ದೇಶ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಗಮನಾರ್ಹ: ಕೆ.ಎಸ್.ಈಶ್ವರಪ್ಪ

Update: 2017-09-05 13:48 GMT

ಶಿವಮೊಗ್ಗ, ಸೆ. 5: 'ಶಿಕ್ಷಕರು ದೇಶದ ಸಾಧನೆಗೆ ಕಾರಣರಾಗುವವರನ್ನು ರೂಪಿಸುವವರಾಗಿದ್ದಾರೆ. ಸಮಾಜ ಸರಿಯಾದ ದಿಕ್ಕಿನಲ್ಲಿ ಸಾಗಬೇಕಾದರೆ ಅದಕ್ಕೆ ಒಬ್ಬ ಗುರುವಿನ ಅಗ್ಯವಿದೆ. ಆ ಗುರು ಯಾವ ಮಾರ್ಗವನ್ನು ತೋರಿಸುತ್ತಾನೋ, ಆ ಮಾರ್ಗದಲ್ಲಿ ವಿದ್ಯಾರ್ಥಿಗಳು ಹೋಗುತ್ತಾರೆ. ಈ ಮೂಲಕ ಶಿಕ್ಷಣದಲ್ಲಿ ಸಾಧನೆ ಮಾಡಿ, ದೇಶದ ಸಾಧನೆಗೂ ಕಾರಣರಾಗುತ್ತಾರೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. 

ಮಂಗಳವಾರ ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಿಕ್ಷಣ ಇಲಾಖೆವತಿಯಿಂದ ಏರ್ಪಡಿಸಲಾಗಿದ್ದ ಶಿಕ್ಷಕರ ದಿನಾಚರಣೆ -2017  ಉದ್ಘಾಟಿಸಿದ ನಂತರ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಉನ್ನತಿಗೆ ಕಾರಣರಾಗುವ ಶಿಕ್ಷಕರು ಸಮಾಜವನ್ನು ತಿದ್ದುವ ಮತ್ತು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವ ಮಹೋನ್ನತ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದರು. 

ಅಬ್ದುಲ್ ಕಲಾಂ, ಪ್ರೊ. ರಾಧಾಕೃಷ್ಣನ್ ಮುಂತಾದವರು ಶಿಕ್ಷಣ ಕ್ಷೇತ್ರದಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದ್ದಾರೆ. ಕಾರಣ ಅವರು ಶಿಕ್ಷಕರಾಗಿ ಮಾಡಿದ ಸಾಧನೆ. ಈ ರೀತಿ ಸಾಧನೆ ಮಾಡಿದ ಶಿಕ್ಷಕರನ್ನು ಸಮಾಜ ಸರ್ವದಾ ನೆನಪಿಸುತ್ತದೆ. ನಿಸ್ವಾರ್ಥ ಸೇವೆಯ ಮೂಲಕ ಮಕ್ಕಳನ್ನು ಉತ್ತಮರನ್ನಾಗಿ ಬೆಳೆಸುವ ಕೆಲಸವನ್ನು ಶಿಕ್ಷಕರು ಮಾಡುತ್ತಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಶಾಸಕರು ಮಾತನಾಡಿ, ಶಿಕ್ಷಕರು ನಂದಾದೀಪವಾಗಿದ್ದಾರೆ. ಇಂತಹ ದೀಪ ಇಂದು ಸಮಾಜವನ್ನು ಮತ್ತು ದೇಶವನ್ನು ಬೆಳಗುತ್ತಿದೆ. ಶ್ರೀಮಂತ, ಬಡವ, ಜಾತಿ, ಮತ ನೋಡದೆ ಎಲ್ಲರಿಗೂ ಒಂದೇ ರೀತಿ ಶಿಕ್ಷಣವನ್ನು ಇವರು ನೀಡುತ್ತಾರೆ. ಕೂಡಲೇ ಗುರುಭವನ ಸ್ಥಾಪಿಸಲು ಜಾಗ ಗುರುತಿಸಬೇಕು. ಅಧಿಕಾರಿಗಳು ಯಾವಕಾರಣಕ್ಕೂ ವಿಳಂಬಮಾಡಬಾರದು. ಸರ್ಕಾರ ಮಂಜೂರುಮಾಡಿದ ಹಣದ ಸದುಪಯೋಗ ಮಾಡಿಕೊಳ್ಳಬೇಕು. ಇಲ್ಲಿಯವರೆಗೆ ಅಧಿಕಾರಿಗಳು ತೋರಿದ ನಿರ್ಲಕ್ಷ್ಯ ಇನ್ನೂ ಮುಂದುವರೆಯಬಾರದು ಎಂದರು.

ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕ ಜಿ.ಎಸ್. ಪ್ರಭುಸ್ವಾಮಿ, ಗುಣಾತ್ಮಕ ಶಿಕ್ಷಣದ ಅವಶ್ಯಕತೆ ಇಂದು ಹೆಚ್ಚಾಗಿದ್ದು, ಇದರಬಗ್ಗೆ ಎಲ್ಲೆಡೆ ಚಿಂತನೆ ನಡೆಯುತ್ತಿದೆ. ಶಾಲೆಗಳಲ್ಲಿ ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವ ಸಂಬಂಧ ಸಾಕಷ್ಟು ಯೋಜನೆಗಳನ್ನು ಆರಂಭಿಸಲಾಗಿದೆ. ಜೊತೆಗೆ ವೃತ್ತಿಪರ ಶಿಕ್ಷಣ ಕಲಿಕೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಬಹುತೇಕ ಶಾಲೆಗಳಲ್ಲಿನ ಇದು ಚಾಲನೆ ಗೊಂಡಿದೆ. ಶಿಕ್ಷಕರಿಗಾಗಿ ಗುರುಚೇತನವೆಂಬ ಕಲಿಕಾ ಅಭಿವೃದ್ಧಿ ಯೋಜನೆ ಜಾರಿಗೊಳಿಸಲಾಗಿದೆ ಎಂದರು.

ಈ ವೇಳೆ ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರನ್ನು ಅತಿಥಿಗಳು ಗೌರವಿಸಿದರು. 

ಕಾರ್ಯಕ್ರಮದಲ್ಲಿ ಎಂಎಲ್‍ಸಿ ಆರ್. ಪ್ರಸನ್ನಕುಮಾರ್, ಜಿಪಂ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್. ಷಡಕ್ಷರಿ, ಜಿಪಂ ಸದಸ್ಯ ಕೆ.ಇ. ಕಾಂತೇಶ್, ಪಾಲಿಕೆ ಸದಸ್ಯ ಎಚ್.ಸಿ. ಯೋಗೇಶ್, ಜಿಪಂ ಸಿಇಓ ಕೆ. ರಾಕೇಶ್ ಕುಮಾರ್, ಬಿಇಒಎಸ್. ಗೀತಾ, ಡಿಡಿಪಿಐ ಪಿ.ಎಸ್. ಮಚಾಡೋ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಡಿ.ಕೆ. ದಿವಾಕರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹಾಬಲೇಶ್ವರ ಹೆಗ್ಡೆ, ತಾಲೂಕು ಅಧ್ಯಕ್ಷ ಎಂ. ರವಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿದ್ದಬಸಪ್ಪ, ತಾಲೂಕು ಅಧ್ಯಕ್ಷ ವೈ.ಎಂ. ಧರ್ಮಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News