೆಗಾಲದ ಮಳೆ ಮುಗಿದೇ ಹೋಯಿತು ಎಂದು ನಿರಾಶಾಭಾವ ಮೂಡುತ್ತಿರುವಾಗಲೇ ಮಡಿಕೇರಿ ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ರೈತಾಪಿ ವರ್ಗದ ಮೊಗದಲ್ಲಿ ನಗುವನ್ನು ಮೂಡಿಸಿದೆ. ಆದರೆ ನಗರದ ಮಂದಿ ಕಿರಿಕಿರಿಯನ್ನು ಅನುಭವಿಸುವಂತ್ತಾಗಿದೆ.

 ನಗರಸಭೆಯ ಆಡಳಿತ ವ್ಯವಸ್ಥೆಯ ವೈಫಲ್ಯದಿಂದಾಗಿ ಅವ್ಯವಸ್ಥೆಗಳು ನಗರ ತುಂಬಾ ವ್ಯಾಪಿಸಿದ್ದು, ನಾಗರೀಕರು ಹಾಗೂ ಪ್ರವಾಸಿಗರು ಸಂಕಷ್ಟವನ್ನು ಎದುರಿಸಬೇಕಾಗಿದೆ. ಮಡಿಕೇರಿಗೆ ಸರಿ ಹೊಂದದ ಒಳಚರಂಡಿ ವ್ಯವಸ್ಥೆಗಾಗಿ ರಸ್ತೆಯ ಮಧ್ಯ ಭಾಗವನ್ನೇ ಕತ್ತರಿಸಿದ ಪರಿಣಾಮವಾಗಿ ಇಂದು ನಗರದ ಯಾವುದೇ ರಸ್ತೆಗಳು ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಮಳೆ ಇಲ್ಲದಾಗ ಹೇಗೋ ಸುಧಾರಿಸಿಕೊಂಡು ವಾಹನವನ್ನು ಚಲಾಯಿಸಬಹುದಾಗಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ರಸ್ತೆಗಳು ಮತ್ತಷ್ಟು ಹದಗೆಟ್ಟಿವೆ. ಸಂಪೂರ್ಣವಾಗಿ ಗುಂಡಿ ಬಿದ್ದಿರುವ ರಸ್ತೆಗಳಲ್ಲಿ ನೀರು ನಿಂತಿರುವುದರಿಂದ ಮತ್ತು ದಟ್ಟ ಮಂಜು ಕವಿಯುತ್ತಿರುವುದರಿಂದ ವಾಹನ ಚಾಲಕರು ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಹಗಲಿನ ವೇಳೆಯಲ್ಲೇ ದೀಪಗಳನ್ನು ಉರಿಸಿ ಮುಂದೆ ಸಾಗಿದರೂ ಗುಂಡಿಗಳಲ್ಲಿ ಚಕ್ರ ಬೀಳುವುದನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ದ್ವಿಚಕ್ರ ವಾಹನ ಚಾಲಕರಂತೂ ಜೀವವನ್ನು ಕೈಯಲ್ಲಿ ಹಿಡಿದುಕೊಂಡೆ ಗುಂಡಿ ಬಿದ್ದ ರಸ್ತೆಗಳಲ್ಲಿ ಸರ್ಕಸ್ ಮಾಡಬೇಕಾಗಿದೆ. ಪಾದಾಚಾರಿಗಳ ಪಾಡು ಇದಕ್ಕಿಂತ ಭಿನ್ನವಾಗಿಲ್ಲ. ವಾಹನಗಳು ಹಾರಿಸುವ ಕೆಸರಿನ ಸಿಂಚನದೊಂದಿಗೆ ಕೊರೆಯುವ ಚಳಿಯ ನಡುವೆ ಸಾಗಬೇಕಾದ ದುಸ್ಥಿತಿ ಇದೆ. ಯಾವುದೇ ಚರಂಡಿಗಳಲ್ಲಿ ನೀರು ಸಮರ್ಪಕವಾಗಿ ಹರಿಯುತ್ತಿಲ್ಲ ಮತ್ತು ರಸ್ತೆ ಬದಿಯ ಕಾಡು ಕಡಿದು ಸಂಚಾರಕ್ಕೆ ಯೋಗ್ಯ ಮಾರ್ಗದ ವ್ಯವಸ್ಥೆಯನ್ನು ಮಾಡಿಲ್ಲ. ಕಸ ವಿಲೇವಾರಿಯೂ ಸಮರ್ಪಕವಾಗಿ ನಡೆಯದ ಕಾರಣ ಕೊಳೆತು ನಾರುತ್ತಿರುವ ತ್ಯಾಜ್ಯಗಳ ನಡುವೆಯೇ ಪಾದಾಚಾರಿಗಳು ಸಾಗಬೇಕಾಗಿದೆ.

 ನಗರದ ಹೃದಯ ಭಾಗವಾದ ಮಂಗೇರಿರ ಮುತ್ತಣ್ಣ ವೃತ್ತ, ಖಾಸಗಿ ಬಸ್ ನಿಲ್ದಾಣ, ಇಂದಿರಾಗಾಂಧಿ ವೃತ್ತ, ರೇಸ್‍ಕೋರ್ಸ್ ರಸ್ತೆ, ಕಾಲೇಜು ರಸ್ತೆಗಳು ಸಂಪೂರ್ಣವಾಗಿ ಗುಂಡಿಮಯವಾಗಿದ್ದು, ಸಂಚಾರ ಅಸಾಧ್ಯವೆನಿಸಿದೆ. ನಗರಸಭೆಯ ಆಡಳಿತ ವೈಫಲ್ಯವೇ ಈ ಅವ್ಯವಸ್ಥೆಗಳಿಗೆ ಕಾರಣವೆಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸೆಪ್ಟಂಬರ್ 20 ರೊಳಗೆ ರಸ್ತೆಗಳ ದುರಸ್ತಿ  ಕಾರ್ಯ ಪೂರ್ಣಗೊಳಿಸುವುದಾಗಿ ಯುಜಿಡಿ ಅಭಿಯಂತರರು ಭರವಸೆ ನೀಡಿದ್ದಾರೆಯಾದರು ನಿರಂತರ ಮಳೆಯಾಗುತ್ತಿರುವುದರಿಂದ ಈ ಭರವಸೆ ಈಡೇರುವುದು ಅಸಾಧ್ಯವೆನಿಸಿದೆ. ಗಣೇಶೋತ್ಸವದ ಮಂಟಪಗಳು ಗುಂಡಿ ಬಿದ್ದ ರಸ್ತೆಗಳಲ್ಲೇ ಕಷ್ಟದಿಂದ ಮೆರವಣಿಗೆಯಲ್ಲಿ ಸಾಗುತ್ತಿದ್ದು, ಸೆಪ್ಟಂಬರ್ ಕೊನೆ ವಾರದಲ್ಲಿ ನಡೆಯುವ ದಸರಾ ಹಬ್ಬಕ್ಕೂ ರಸ್ತೆ ದುರಸ್ತಿಯಾಗುವುದು ಕಷ್ಟ ಸಾಧ್ಯವಾಗಲಿದೆ.

ಮಡಿಕೇರಿ ರಸ್ತೆ ಅವ್ಯವಸ್ಥೆ ವಿರುದ್ಧ ಪ್ರವಾಸಿಗರು ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಜು ಮುಸುಕಿದ ವಾತಾವರಣದಲ್ಲಿ ವಾಹನಗಳ ಚಾಲನೆ ಕಷ್ಟಕರವಾಗಿದ್ದು, ರಸ್ತೆ ಗುಂಡಿಗಳನ್ನು ತಪ್ಪಿಸುವ ಸಂದರ್ಭ ಅಪಘಾತ ಹಾಗೂ ಕಲಹಗಳು ಕೂಡ ನಡೆದಿದೆ. ಕೇವಲ ಪ್ರವಾಸಿಗರನ್ನಷ್ಟೇ ನಿರೀಕ್ಷಿಸುತ್ತಿರುವ ಆಡಳಿತ ವ್ಯವಸ್ಥೆ ಪ್ರವಾಸಿಗರಿಗೆ ಉತ್ತಮ ರಸ್ತೆಯನ್ನು ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಹೆಸರುವಾಸಿ ಪ್ರವಾಸಿ ತಾಣಗಳಾದ ರಾಜಾಸೀಟು ಉದ್ಯಾನವನ ಹಾಗೂ ಅಬ್ಬಿಫಾಲ್ಸ್ ವ್ಯಾಪ್ತಿಯಲ್ಲಿ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿದ್ದಾರೆ. ಆದರೆ ಈ ಎರಡೂ ಪ್ರವಾಸಿತಾಣಗಳಿಗೆ ತೆರಳುವ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ. ಪ್ರವಾಸಿಗರ ವಾಹನದಿಂದ ದುಬಾರಿ ನಿಲುಗಡೆ ಶುಲ್ಕ ವಸೂಲಿ ಮಾಡಲಾಗುತ್ತಿದೆಯೇ ಹೊರತು ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ ಎನ್ನುವ ಅಸಮಾಧಾನವೂ ವ್ಯಕ್ತವಾಗುತ್ತಿದೆ.

 ನಗರಸಭೆಯ ಅಧ್ಯಕ್ಷ ಸ್ಥಾನದಲ್ಲಿ ಕಾಂಗ್ರೆಸ್‍ನ ಕಾವೇರಮ್ಮ ಸೋಮಣ್ಣ ಇದ್ದಾರೆ. ಉಪಾಧ್ಯಕ್ಷ ಸ್ಥಾನದಲ್ಲಿ ಬಿಜೆಪಿಯ ಟಿ.ಎಸ್.ಪ್ರಕಾಶ್ ಹಾಗೂ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನದಲ್ಲಿ ಬಿಜೆಪಿಯ ಕೆ.ಎಸ್.ರಮೇಶ್ ಅಧಿಕಾರದಲ್ಲಿದ್ದಾರೆ. ಆದರೆ ಪರಸ್ಪರ ದೋಷಾರೋಪಣೆಗಳಲ್ಲೇ ಕಾಲಹರಣವಾಗುತ್ತಿದೆಯೇ ಹೊರತು ಅಭಿವೃದ್ಧಿಯ ದೃಷ್ಟಿಯಿಂದ, ಜನಪರವಾಗಿ ಯಾರೂ ಒಗ್ಗಟ್ಟನ್ನು ಪ್ರದರ್ಶಿಸದೆ ಇರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನವಿದೆ. ಆಗಿರುವ ಅವ್ಯವಸ್ಥೆಗಳು ಸಧ್ಯಕ್ಕಂತೂ ಸರಿ ಹೋಗುವ ಬಗ್ಗೆ ನಗರದ ಜನತೆಯಲ್ಲಿ ನಂಬಿಕೆ ಇಲ್ಲ.

 ಇಬ್ಬರು ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರು, ಒಬ್ಬರು ಸಂಸದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿದ್ದರೂ ಜಿಲ್ಲಾ ಕೇಂದ್ರ ಸ್ಥಾನವಾದ ಮಡಿಕೇರಿ ನಗರದಲ್ಲಿ ಒಂದು ಉತ್ತಮ ರಸ್ತೆಯನ್ನು ನಿರ್ಮಿಸಲು ಸಾಧ್ಯವಾಗದೇ ಇರುವುದನ್ನು ಗಮನಿಸಿದರೆ ಇಂದಿನ ಜನಪ್ರತಿನಿಧಿಗಳಿಗೆ ಜನಪರ ಕಾಳಜಿ ಎಷ್ಟಿದೆ ಎನ್ನುವುದು ಸಾಬೀತಾಗುತ್ತದೆ.

Writer - ವರದಿ : ಎಸ್.ಕೆ.ಲಕ್ಷ್ಮೀಶ್

contributor

Editor - ವರದಿ : ಎಸ್.ಕೆ.ಲಕ್ಷ್ಮೀಶ್

contributor

Similar News