ಶಿವಮೊಗ್ಗದಲ್ಲಿ ಬಡವರಿಗೆ ದೊರಕದ ಆಶ್ರಯ ನಿವೇಶನ - ಪ್ರತಿಭಟನೆ

Update: 2017-09-01 11:30 GMT

ಶಿವಮೊಗ್ಗ, ಸೆ.1: ವಾಜಪೇಯಿ ನಗರ ವಸತಿ ಯೋಜನೆಯಡಿ ಬಡ ವರ್ಗಕ್ಕೆ ಸೇರಿದ ವಸತಿ ರಹಿತರಿಗೆ ಇಲ್ಲಿಯವರೆಗೂ ನಿವೇಶನ ನೀಡದೆ ಸತಾಯಿಸಲಾಗುತ್ತಿದ್ದು, ತಕ್ಷಣವೇ ನಿವೇಶನ ವಿತರಣೆಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿತ್ತು.

ವಾಜಪೇಯಿ ನಗರ ವಸತಿ ಯೋಜನೆಯಡಿ ನಗರದ ಹೊರವಲಯ ಗೋವಿಂದಾಪುರದಲ್ಲಿ 1,491 ಹಾಗೂ ಗೋಪಿಶೆಟ್ಟಿಕೊಪ್ಪದಲ್ಲಿ 539 ಸೇರಿದಂತೆ ಒಟ್ಟಾರೆ 2030 ನಿವೇಶನ/ಮನೆ ಹಂಚಿಕೆಗೆ 2011-12ನೆ ಸಾಲಿನಲ್ಲಿ ಅಂದಿನ ನಗರಸಭೆ ಆಡಳಿತವು ಬಡವರ್ಗಕ್ಕೆ ಸೇರಿದ ವಸತಿರಹಿತರಿಂದ ಅರ್ಜಿ ಆಹ್ವಾನಿಸಿತ್ತು. ಸಾಕಷ್ಟು ನಿರೀಕ್ಷೆಗಳೊಂದಿಗೆ ಹಗಲು ರಾತ್ರಿ ಸರದಿ ಸಾಲಿನಲ್ಲಿ ನಿಂತು ಬಡವರು ಸಕಲ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಸರಿಸುಮಾರು 17 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ, ಇಲ್ಲಿಯವರೆಗೂ ನಗರ ಆಶ್ರಯ ಯೋಜನಾ ಸಮಿತಿಯು ಈ ಅರ್ಜಿಗಳ ಸಮರ್ಪಕ ವಿಲೇವಾರಿ ಮಾಡಿಲ್ಲವೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

6 ವರ್ಷವಾಗುತ್ತಾ ಬಂದರೂ ಇಲ್ಲಿಯವರೆಗೂ ಈ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ. ಆಶ್ರಯ ಸಮಿತಿಯ ಅಧ್ಯಕ್ಷರೂ ಆದ ಶಾಸಕ ಕೆ.ಬಿ.ಪ್ರಸನ್ನಕುಮಾರ್‌ ಈ ಯೋಜನೆಯ ಅನುಷ್ಠಾನದಲ್ಲಿ ನಿರ್ಲಕ್ಷ್ಯವಹಿಸಿದ್ದಾರೆ. ಇದರಿಂದ ವಾಜಪೇಯಿ ವಸತಿ ಯೋಜನೆಯ ಸಂಪೂರ್ಣ ಹಳ್ಳ ಹಿಡಿಯುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ನಿವೇಶನಕ್ಕೆ ಬದಲಾಗಿ ಅಪಾರ್ಟ್‌ಮೆಂಟ್ ನಿರ್ಮಿಸಿ ಮನೆ ಕೊಡುವ ನಿರ್ಧಾರ ಮಾಡಲಾಗಿದೆ. 6,090 ಮನೆಗಳ ನಿರ್ಮಾಣಕ್ಕೆ ಅಗತ್ಯವಾದ 325 ಕೋಟಿ ರೂ. ಸರಕಾರದ ವತಿಯಿಂದ ಬಿಡುಗಡೆ ಮಾಡಿಸಲು ಶಾಸಕ ಕೆ.ಬಿ.ಪ್ರಸನ್ನಕುಮಾರ್‌ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಇನ್ನಾದರೂ ಆಶ್ರಯ ಯೋಜನಾ ಸಮಿತಿಯು ಆಶ್ರಯ ಯೋಜನೆಯ ಸೌಲಭ್ಯ ಅನುಷ್ಠಾನಕ್ಕೆ ಪರಿಣಾಮಕಾರಿ ಕ್ರಮಕೈಗೊಳ್ಳಬೇಕು. ಸೌಲಭ್ಯ ಕಲ್ಪಿಸಲು ಮಹಾನಗರ ಪಾಲಿಕೆ ಆಡಳಿತಕ್ಕೆ ಸೂಕ್ತ ನಿರ್ದೇಶನ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆಯ ವತಿಯಿಂದ ನಿರಂತರವಾಗಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

 ಈ ಸಂದರ್ಭ ಟ್ರಸ್ಟನ್ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಮಾಜಿ ವಿಧಾನಪರಿಷತ್ ಸದಸ್ಯ ಜಿ.ಮಾದಪ್ಪ, ಮುಖಂಡರಾದ ಕೋಡ್ಲು ಶ್ರೀಧರ್, ಹೊಳೆಮಡಿಲು ವೆಂಕಟೇಶ್, ಶಂಕ್ರನಾಯ್ಕಿ, ಓಂಕಾರಪ್ಪ ಸೇರಿದಂತೆ ಮೊದಲಾದವರು ಉಪಸ್ಥಿರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News