×
Ad

ಉದ್ಯೋಗವಕಾಶ ಸೃಷ್ಟಿಗೆ ಕೌಶಲ್ಯಾಧಾರಿತ ಶಿಕ್ಷಣವನ್ನು ಪಠ್ಯಕ್ರಮದಲ್ಲಿ ಅಳವಡಿಸಬೇಕಿದೆ: ಡಾ.ಕೆ. ಸುಧಾಕರ್

Update: 2017-08-30 21:50 IST

ಚಿಕ್ಕಬಳ್ಳಾಪುರ, ಆ.30: ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರವಾದ ಬದಲಾವಣೆ ಅಗತ್ಯವಿದ್ದು, ಉದ್ಯೋಗವಕಾಶ ಸೃಷ್ಟಿಗೆ ಪೂರಕವಾದ ಕೌಶಲ್ಯಾಧಾರಿತ ಶಿಕ್ಷಣವನ್ನು ಪಠ್ಯಕ್ರಮದಲ್ಲಿ ಅಳವಡಿಸಬೇಕಿದೆ ಎಂದು ಶಾಸಕ ಡಾ.ಕೆ. ಸುಧಾಕರ್ ಅಭಿಪ್ರಾಯಪಟ್ಟರು.  

ನಗರದ ಸಿಟಿಜನ್ ಕ್ಲಬ್‍ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ 2017-18ನೆ ಸಾಲಿನ ಸಾಂಸ್ಕೃತಿ ಕ, ಕ್ರೀಡಾ, ಎನ್ನೆಸ್ಸೆಸ್, ಯುವ ರೆಡ್‍ಕ್ರಾಸ್ ಚಟುವಟಿಕೆಗಳ ಉದ್ಘಾಟನೆ ಹಾಗೂ ಕಿರಿಯ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ವಿಜ್ಞಾನ-ತಂತ್ರಜ್ಞಾನ ಯುಗದಲ್ಲಿ ವಿಫೂಲ ಉದ್ಯೋಗವಕಾಶಗಳು ಲಭ್ಯವಿದೆ. ಆದರೆ, ಅದಕ್ಕೆ ತಕ್ಕಂತ ಕೌಶಲ್ಯಾಧಾರಿತ ಶಿಕ್ಷಣವು ಪಠ್ಯಕ್ರಮದಲ್ಲಿ ಇಲ್ಲವಾಗಿದೆ. ಇದರಿಂದ ಬಹುತೇಕ ಮಂದಿಗೆ ಅಕ್ಷರ ಜ್ಞಾನವಿದ್ದರೂ, ನಿರುದ್ಯೋಗಿಗಳಾಗಿಯೇ ಉಳಿಯುವಂತಾಗಿದ್ದು, ಬೋಧನೆಯ ಪಠ್ಯದಲ್ಲಿ ಕೌಶಲ್ಯಾಧಾರಿತ ಶಿಕ್ಷಣವನ್ನು ಅಳವಡಿಸುವ ಮೂಲಕ ನಿರುದ್ಯೋಗ ಸಮಸ್ಯೆಯನ್ನು ನೀಗಿಸಬೇಕಿದೆ. ಈ ನಿಟ್ಟಿನಲ್ಲಿ ಸರಕಾರಗಳೂ ಕೂಡ ಕ್ರಮಕ್ಕೆ ಮುಂದಾಗಬೇಕಿದೆ ಎಂದರು. 

ವಿದ್ಯಾರ್ಥಿಗಳಿಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಮೂಲಕ ಶಿಕ್ಷಣಕ್ಕೆ ವಿಶೇಷ ಒತ್ತು ನೀಡುತ್ತಿದ್ದು, ಇವುಗಳನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೆ ಏರಬೇಕು ಎಂದು ಅವರು ಸಲಹೆ ನೀಡಿದರು. 

 ಅಂಕಿ ಅಂಶದ ಪ್ರಕಾರ ಪ್ರಸ್ತುತ ದೇಶದ ಸಾಕ್ಷರತೆಯ ಅನುಪಾತದಲ್ಲಿ ಪುರುಷರಿಗಿಂತ ಮಹಿಳೆಯರೇ ಮುಂದಿದ್ದಾರೆ. 1947ರಲ್ಲಿ ದೇಶದಲ್ಲಿ ಮಹಿಳೆಯರ ಸಾಕ್ಷರತೆ ಪ್ರಮಾಣ ಶೇ.1-2 ರಷ್ಟು ಮಾತ್ರ ಇತ್ತು. ಪ್ರಸ್ತುತ ಶೇ.74 ರಷ್ಟು ಪ್ರಗತಿ ಸಾಧಿಸಲಾಗಿದೆ. ಇಡೀ ವಿಶ್ವದಲ್ಲಿ ಮಹಿಳೆಯರ ಸಾಕ್ಷರತೆ ಪ್ರಮಾಣ ಶೇ.84 ರಷ್ಟು ಸರಾಸರಿ ಇದ್ದು, ಇದಕ್ಕೆ ಹೋಲಿಸಿದರೆ ದೇಶದಲ್ಲಿ ಶೇ.10ರಷ್ಟು ಹಿಂದೆ ಇದ್ದೇವೆ. ಅದೇ ರೀತಿ 2010ರ ಜನಗಣತಿಯಂತೆ ದೇಶದಲ್ಲಿ ಶೇ.116 ರಷ್ಟು ಮಹಿಳೆಯರು ಪದವಿ ಶಿಕ್ಷಣ ಪಡೆದಿದ್ದು, ಪುರುಷರ ಪ್ರಮಾಣ ಶೇ.65ರಷ್ಟು ಮಾತ್ರ ಇದೆ. ಇನ್ನು ಸ್ನಾತಕೋತ್ತರ ಪದವಿ ಪಡೆದವರಲ್ಲಿ 10 ವರ್ಷದ ಅಂತರದಲ್ಲಿ ಶೇ.151-155 ರಷ್ಟು ಹೆಚ್ಚಳವಾಗಿದೆ. 2001ರಲ್ಲಿ ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಪಡೆದ ಮಹಿಳೆಯರ ಸಂಖ್ಯೆ ಕೇವಲ ಶೇ.2 ಮಾತ್ರ ಇತ್ತು. ಇದು 2011ರ ವೇಳೆಗೆ ಶೇ.326ಕ್ಕೆ ಏರಿಕೆಯಾಗಿದ್ದು, ಈ ಎಲ್ಲಾ ಅಂಕಿ ಅಂಶಗಳನ್ನು ಗಮನಿಸಿದಾಗ ದೇಶದ ಸಾಕ್ಷರತೆಯಲ್ಲಿ ಹೆಣ್ಣು ಮಕ್ಕಳ ಪಾತ್ರ ಅತ್ಯಂತ ಮಹತ್ವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ ಮಾತನಾಡಿ, ಇಂದಿನ ಪೈಪೋಟಿ ಯುಗದಲ್ಲಿ ವಿದ್ಯಾರ್ಥಿಗಳು ಓದಿ ಮಾತ್ರ ಸೀಮಿತವಾಗದೇ ಕ್ರೀಡೆಯಂತಹ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.   

ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ತಾಪಂ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷರಾದ ವೆಂಕಟಾಚಲಪತಿ, ಶ್ರೀನಿವಾಸ್, ಹಾಲಿ ಸದಸ್ಯರಾದ ಮಂಜುನಾಥಚಾರಿ, ಸುಬ್ರಮಣ್ಯಚಾರಿ, ದೇಸಾನಂಜಪ್ಪ, ಕೃಷ್ಣಮೂರ್ತಿ, ಪ್ರಾಂಶುಪಾಲ ಟಿ.ನಾಗರಾಜಯ್ಯ, ಪ್ರಾದ್ಯಾಪಕ ಡಾ.ಬಿ.ಆರ್.ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News