ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ತಾಪಂ ಸದಸ್ಯರ ಆಗ್ರಹ
ಶಿವಮೊಗ್ಗ, ಆ. 31: 'ವಿವಿಧ ಇಲಾಖೆಯ ಮೂಲಕ ಅನುಷ್ಠಾನಗೊಳಿಸುವ ಯೋಜನೆ, ಫಲಾನುಭವಿಗಳ ಆಯ್ಕೆಯ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಇದರಿಂದ ಸರ್ಕಾರಿ ಯೋಜನೆಗಳ ಅನುಷ್ಠಾನದ ಬಗ್ಗೆ ಗೊತ್ತೇ ಆಗುತ್ತಿಲ್ಲವಾಗಿದೆ' ಎಂದು ತಾಲೂಕು ಪಂಚಾಯತ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ನಗರದ ತಾಲೂಕು ಪಂಚಾಯತ್ ಕಚೇರಿಯ ಸಾಮರ್ಥ್ಯದ ಸೌಧ ಸಭಾಂಗಣದಲ್ಲಿ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ, ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳ ವಿರುದ್ದ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ತಿಳಿಸುತ್ತೆವೆ: ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರವಿಕುಮಾರ್ ತಮ್ಮ ಇಲಾಖೆಯಿಂದ ಇರುವ ವಿವಿದ ಯೋಜನೆಗಳ ಬಗ್ಗೆ ವಿವರಣೆ ನೀಡಲು ಆರಂಭಿಸಿದಾಗ ಸದಸ್ಯರಾದ ಕುಂಸಿಯ ಮಂಜುನಾಥ್, ಸುಧಾ ನಾಗರಾಜ್, ಶಕುಂತಲಾ ಮಹೇಶ್ವರಪ್ಪ, ಆಯನೂರು ಗ್ರಾಪಂ ಅಧ್ಯಕ್ಷ ಪ್ರಭಾಕರ ಮೊದಲಾದವರು ತಮಗೆ ಮಾಹಿತಿ ನೀಡದೆ ಫಲಾನುಭವಿಗಳನ್ನು ಆಯ್ಕೆ ಮಾಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ರವಿಕುಮಾರ್, ಯೋಜನೆಯ ವಿವರವನ್ನು ಪ್ರತಿ ಗ್ರಾ.ಪಂ.ಗೆ ಕಳುಹಿಸಲಾಗುತ್ತಿದೆ. ಆದರೆ ಪ್ರತಿ ಸದಸ್ಯರಿಗೆ ಕಳುಹಿಸುವ ಪದ್ಧತಿ ಇಲ್ಲ. ಪತ್ರಿಕಾ ಪ್ರಕಟಣೆ ಮೂಲಕ ಯೋಜನೆಯ ವಿವರ ನೀಡಲಾಗುತ್ತಿದೆ. ಇದನ್ನು ಎಲ್ಲಾ ಸದಸ್ಯರೂ ಗಮನಿಸಿ ಸಹಕರಿಸಬೇಕೆಂದು ಮನವಿ ಮಾಡಿದರು.
ಆಯನೂರು ಆಸ್ಪತ್ರೆಯಲ್ಲಿ ಪ್ರಯೋಗಾಲಯ ಮತ್ತು ಔಷಧಿಗಳನ್ನು ನೀಡಲು ಸಿಬ್ಬಂದಿಗಳ ಕೊರತೆ ಇದೆ ಎಂದು ಅಲ್ಲಿನ ಗ್ರಾಪಂ ಅಧ್ಯಕ್ಷ ಪ್ರಭಾಕರ್ ಪ್ರಸ್ತಾಪಿಸಿದರು. ಜೊತೆಗೆ ಸಕಾಲದಲ್ಲಿ ವೈದ್ಯರು ಲಭ್ಯವಿಲ್ಲದ ಕಾರಣ, ರಾತ್ರಿ ಸಂದರ್ಭದಲ್ಲಿ ರೋಗಿಗಳನ್ನು ಶಿವಮೊಗ್ಗಕ್ಕೆ ಕಳುಹಿಸುವ ಅನಿವಾರ್ಯತೆ ಎದುರಾಗಿದೆ ಎಂದರು.
ಇದಕ್ಕೆ ಉತ್ತರಿಸಿದ ತಾಲೂಕು ವೈದ್ಯಾಧಿಕಾರಿ ಡಾ. ದಿನೇಶ್, ಆಯನೂರು ಮತ್ತು ಹಾರ್ನಹಳ್ಳಿ ಆಸ್ಪತ್ರೆಗೆ ವೈದ್ಯರನ್ನು ನೇಮಕ ಮಾಡಲಾಗಿದೆ. ರಾತ್ರಿ ಪಾಳಿಯಲ್ಲೂ ಸಹಾ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ಸಕಾಲದಲ್ಲಿ ಕೆಲಸ ನಿರ್ವಹಿಸದಿದ್ದಲ್ಲಿ ಆರೋಗ್ಯ ಇಲಾಖೆಗೆ ದೂರು ನೀಡಬಹುದು ಎಂದರು.
ಆಸ್ಪತ್ರೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೂ ತನ್ನ ಗಮನಕ್ಕೆ ತರಬಹುದು. ಅದನ್ನು ಪರಿಹರಿಸುವ ಕೆಲಸವನ್ನು ಶೀಘ್ರದಲ್ಲಿ ಮಾಡಲಾಗುವುದು ಎಂದಾಗ, ಸದಸ್ಯೆ ಸುಧಾ ನಾಗರಾಜ್, ಆಯನೂರಲ್ಲಿ ಸಾರ್ವಜನಿಕ ಸಭೆ ಕರೆದು, ಆಸ್ಪತ್ರೆ ಸಂಬಂಧಿತ ವಿಚಾರಗಳ ಅವಲೋಕನ ಮಾಡಬೇಕೆಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ಮುನಿರತ್ನ ಮಾತನಾಡಿ, ಅನುಪಾಲನಾ ವರದಿಯ ಪುಸ್ತಕವನ್ನು ಸದಸ್ಯರಿಗೆ ಸಕಾಲದಲ್ಲಿ ಪೂರೈಸಲಾಗುತ್ತಿಲ್ಲ. ಈ ಹಿಂದಿನ ಸಭೆಗಳಲ್ಲಿ ಹಲವು ಬಾರಿ ಈ ಬಗ್ಗೆ ಎಚ್ಚರಿಸಲಾಗಿತ್ತು. ಆದರೂ ಸಹಾ ಸಿಬ್ಬಂದಿಗಳು ಎಚ್ಚೆತ್ತುಕೊಂಡಿಲ್ಲ. ಸಭೆಗೆ ಹತ್ತು ದಿನ ಮುನ್ನ ಈ ಪುಸ್ತಕ ಸಿಗುವಂತೆ ಮಾಡಬೇಕು. ಇಲ್ಲವಾದಲ್ಲಿ ಸಭೆಗೆ ತಯಾರಿಮಾಡಿಕೊಂಡು ಬರಲು ಸಾಧ್ಯವಾಗುವುದಿಲ್ಲ. ಮುಂದಿನ ದಿನಗಳಲ್ಲಿ ವಿಳಂಬಕ್ಕೆ ಅವಕಾಶವಿಲ್ಲದಂತೆ ಪೂರೈಸಬೇಕು ಎಂದು ಆಗ್ರಹಿಸಿದರು.
ಅಧ್ಯಕ್ಷತೆಯನ್ನು ಉಪಾಧ್ಯಕ್ಷೆ ನಿರ್ಮಲಾ ಮೋಹನ್ ವಹಿಸಿದ್ದರು. ಪ್ರಭಾರ ಕಾರ್ಯದರ್ಶಿ ಸದಾಶಿವ ಉಪಸ್ಥಿತರಿದ್ದರು.