ತುಮಕೂರು;ಜಲಾಶಯದಿಂದ ಹೆಚ್ಚು ನೀರು ಹರಿದರೆ ಎಲ್ಲಾ ಕೆರೆಗೆ ನೀರು : ಟಿ.ಬಿ.ಜಯಚಂದ್ರ
ತುಮಕೂರು.ಸೆ.02:ನಿಗಧಿಗಿಂತಲೂ ಹೆಚ್ಚು ನೀರು ಹೇಮಾವತಿ ಜಲಾಶಯದಿಂದ ಹರಿದಲ್ಲಿ ಮಾತ್ರೆ ಜನರ ಬೇಡಿಕೆಯಂತೆ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಬಕ್ರಿದ್ ಹಬ್ಬದ ಅಂಗವಾಗಿ ಮುಸ್ಲಿಂ ಸಮುದಾಯದವರು ಹಮ್ಮಿಕೊಂಡಿದ್ದ ಸಾಮೂಹಿಕ ಪ್ರಾರ್ಥನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸತತ ಬರಗಾಲದಿಂದ ಎಲ್ಲಾ ಕಡೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.ಆದರೆ ಇದನ್ನೆ ಬಂಡವಾಳ ಮಾಡಿಕೊಂಡ ಕೆಲವರು ಕಾನೂನು ಕೈಗೆತ್ತಿಕೊಳ್ಳುವ ಮೂಲಕ ಜನರನ್ನು ಪ್ರಜೋದಿಸುತ್ತಿದ್ದಾರೆ ಎಂದರು.
ನಮಗೆ ನೀರು ಸಿಗುವುದಿಲ್ಲ ಎಂಬ ಹತಾಸೆಗೆ ಒಳಗಾಗಿರುವ ಒರ್ವ ರೈತ ಜೀವ ಕಳೆದುಕೊಂಡಿದ್ದಾನೆ.ರೈತರು ಪ್ರಚೋಧನೆಗೆ ಒಳಗಾಗಬಾರದು.ನಮ್ಮ ಅದೃಷ್ಟಕ್ಕೆ ಜಲಾಶಯದ ಸುತ್ತಮುತ್ತ ಒಳ್ಳೆಯ ಮಳೆಯಾಗುತ್ತಿದ್ದು, ಇಂದಿಗೂ 12 ಟಿ.ಎಂ.ಸಿ ನೀರಿದೆ.ಮಳೆ ಮುಂದುವರೆದಲ್ಲಿ ಮತ್ತಷ್ಟು ನೀರು ಜಿಲ್ಲೆಗೆ ದೊರೆಯಲಿದೆ. ಜಿಲ್ಲೆಗೆ ಮತ್ತಷ್ಟು ದಿನ ನೀರು ಹರಿದಲ್ಲಿ ಮೊದಲು ಕುಡಿಯಲು ಕೆರೆಗಳಿಗೆ ನೀರು ತುಂಬಿಸಿ, ನಂತರ ರೈತರ ಕೋರಿಕೆಯಂತೆ ಎಲ್ಲಾ ಕೆರೆಗಳಿಗೆ ನೀರು ಹರಿಸಲು ಜಿಲ್ಲಾಡಳಿತ ಸಹ ಸಿದ್ದವಿದೆ ಎಂದು ಟಿ.ಬಿ.ಜಯಚಂದ್ರ ತಿಳಿಸಿದರು.
ಐಸಿಸಿ ಸಭೆಯ ನಿರ್ಣಯದಂತೆ ಕುಡಿಯುವ ನೀರಿಗಾಗಿ ನಾಲೆಯ ಕೊನೆಯಲ್ಲಿರುವ ಕೆರೆಗಳಿಂದ ನೀರು ತುಂಬಿಸಿಕೊಂಡು ಬರಲು ತೀರ್ಮಾನಿಸಲಾಗಿತ್ತು.ಕೊನೆಯ ಭಾಗಕ್ಕೆ ನೀರು ಹರಿಯಬೇಕಾದರೆ ಮೇಲಿನ ಎಲ್ಲಾ ಗೇಟ್ಗಳನ್ನು ಕ್ಲೋಸ್ ಮಾಡಬೇಕಾಗಿರುವುದು ಅನಿವಾರ್ಯ.ಈ ಉದ್ದೇಶದಿಂದ ನಾಲೆಯ ಮೇಲೆ 144 ಸೆಕ್ಷನ್ ಜಾರಿಗೆ ತಂದು ತೂಬು ಮುಚ್ಚಿಸಲು ಕ್ರಮ ವಹಿಸಲಾಗಿತ್ತು.ಇದಕ್ಕಾಗಿ ಎರಡು ಬಾರಿ ಶಾಸಕರು, ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ಸಭೆ ನಡೆಸಿ ಸಮನ್ವಯತೆ ತರಲಾಗಿತ್ತು.ಆದರೂ ರೈತನ ಸಾವಾಗಿರುವುದು ನಿಜಕ್ಕೂ ದುಖಃದ ಸಂಗತಿ.ಈಗಾಗಲೇ ಜಿಲ್ಲಾಡಳಿತ ಸಂತ್ರಸ್ತ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಘೋಷಿಸಲಾಗಿದೆ ಎಂದರು.
ಪರಿಶಿಷ್ಟ ಜಾತಿ ಮತ್ತು ವರ್ಗಗಳ ನೌಕರರ ಮುಂಬಡ್ತಿ ಕುರಿತಂತೆ ರಾಜ್ಯಪಾಲರ ಅನುಮಾನಕ್ಕೆ ಶುಕ್ರವಾರ ಭೇಟಿಯಾಗಿ ವಿವರ ನೀಡಲಾಗಿದೆ.ಅವರು ಕೆಲವು ಅನುಮಾನಗಳನ್ನು ಎತ್ತಿದ್ದು,ಅವುಗಳನ್ನು ಪರಿಹರಿಸಲಾಗಿದೆ.ಕಾನೂನು ತಜ್ಞರ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ.ಬಡ್ತಿ ಮೀಸಲಾಗಿ ಕಾನೂನು ಇಂದು ನಿನ್ನೆಯ ಕಾನೂನನಲ್ಲ. 1978ರಲ್ಲಿ ದೇವರಾಜ ಅರಸು ಅವರ ಜಾರಿಗೆ ತಂದ ಕಾನೂನನ್ನು 2002ರಲ್ಲಿ ಮತ್ತೊಮ್ಮೆ ಪರಿಷ್ಕರಿಸಲಾಗಿತ್ತು.ಅಲ್ಲದೆ ಅಪರ ಮುಖ್ಯಕಾರ್ಯದರ್ಶಿ ಅವರು ನೀಡಿದ ವರದಿಯನ್ನು ಆಧರಿಸಿ ತೆಗೆದುಕೊಂಡು ನಿರ್ಧಾರಗಳನ್ನು ಅಧಿವೇಶನ ಇಲ್ಲದ ಕಾರಣ ಸುಗ್ರಿವಾಜ್ಞೆ ಮೂಲಕ ಜಾರಿಗೆ ತರಲು ಮುಂದಾಗಿದ್ದೇವೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆಗೂ, ಸಚಿವ ತಿಮ್ಮಾಪುರ ಅವರ ಮೇಲಿರುವ ಪ್ರಕರಣಕ್ಕೂ ಸಂಬಂಧವಿಲ್ಲ. ಬಿಜೆಪಿ ಅವರು ಪದೇ ಪದೇ ಏಕೆ ರಾಜ್ಯಪಾಲರನ್ನು ಭೇಟಿ ಮಾಡುವುದಕ್ಕೆ ವೃತ್ತಿಯಾಗಿಸಿಕೊಂಡಿದ್ದಾರೆ.ಒಚಿದೆಡೆ ದಲಿತರನ್ನು ಕರೆದು ಊಟ ಹಾಕಿ ಪ್ರಚಾರ ಪಡೆಯುವ ಬಿಜೆಪಿ,ಮತ್ತೊಂದೆಡೆ ದಲಿತರಿಗೆ ಮಂತ್ರಿಗಿರಿ ಸಿಕ್ಕಾಗ ಅದನ್ನು ವಿರೋಧಿಸಿ, ಅವರ ವಜಾಕ್ಕೆ ಒತ್ತಾಯಿಸುವ ದ್ವಂದ್ವ ಏಕೆ ಎಂದು ಪ್ರಶ್ನಿಸಿದರು.
ತುಮಕೂರಿನಿಂದ ಹಿರಿಯ ಮುಖಂಡ ಕೆ.ಷಡಕ್ಷರಿ ಅವರಿಗೆ ಮಂತ್ರಿಗಿರಿ ಸಿಗಬೇಕಿತ್ತು.ಸಚಿವ ಸ್ಥಾನ ಲಭ್ಯವಿಲ್ಲದಿರುವುದು ನೋವು ತಂದಿದೆ.ಆದರೆ ಈ ವಿಚಾರವಾಗಿ ಕೆ.ಪಿ.ಸಿ.ಸಿ. ಅಧ್ಯಕ್ಷರು ಮುನಿಸಿಕೊಂಡಿದ್ದಾರೆ ಎಂಬುದು ನಂಬಲು ಸಾಧ್ಯವಿಲ್ಲ ಎಂದು ಟಿ.ಬಿ.ಜೆ ತಿಳಿಸಿದರು.