ಬಿಜೆಪಿ ಜಿಲ್ಲಾ ಉಸ್ತುವಾರಿಯಾಗಿ ವಿ. ಸೋಮಣ್ಣ ನೇಮಕ : ಸಿ. ಗುರುಸ್ವಾಮಿ ಅಭಿನಂದನೆ
ಚಾಮರಾಜನಗರ, ಸೆ. 12: ರಾಜ್ಯ ಬಿಜೆಪಿ ಉಪಾಧ್ಯಕ್ಷರು ಹಾಗೂ ಚಾಮರಾಜನಗರ ಜಿಲ್ಲಾ ಬಿಜೆಪಿ ಉಸ್ತುವಾರಿಯಾಗಿ ಮಾಜಿ ಸಚಿವ ವಿ. ಸೋಮಣ್ಣ ಅವರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಂದು ಮಧ್ಯಾಹ್ನ ಆದೇಶ ಹೊರಡಿಸಿದ್ಧಾರೆ. ವಿಚಾರ ತಿಳಿದು ಬೆಂಗಳೂರಿನಲ್ಲಿ ಇದ್ದ ಮಾಜಿ ಶಾಸಕ ಸಿ. ಗುರುಸ್ವಾಮಿ ಮತ್ತು ಸ್ನೇಹಿತರು ಸೋಮಣ್ಣ ಅವರ ನಿವಾಸಕ್ಕೆ ತೆರಳಿಕ್ಕೆ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು .
ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್. ಯಡಿಯೂರಪ್ಪ ಅವರು ಜಿಲ್ಲಾ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿಯೇ ವಿ. ಸೋಮಣ್ಣ ಅವರಿಗೆ ಜಿಲ್ಲೆಯ ಉಸ್ತುವಾರಿ ನೋಡಿಕೊಳ್ಳುವಂತೆ ಬಹಿರಂಗ ಸಭೆಯಲ್ಲಿ ಸೂಚನೆ ನೀಡಿದ್ದರು. ಬಳಿಕ ರಾಜ್ಯ ಬಿಜೆಪಿಯಲ್ಲಿ ಪ್ರಮುಖವಾದ ರಾಜ್ಯ ಉಪಾಧ್ಯಕ್ಷ ಸ್ಥಾನವನ್ನು ನೀಡುವ ಮೂಲಕ ಜಿಲ್ಲೆಯ ಬಿಜೆಪಿ ಉಸ್ತುವಾರಿಯನ್ನು ವಹಿಸಿ, ಇಂದು ಅಧಿಕೃತವಾಗಿ ಪ್ರಕಟಣೆ ಹೊರಡಿಸಿದ್ದಾರೆ.
ಅಭಿನಂದನೆ : ವಿ. ಸೋಮಣ್ಣ ಅವರಿಗೆ ಜಿಲ್ಲಾ ಬಿಜೆಪಿ ಉಸ್ತುವಾರಿ ಹಾಗೂ ರಾಜ್ಯ ಉಪಾಧ್ಯಕ್ಷ ಸ್ಥಾನ ದೊರೆತ ಹಿನ್ನೆಲೆಯಲ್ಲಿ ಬೆಂಗಳೂರಿನ ಸೋಮಣ್ಣ ಅವರಿಗೆ ನಿವಾಸಕ್ಕೆ ಮಾಜಿ ಶಾಸಕ ಸಿ. ಗುರುಸ್ವಾಮಿ ಮತ್ತು ಸ್ನೇಹಿತರು ತೆರಳಿ ಪುಷ್ಪಗುಚ್ಚ ನೀಡಿ ಅಭಿನಂದಿಸಿದರು. ರಾಜ್ಯಾಧ್ಯಕ್ಷರಾದ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯ ಉಪಾಧ್ಯಕ್ಷ ಸ್ಥಾನ ಹಾಗೂ ಜಿಲ್ಲೆಯ ಉಸ್ತುವಾರಿಯನ್ನು ವಹಿಸುವ ಮೂಲಕ ಪಕ್ಷದ ಸಂಘಟನೆ ಮತ್ತು ಜಿಲ್ಲೆಯಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುವ ಚಿಂತನೆ ಮಾಡಿರುವುದು ಸ್ವಾಗತಾರ್ಹ ಎಂದು ಅಭಿನಂದಿಸಿದರು.
ಚಾ.ನಗರ ಜಿಲ್ಲೆಯ ಬಗ್ಗೆ ಅಪಾರ ಕಾಳಜಿ ಹೊಂದಿರುವ ಹಾಗೂ ಜಿಲ್ಲೆಯ ಜನರ ನಾಡಿಮಿಡಿತವನ್ನು ಬಲ್ಲ ಸಂಘಟನಾ ಚತುರರು ಸಮರ್ಥರು ಆದ ಜಿಲ್ಲೆಯ ಅಭಿವೃದ್ದಿಗೆ ನಾಂಧಿ ಹಾಡಿದ್ದ ಸೋಮಣ್ಣ ಅವರನ್ನು ನೇಮಕ ಮಾಡಿರುವುದನ್ನು ಸಮಂಜವಾಗಿದೆ. ಕಳೆದ ಜಿ.ಪಂ. ಹಾಗೂ ತಾ.ಪಂ ಚುನಾವಣೆಯ ಉಸ್ತುವಾರಿಯನ್ನು ಸಮರ್ಥವಾಗಿ ನಿಭಾಯಿಸಿ ಚಾ.ನಗರ ತಾಲೂಕು ಪಂಚಾಯತ್ ನಲ್ಲಿ ಬಹುಮತ ಹಾಗು ಜಿಲ್ಲಾ ಪಂಚಾಯಿತಿಯಲ್ಲಿ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳುವಲ್ಲಿ ಸೋಮಣ್ಣ ಶ್ರಮವಹಿಸಿದ್ದರು. ಹೀಗಾಗಿ ಮುಂಬರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಸೋಮಣ್ಣ ಅವರ ನೇಮಕ ಸೂಕ್ತವಾದ ನಿರ್ಧಾರವಾಗಿದೆ ಎಂದು ಗುರುಸ್ವಾಮಿ ರಾಜ್ಯಾಧ್ಯಕ್ಷರು ಹಾಗೂ ಸೋಮಣ್ಣ ಅವರನ್ನು ಸ್ವಾಗತಿಸಿದ್ಧಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಬಿಲ್ವ ಮಹೇಶ್, ಆಲಹಳ್ಳಿ ಚಂದನ್ ಇತರರು ಇದ್ದಾರೆ.