ಜಾತಿ ಪದ್ಧತಿ ದೇಶದ ಅಭಿವೃದ್ಧಿಗೆ ಮಾರಕ: ಡಾ.ಅಣ್ಣಪ್ಪ ಎನ್.ಮಳೀಮಠ
ಶಿವಮೊಗ್ಗ, ಸೆ.6: ಸಮಾಜದಲ್ಲಿ ಬಹುಕಾಲದಿಂದ ಬೀಡುಬಿಟ್ಟಿದ್ದ ಜಾತಿ, ಮತ-ಭಾಷೆ ಬಣ್ಣಗಳನ್ನು ಹೋಗಲಾಡಿಸಿ, ಸಾಮಾಜಿಕ ತಾರತಮ್ಯಗಳನ್ನು ನಿಯಂತ್ರಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟವರಲ್ಲಿ ದಾರ್ಶನಿಕ ಬ್ರಹ್ಮಶ್ರೀ ನಾರಾಯಣಗುರುಗಳು ಅಗ್ರಪಂಕ್ತಿಯಲ್ಲಿ ಗುರುತಿಸಲ್ಪಡುತ್ತಾರೆ ಎಂದು ಚಿಕ್ಕಮಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಅಣ್ಣಪ್ಪ ಎನ್.ಮಳೀಮಠ ಅಭಿಪ್ರಾಯಪಟ್ಟರು.
ಬುಧವಾರ ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಆರ್ಯ ಈಡಿಗರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಬ್ರಹ್ಮಶ್ರಿ ನಾರಾಯಣಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಜಾತಿ ಪದ್ಧತಿ ದೇಶದ ಅಭಿವೃದ್ಧಿಗೆ ಮಾರಕ. ವಿದ್ಯೆ ಮತ್ತು ಸಂಘಟನೆಯ ಮಹತ್ವದ ಕುರಿತು ಸಾರಿದ ನಾರಾಯಣಗುರುಗಳು ವಿದ್ಯೆ ಮನುಷ್ಯನ ಅಜ್ಞಾನ ತೊಡೆದು ಹಾಕುತ್ತದೆ. ಸಂಘಟನೆಯಿಂದ ಸ್ವತಂತ್ರ ಜೀವನ ನಡೆಸಬಹುದಾಗಿದೆ ಅಲ್ಲದೇ ಅಸಾಧ್ಯವಾದುದನ್ನು ಸಾಧಿಸಬಹುದಾಗಿದೆ ಎಂದು ಅವರು ಬಲವಾಗಿ ನಂಬಿದ್ದರು. ಪ್ರತಿಯೊಬ್ಬರೂ ಯಾರನ್ನೂ ದೂಷಿಸದೇ ಪರಸ್ಪರರನ್ನು ಪ್ರೀತಿಸುವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಅಸಮಾನತೆಯನ್ನು ಹೋಗಲಾಡಿಸುವಲ್ಲಿ ಬಸವಣ್ಣನವರ ನಂತರದಲ್ಲಿ ಜನಿಸಿದ ಮಹನೀಯ ನಾರಾಯಣಗುರು ಅವರು ತಮ್ಮ ಆಲೋಚನೆಗಳನ್ನು ಪ್ರಾಯೋಗಿಕವಾಗಿ ಜಾರಿಗೆ ತರುವಲ್ಲಿ ಯಶಸ್ವಿಯಾದರು. ಇಂದಿನ ಯುವ ಪೀಳಿಗೆ ಅವರನ್ನು ಅನುಸರಿಸದಿರುವುದರಿಂದ ವರ್ತಮಾನದಲ್ಲಿ ಸಂಘರ್ಷಗಳು ನಡೆಯುತ್ತಿವೆ. ಒಟ್ಟಿನಲ್ಲಿ ನಾರಾಯಣಗುರುಗಳು ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಬೆಸುಗೆಯಂತಿದ್ದರು. ಸ್ತ್ರೀಯರನ್ನು ನಾಗರಿಕ ಸಮಾಜ ಇಂದು ಗೌರವದಿಂದ ನಡೆಸಿಕೊಳ್ಳುವಲ್ಲಿ ಗುರುಗಳ ಮಾರ್ಗದರ್ಶನ ಅನನ್ಯವಾದುದು ಎಂದು ವಿವರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಮಾತನಾಡಿ, ನಾಡಿನ ಅನೇಕ ಆದರ್ಶವಾದಿಗಳಂತೆ ನಾರಾಯಣಗುರುಗಳ ಸಾಧನೆಯನ್ನು ನಾಡಿನ ಎಲ್ಲರಿಗೂ ತಿಳಿಸುವ ಕಾರ್ಯ ತ್ವರಿತವಾಗಿ ಆಗಬೇಕು ಎಂದ ಅವರು ಗಾಂಧೀಜಿಯವರೂ ಕೂಡ ನಾರಾಯಣಗುರುಗಳ ಪ್ರಭಾವಕ್ಕೆ ಒಳಗಾಗಿದ್ದರು ಎಂದರು.
ಕಾರ್ಯಕ್ರಮದಲ್ಲಿ ಆರ್ಯ ಈಡಿಗರ ಸಂಘದ ಅಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ, ತಹಶೀಲ್ದಾರ್ ಮಂಜೇಗೌಡ ಮುಂತಾದವರು ಉಪಸ್ಥಿತರಿದ್ದರು.